ಸಾರಾಂಶ
ಎಂಎಸ್ಇಝಡ್ನಲ್ಲಿ ಜಾಗ ಕಳೆದುಕೊಂಡ ಕುಟುಂಬಗಳನ್ನು ಜಿಎಂಪಿಎಲ್ನಲ್ಲಿ ಭರ್ತಿ ಮಾಡುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಆರ್ಥಿಕ ವಲಯ(ಎಸ್ಇಝಡ್)ದಲ್ಲಿ ಜೆಬಿಎಫ್ ಪೆಟ್ರೊಕೆಮಿಕಲ್ಸ್ ಮತ್ತು ಗೇಲ್ನ ವಿಲೀನದಿಂದ ಎಸ್ಇಝಡ್ ಜಾಗ ಕಳೆದುಕೊಂಡ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬುಧವಾರ ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.ಜೆಬಿಎಫ್ ಪೆಟ್ರೋಕೆಮಿಕಲ್ಸ್ ಮತ್ತು ಗೇಲ್ ವಿಲೀನದ ಸಮಸ್ಯೆಗಳ ಕುರಿತು ಚರ್ಚೆ ನಡೆಸುವಂತೆ ಸಂಸದರು ಮಾಡಿದ ಮನವಿಯ ಮೇರೆಗೆ ಸಚಿವರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪೆಟ್ರೋಲಿಯಂ ಕಾರ್ಯದರ್ಶಿ ಪಂಕಜ್ ಜೈನ್, ಗೇಲ್ ಸಿಎಂಡಿ ಸಂದೀಪ್ ಗುಪ್ತಾ ಮತ್ತು ಜಿಎಂಪಿಎಲ್ ಸಿಎಂಡಿ ಆಯುಷ್ ಗುಪ್ತಾ ಇದ್ದರು.
ಎಂಎಸ್ಇಝಡ್ನಲ್ಲಿ ಜಾಗ ಕಳೆದುಕೊಂಡ ಕುಟುಂಬಗಳನ್ನು ಜಿಎಂಪಿಎಲ್ನಲ್ಲಿ ಭರ್ತಿ ಮಾಡುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.ಈ ಸಮಸ್ಯೆಗೆ ಪೂರಕವಾಗಿ ಮೊದಲ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದರು ಈ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಸಚಿವ ಡಾ. ಜೀತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದರು. ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಿದ್ದು, ನಿರಂತರ ಪ್ರಯತ್ನ ಸಂತ್ರಸ್ತ ಕುಟುಂಬಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.