ಸಾರಾಂಶ
ಶಿರಸಿ: ಯಾದಗಿರಿಯ ಪಿಎಸ್ಐ ಪರಶುರಾಮ ಸಾವಿಗೆ ನ್ಯಾಯ ಒದಗಿಸಲು ಮತ್ತು ಯಾದಗಿರಿ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಭೀಮ ಘರ್ಜನೆ ಸಂಘಟನೆಯಿಂದ ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಯಾದಗಿರಿಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಪರಶುರಾಮ್ ಸಂಶಯಾಸ್ಪದವಾಗಿ ಒತ್ತಡದಿಂದ ಸಾವಿಗೀಡಾಗಿದ್ದು, ಈ ಸಾವಿಗೆ ಯಾದಗಿರಿ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಮಗ ಕಾರಣವೆಂದು ಮೃತ ಪರಶುರಾಮ ಅವರ ಪತ್ನಿ ಮತ್ತು ಸಂಬಂಧಿಕರು ಆರೋಪಿಸಿದ್ದಾರೆ.
ಸ್ವಾತಂತ್ರ್ಯ ಬಂದು ೭೮ ವರ್ಷ ಕಳೆದರೂ ದೇಶದಲ್ಲಿ ಜಾತಿ ವ್ಯವಸ್ಥೆ ರಾಜಾರೋಷವಾಗಿ ನಡೆಯುತ್ತಿದ್ದು, ಕೇವಲ ದಲಿತ ಜಾತಿಗೆ ಸೇರಿರುವ ಎನ್ನುವ ಕಾರಣಕ್ಕೆ ಪಿಎಸ್ಐ ಪರಶುರಾಮ ಮೇಲೆ ಒತ್ತಡ ಹೇರಿ ಅವರ ಸಾವಿಗೆ ಕಾರಣರಾಗಿರುವ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಮಗನ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಗ್ರೇಡ್- ೨ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಮನವಿ ಸ್ವೀಕರಿಸಿ, ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು.ಮನವಿ ಸಲ್ಲಿಸುವ ವೇಳೆ ಭೀಮ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ, ತಾಲೂಕಾಧ್ಯಕ್ಷ ಪುನೀತ್ ಮರಾಠೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ ಜೋಗಳೇಕರ, ತಾಲೂಕು ಉಪಾಧ್ಯಕ್ಷ ಶ್ಯಾಮ್ ದೇಶಭಾಗ, ಜಿಲ್ಲಾ ಉಪಾಧ್ಯಕ್ಷ ತಿಲಕ ಹುಬ್ಬಳ್ಳಿ ಇದ್ದರು.