ಸಾರಾಂಶ
ಸಮಕಾಲೀನ ವಿದ್ಯಮಾನಗಳನ್ನು ಕಥೆ, ಕದಾಂಬರಿ, ಪ್ರಬಂಧ, ಮಕ್ಕಳ ಸಾಹಿತ್ಯಗಳ ಮೂಲಕ ವೈವಿದ್ಯಮಯವಾದ ಸಾಹಿತ್ಯ ಕೃಷಿ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿದ ಮುಕ್ತಮನದ ಸಾಹಿತಿ ನಾ. ಡಿಸೋಜ ಎಂದು ನಗರದ ಎಸ್ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸಮಕಾಲೀನ ವಿದ್ಯಮಾನಗಳನ್ನು ಕಥೆ, ಕದಾಂಬರಿ, ಪ್ರಬಂಧ, ಮಕ್ಕಳ ಸಾಹಿತ್ಯಗಳ ಮೂಲಕ ವೈವಿದ್ಯಮಯವಾದ ಸಾಹಿತ್ಯ ಕೃಷಿ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿದ ಮುಕ್ತಮನದ ಸಾಹಿತಿ ನಾ. ಡಿಸೋಜ ಎಂದು ನಗರದ ಎಸ್ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ತಿಳಿಸಿದರು. ನಗರದ ಎಸ್.ವಿ.ಪಿ. ಕಾಲೇಜಿನಲ್ಲಿ ಹಿರಿಯ ಸಾಹಿತಿ ನಾ.ಡಿಸೋಜರವರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾ.ಡಿಸೋಜ ಮಲೆನಾಡಿನ ಪ್ರಾಕೃತಿಕ ಸಂಪತ್ತನ್ನು ಅಗಾಧವಾಗಿ ಪ್ರೀತಿಸುತ್ತಿದ್ದವರು. ಅದನ್ನು ನಾಗರಿಕರೆಂದು ಕರೆಸಿಕೊಳ್ಳುವ ಜನರು ಹಾಳು ಮಾಡಿದ್ದರಿಂದಲೇ ಪ್ರಕೃತಿ ವಿಕೋಪಗಳು ಉಂಟಾಗಲು ಕಾರಣವಾಯಿತು. ರೈತರು ಬೆಳೆಯುತ್ತಿದ್ದ ಕೃಷಿ ಭೂಮಿಯನ್ನು ಪರಿವರ್ತನೆ ಮಾಡಿ ಕಾರ್ಖಾನೆಗಳನ್ನು ಕಟ್ಟಿದ್ದರಿಂದಲೇ ರೈತರು ಕಾರ್ಖಾನೆಯ ಕಾವಗಾವಲುಗಾರನನ್ನಾಗಿ ಮಾಡಿದ್ದು ಎಂದು ತಮ್ಮ ಬರವಣಿಗೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಬರವಣಿಗೆಗಳ ಜೊತೆಗೆ ಬೀದಿಗಿಳಿದು ಚಳುವಳಿಗಳನ್ನು ನಡೆಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದರು. ಜಾತಿಗಿಂತ ಸಮುದಾಯದ ಪ್ರಜ್ಞೆಯನ್ನು ಇರಿಸಿಕೊಂಡು ದ್ವೀಪ, ಕಾಡಿನ ಬೆಂಕಿ ಕಾದಂಬರಿಗಳನ್ನು ಬರೆದು ಸಿನಿಮಾ ರೂಪಕ್ಕೆ ಕಥಾ ಸಾಹಿತ್ಯವನ್ನು ಒದಗಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಯಾವುದೇ ಪ್ರಶಸ್ತಿ ಗೌರವಗಳಿಗಾಗಿ ಸಾಹಿತ್ಯದ ರಚನೆ ಮಾಡದೆ ಸೃಜನಶೀಲ ಸ್ವಭಾವದ ಪ್ರಜ್ಞಾವಂತಿಕೆಯಿಂದ ಸಾಹಿತ್ಯ ರಚಿಸಿದರು. ಜಿ.ಎಸ್.ಶಿವರುದ್ರಪ್ಪ, ಗೊರೂರು ರಾಮಸ್ವಾಮಿ ಅಯ್ಯಂಗಾರ್ರವರ ಪ್ರಭಾವಗಳಿಗೆ ಒಳಗಾಗಿ ನೂರಾರು ಕಾದಂಬರಿ ರಚಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಅಡಂಬರ ರಹಿತ ಜೀವನ ಶೈಲಿ, ಮಿತಭಾಷಿ, ಸರಳ ವ್ಯಕ್ತಿತ್ವದ ಪ್ರಬುದ್ಧ ಲೇಖಕರಾದ ನಾ.ಡಿಸೋಜರವರು ಎಸ್.ವಿ.ಪಿ. ಶಿಕ್ಷಣ ಸಂಸ್ಥೆಗೆ ಎಂಟು ವರ್ಷಗಳ ಹಿಂದೆ ಅವರದೇ ಸಾಹಿತ್ಯ ಕುರಿತ ವಿಚಾರ ಸಂಕಿರಣದ ಉದ್ಘಾಟನೆಗೆ ಆಗಮಿಸಿ, ಸಾಹಿತ್ಯದ ರಸದೌತಣ ನೀಡಿದ್ದು ಕಲ್ಪತರು ನಾಡಿನ ಭಾಗ್ಯವೇ ಸರಿ ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಎಸ್.ವಿ.ಪಿ. ಮತ್ತು ಸುಮತಿ ಶಿಕ್ಷಣ ಸಂಸ್ಥೆಗಳ ಬೋಧಕ ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಮೌನಾಚರಣೆ ಸಲ್ಲಿಸಿದರು.