ಕಲ್ಯಾಣ ಕೇಂದ್ರಿತ ಕಾನೂನುಗಳ ಹೊಸಯುಗ ಶುರು: ಮಂಜುನಾಥ ನಾಯಕ್

| Published : Jun 08 2024, 12:37 AM IST

ಕಲ್ಯಾಣ ಕೇಂದ್ರಿತ ಕಾನೂನುಗಳ ಹೊಸಯುಗ ಶುರು: ಮಂಜುನಾಥ ನಾಯಕ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ ಮಸೂದೆಗಳು ಈ ವರ್ಷ ಜುಲೈ1ರಿಂದ ಅನುಷ್ಠಾನಗೊಳ್ಳುತ್ತಿದೆ. ನ್ಯಾಯಾಲಯದಲ್ಲಿ ತ್ವರಿತವಾಗಿ ಪ್ರಕರಣಗಳ ಇತ್ಯರ್ಥವಾಗುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ ಎಂಬ ಆಪಾದನೆಗಳಿವೆ. ಅಂತಹ ಆಪಾದನೆಗಳ ಹೊಗಲಾಡಿಸುವಲ್ಲಿ ಹೊಸ ಮಸೂದೆಗಳು ಪರಿಣಾಮಕಾರಿಯಾಗಿ ನಿಲ್ಲಲಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಸಾಹತುಶಾಹಿ ಯುಗದ ಕಾನೂನುಗಳ ಅಂತ್ಯಗೊಳಿಸಿ, ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಕೇಂದ್ರಿತ ಕಾನೂನುಗಳೊಂದಿಗೆ ಹೊಸ ಯುಗ ಪ್ರಾರಂಭವಾಗುತ್ತಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಅಭಿಪ್ರಾಯಪಟ್ಟರು.

ನಗರದ ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ವತಿಯಿಂದ ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಚಂದನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ''''''''ಕ್ರಿಮಿನಲ್ ಅಪರಾಧ ಪ್ರಕರಣಗಳ ಹೊಸ ಪ್ರಮುಖ ಕಾಯ್ದೆಗಳು : ಬದಲಾವಣೆಗಳು'''''''' ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ ಮಸೂದೆಗಳು ಈ ವರ್ಷ ಜುಲೈ1ರಿಂದ ಅನುಷ್ಠಾನಗೊಳ್ಳುತ್ತಿದೆ. ನ್ಯಾಯಾಲಯದಲ್ಲಿ ತ್ವರಿತವಾಗಿ ಪ್ರಕರಣಗಳ ಇತ್ಯರ್ಥವಾಗುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ ಎಂಬ ಆಪಾದನೆಗಳಿವೆ. ಅಂತಹ ಆಪಾದನೆಗಳ ಹೊಗಲಾಡಿಸುವಲ್ಲಿ ಹೊಸ ಮಸೂದೆಗಳು ಪರಿಣಾಮಕಾರಿಯಾಗಿ ನಿಲ್ಲಲಿದೆ. ಈ ಕಾಯ್ದೆ ಮೂಲಕ ಪೊಲೀಸರ ತನಿಖೆಯ ಕ್ರಮಾವಳಿ, ಪ್ರಥಮ ತನಿಖಾ ವರದಿ, ಸಾಕ್ಷ್ಯಾಧಾರಗಳ ಸಂಗ್ರಹ, ಪ್ರಕರಣಗಳ ಶೀಘ್ರ ಇತ್ಯರ್ಥ ಸೇರಿ ನಮ್ಮ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗಳ ಆಧುನಿಕ ಯುಗಕ್ಕೆ ತಕ್ಕಂತೆ ನಾವೀನ್ಯತೆಯೊಂದಿಗೆ ರೂಪಗೊಳಿಸಲಾಗಿದೆ. ಇಲ್ಲಿಯವರೆಗೆ ಕೆಲಸ ಮಾಡುತ್ತಿದ್ದ ವಕೀಲರು, ಪೊಲೀಸರು, ಸಾರ್ವಜನಿಕರು ಹೊಸತನಕ್ಕೆ ಹೇಗೆ ಒಗ್ಗಿಕೊಳ್ಳುತ್ತಾರೆ ಎಂಬ ಕುತೂಹಲವಿದೆ ಎಂದರು.ನೂತನ ಕಾಯ್ದೆಗಳ ಕುರಿತಾಗಿ ನಿವೃತ್ತ ಸರ್ಕಾರಿ ಅಭಿಯೋಜಕ ಎಚ್.ಡಿ.ಆನಂದಕುಮಾರ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ರಕ್ತಹೀನತೆಯಿಂದ ಬಳಲುತ್ತಿದೆ, ಅದಕ್ಕೆ ಹೊಸ ರಕ್ತಬೇಕಿದೆ ಎಂಬ ಚರ್ಚೆ ಅನೇಕ ವರ್ಷಗಳಿಂದ ಕೇಳಿ ಬರುತ್ತಿತ್ತು. ಅಂತಹ ಚರ್ಚೆಗೆ ಇದೀಗ ಅದ್ಭುತ ಸ್ಪಂದನೆ ಸಿಕ್ಕಿದೆ.ಶಿಕ್ಷೆಯಿಂದ ವ್ಯಕ್ತಿ ಬದಲಾಯಿಸುವುದಕ್ಕಿಂತ ಉತ್ತಮ ಚಿಂತನೆಗಳಿಂದ ವ್ಯಕ್ತಿತ್ವ ಬದಲಾಯಿಸುವ ಮುಖ್ಯ ಉದ್ದೇಶ ಹೊಸ ಕಾಯ್ದೆಗಿದೆ ಎಂದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್‌, ನಿರ್ದೇಶಕರಾದ ಅನಂತದತ್ತ, ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ಎಸ್.ಕಾಂತರಾಜ್‌, ಶಿರಸಿ ಎಂಇಎಸ್‌ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಮತ್‌ ಅಡಿಗ, ವಕೀಲರಾದ ಕೆ.ಕೃಷ್ಣರಾವ್‌, ಕಾರ್ಯಕ್ರಮ ಸಂಯೋಜಕರಾದ ಡಾ.ಎ.ಎನ್.ಆದರ್ಶ, ಶ್ರೀಲಕ್ಷ್ಮೀ ಸೇರಿ ಮತ್ತಿತರರಿದ್ದರು.ಬಲಿಷ್ಠ ಕಾಯ್ದೆ

ಪ್ರತಿಯೊಬ್ಬ ನಾಗರಿಕರಿಗೆ ನ್ಯಾಯದ ಸ್ಪರ್ಶ ನೀಡುವಲ್ಲಿ ನ್ಯಾಯ ಸಂಹಿತೆ ಕಾಯ್ದೆಯಿಂದ ಸಾಧ್ಯವಾಗಲಿದೆ. ಭಾರತದಿಂದ ಹೊರಗಿದ್ದು, ದೇಶದ ಒಳಗಿನ ಅಪರಾಧ ಪ್ರಕರಣಗಳಿಗೆ ಭಾಗಿಯಾಗುವ ಅಪರಾಧಿಗಳ ಭಾರತೀಯ ಕಾನೂನು ವ್ಯಾಪ್ತಿಗೆ ತರುವಂತಹ ಬಲಿಷ್ಠ ಕಾಯ್ದೆ ಇದಾಗಿದೆ. ನ್ಯಾಯ ಸಂಹಿತೆ ಕಾಯ್ದೆಯಲ್ಲಿ 511 ಸೆಕ್ಷನ್‌ ಗಳಿಂದ 358 ಸೆಕ್ಷನ್‌ ಗೆ ಇಳಿಸಲಾಗಿದೆ.

ಎಚ್.ಡಿ.ಆನಂದಕುಮಾರ್, ನಿವೃತ್ತ ಸರ್ಕಾರಿ ಅಭಿಯೋಜಕ