ಸಾರಾಂಶ
ಹಳಿಯಾಳ: ಮುಂಡಗೋಡದಲ್ಲಿ ಸೆ.13ರಂದು ಆಗಮಿಸಲಿರುವ ಬಸವ ಸಂಸ್ಕೃತಿ ಅಭಿಯಾನದ ಕುರಿತು ಜಾಗೃತೆ ಮೂಡಿಸಲು ಹಾಗೂ ತಾಲೂಕಿನವರಿಗೆ ಆಹ್ವಾನ ನೀಡುವ ಉದ್ದೇಶದಿಂದ ವಿಶೇಷ ಸಭೆಯು ಹಳಿಯಾಳದಲ್ಲಿ ಮಂಗಳವಾರ ನಡೆಯಿತು.ಪಟ್ಟಣದ ಶ್ರೀಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷ ವಿ.ಎಸ್.ಪಾಟೀಲ, ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತ ನಾಡಿನಾದ್ಯಂತ ಭಿತ್ತರಿಸಲು ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ರಾಜ್ಯಾಧ್ಯಂತ ಪ್ರತಿದಿನ ಜಿಲ್ಲಾ ಕೇಂದ್ರಗಳಲ್ಲಿ ಬಸವ ಸಂಸ್ಕೃತಿ ಅಭಿಯಾನವು ಸೆ.1ರಿಂದ ಬಸವನ ಬಾಗೇವಾಡಿಯಿಂದ ಪ್ರಾರಂಭವಾಗಿದೆ. ಜಿಲ್ಲೆಗೆ ಸೆ.13ರಂದು ಮುಂಡಗೋಡಿಗೆ ಆಗಮಿಸಲಿದೆ. ಈ ಅಭಿಯಾನದ ನಿಮಿತ್ತ್ಯ ನಡೆಯುವ ಸಮಾವೇಶದ ನೇತೃತ್ವವನ್ನು ಅತ್ತಿವೇರಿಯ ಬಸವಧಾಮದ ಮಾತೆ ಬಸವೇಶ್ವರಿ ತಾಯಿಯವರು ವಹಿಸಲಿದ್ದಾರೆ ಎಂದು ತಿಳಿಸಿದರು.ಸಭೆಯ ಸಾನಿಧ್ಯ ವಹಿಸಿದ ಅತ್ತಿವೇರಿಯ ಬಸವದಾಮದ ಮಾತೆ ಬಸವೇಶ್ವರಿ ತಾಯಿ ಮಾತನಾಡಿ, ಅಭಿಯಾನದ ಜೊತೆಯಲ್ಲಿ ನಾಡಿನೆಲ್ಲೆಡೆಯಿಂದ ಮಠಾಧೀಶರು, ಚಿಂತಕರು, ವಾಗ್ಮಿಗಳು ಆಗಮಿಸಲಿದ್ದಾರೆ. ಬಸವಣ್ಣನವರ ಸಂದೇಶಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಮಾವೇಶದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಬಸವರಾಜ ಓಶೀಮಠ, ಹಿರಿಯ ಪತ್ರಕರ್ತ ಬಸವರಾಜ ಪಾಟೀಲ, ಶ್ರೀಶೈಲ ಐನಾಪುರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವದೇವ ದೇಸಾಯಸ್ವಾಮಿ, ಪ್ರಮುಖರಾದ ಎಮ್.ಬಿ.ತೋರಣಗಟ್ಟಿ, ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಶಿವು ಶೆಟ್ಟರ, ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಸುಮಿತ್ರ ಓಶೀಮಠ, ಉಳವಿ ಟ್ರಸ್ಟ್ ಪ್ರಮುಖರಾದ ಪ್ರಕಾಶ ಕಿತ್ತೂರ, ಮುಕ್ತಾಯಕ್ಕನ ಬಳಗದ ಅಧ್ಯಕ್ಷರು, ಸದಸ್ಯರು, ವಿ.ಎಂ.ಹಳ್ಳಿ, ಶಿವಾನಂದ ನೇಸರಗಿ ಹಾಗೂ ಇತರರು ಇದ್ದರು.ಹಳಿಯಾಳದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಕುರಿತು ವಿಶೇಷ ಸಭೆ ನಡೆಯಿತು.