ಸಾರಾಂಶ
ಮಳೆಗಾಲ ಪ್ರಾರಂಭ ಆಗಿರುವುದರಿಂದ ಮನೆಯ ಹೊರಾಂಗಣ ತಾಣ ಮತ್ತು ಘನತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ನಿಂತುಕೊಂಡು ಲಾರ್ವ ಹುಳಗಳು ಉತ್ಪತ್ತಿಯಾಗಿ, ಸೊಳ್ಳೆಗಳು ಹೆಚ್ಚಾಗಬಲ್ಲವು. ಇದರಿಂದ ಡೆಂಘೀಜ್ವರ ಪ್ರಕರಣಗಳು ಕಂಡುಬರುವ ಸಾಧ್ಯತೆ ಇರುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಅಬ್ದುಲ್ ಖಾದರ್ ಹರಿಹರದಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಹರಿಹರ
ಮಳೆಗಾಲ ಪ್ರಾರಂಭ ಆಗಿರುವುದರಿಂದ ಮನೆಯ ಹೊರಾಂಗಣ ತಾಣ ಮತ್ತು ಘನತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ನಿಂತುಕೊಂಡು ಲಾರ್ವ ಹುಳಗಳು ಉತ್ಪತ್ತಿಯಾಗಿ, ಸೊಳ್ಳೆಗಳು ಹೆಚ್ಚಾಗಬಲ್ಲವು. ಇದರಿಂದ ಡೆಂಘೀಜ್ವರ ಪ್ರಕರಣಗಳು ಕಂಡುಬರುವ ಸಾಧ್ಯತೆ ಇರುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಅಬ್ದುಲ್ ಖಾದರ್ ಹೇಳಿದರು.ತಾಲೂಕಿನ ಹರಗನಹಳ್ಳಿ ಗ್ರಾಮದಲ್ಲಿ ಡೆಂಘೀಜ್ವರ ಪ್ರಕರಣ ಕಂಡುಬಂದ ಹಿನ್ನೆಲೆ ವಿಶೇಷ ಲಾರ್ವ ಸಮೀಕ್ಷೆ ನಡೆಸಿದ ನಂತರ ರಾಷ್ಟ್ರೀಯ ಡೆಂಘೀ ವಿರೋಧಿ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಡೆಂಘೀಜ್ವರ ನಿಯಂತ್ರಣ ಎಲ್ಲರ ಆದ್ಯತೆ ಆಗಬೇಕು. ಪ್ರಸ್ತುತ ಮಳೆಗಾಲ ಆಗಿರುವುದರಿಂದ ಮನೆ, ಕಟ್ಟಡಗಳ ಆವರಣ, ಸುತ್ತ ಹಾಗೂ ಘನತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ಸಂಗ್ರಹವಾಗಿದ್ದರೆ ಅಲ್ಲಿ ಹುಳಗಳು ಉತ್ಪತ್ತಿಯಾಗುತ್ತವೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಡೆಂಘೀಜ್ವರ ಪ್ರಕರಣಗಳು ಕಂಡುಬರುತ್ತವೆ. ಡೆಂಘೀ ನಿಯಂತ್ರಿಸಲು ನೀರು ಸಂಗ್ರಹ ತೊಟ್ಟಿ, ಪಾತ್ರೆಗಳನ್ನು ಆಗಾಗ ಸ್ವಚ್ಛಗೊಳಿಸಿ ಬಳಸಬೇಕು. ಜ್ವರ ಇನ್ನಿತರೆ ಕಾಯಿಲೆ ಕಂಡುಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬೇಕು. ಅಗತ್ಯವಿದ್ದಲ್ಲಿ ರಕ್ತ ಪರೀಕ್ಷೆಯನ್ನೂ ಮಾಡಿಸಬೇಕು. ಸೊಳ್ಳೆ ಪರದೆ ಬಳಸುವುದು, ಸೊಳ್ಳೆ ನಿವಾರಕ ಔಷಧಿಗಳನ್ನು ಬಳಸಿದಲ್ಲಿ ಡೆಂಘೀಜ್ವರದಿಂದ ಪಾರಾಗಬಹುದು ಎಂದು ತಿಳಿಸಿದರು.ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮಣ್ಣ ಲಾರ್ವ ಸಮೀಕ್ಷೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿದರು. ಅಡ್ಡ ಪರಿಶೀಲನೆ ನಡೆಸಿ, ಲಾರ್ವ ಕಂಡುಬಂದ ಸ್ಥಳಗಳನ್ನು ಖಾಲಿ ಮಾಡಿಸುವ ಮೂಲಕ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜಪ್ಪ, ತಾಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಆರೋಗ್ಯ ಇಲಾಖೆ ಸಿಬ್ಬಂದಿ ಅಜ್ಮತ್, ಶೃತಿ, ಮಂಗಳಾ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.- - - -೨೦ಎಚ್ಆರ್ಆರ್೨:
ಹರಿಹರ ತಾಲೂಕಿನ ಹರಗನಹಳ್ಳಿಯಲ್ಲಿ ಡೆಂಘೀಜ್ವರ ಪ್ರಕರಣ ಕಂಡುಬಂದ ಹಿನ್ನೆಲೆ ವಿಶೇಷ ಲಾರ್ವ ಸಮೀಕ್ಷೆ ನಡೆಸಿ, ಜಾಗೃತಿ ಮೂಡಿಸಲಾಯಿತು.