ಬನ್ನೇರುಘಟ್ಟ: ಸಫಾರಿ ವೇಳೆಯಲ್ಲಿ ವಾಹನದ ಮೇಲೆ ಸಾಕಾನೆಯೊಂದು ದಾಳಿ ನಡೆಸಿ ವಾಹನದ ಸೈಡ್ ಮಿರರ್ ಗಾಜು ಪುಡಿ ಪುಡಿಯಾಗಿಸಿದ ಘಟನೆ ನಡೆದಿದೆ.
ಸಾಕಾನೆ ವನರಾಜ ಸಫಾರಿ ವಾಹನದ ಮೇಲೆ ಏಕಾಏಕಿ ನುಗ್ಗಿ ದಾಳಿ
ಬನ್ನೇರುಘಟ್ಟ ಜೈವಿಕ ಉದ್ಯಾನದ ಸಾಕಾನೆ ವನರಾಜ ಸಫಾರಿ ವಾಹನದ ಮೇಲೆ ಏಕಾಏಕಿ ನುಗ್ಗಿದೆ. ಪ್ರವಾಸಿಗರು ಇದರಿಂದ ಆತಂಕಕ್ಕೀಡಾಗಿ ಕಿರುಚಾಡುತ್ತಿದ್ದಂತೆ ಸೊಂಡಿಲಿನಿಂದ ವಾಹನದ ಸೈಡ್ ಮಿರರ್ ಅನ್ನು ಹೊಡೆದು ಹಾಕಿ ತೆರಳಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ತಾಯಿಯಿಂದ ದೂರವಾಗಿ 8 ತಿಂಗಳ ಮರಿಯಾಗಿದ್ದಾಗ ಬಂಡೀಪುರ ಅರಣ್ಯದಿಂದ ರಕ್ಷಣೆ ಮಾಡಿ ಕರೆತರಲಾಗಿತ್ತು. ಚಿಕ್ಕಂದಿನಿಂದಲೇ ಬನ್ನೇರುಘಟ್ಟದಲ್ಲಿಯೇ ಬೆಳೆದಿರುವ ವನರಾಜ ರೌಡಿ ರಂಗ ಎಂಬ ಪುಂಡಾನೆಯ ಜೊತೆ ಸೆಣಸಾಟ ನಡೆಸಿ ಹಿಮ್ಮೆಟ್ಟಿಸಿದ್ದ.
48 ವರ್ಷದ ಸಾಕಾನೆ ವನರಾಜ
ಬನ್ನೇರುಘಟ್ಟದಲ್ಲಿರುವ 26 ಆನೆಗಳ ಪೈಕಿ ಪಡೆಯನ್ನು ಮುನ್ನಡೆಸುವ ಕ್ಯಾಪ್ಟನ್ ಆಗಿರುವ 48 ವರ್ಷದ ಸಾಕಾನೆ ವನರಾಜನೇ ಸಫಾರಿ ವಾಹನದ ಮೇಲೆ ನಡೆಸಿದ ಈ ದಾಳಿ ಅಚ್ಚರಿಗೆ ಕಾರಣವಾಗಿದೆ. ಚಾಲಕರು ಅಜಾಗರೂಕತೆ ಪ್ರದರ್ಶಿಸಬಾರದು, ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ತಾಕೀತು ಮಾಡಲಾಗಿದೆ ಎಂದು ಬನ್ನೇರುಘಟ್ಟದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್ ತಿಳಿಸಿದ್ದಾರೆ.
-ಫೋಟೋ.. ಆನೆ ದಾಳಿಯಿಂದ ಸಫಾರಿ ವಾಹನದ ಮಿರರ್ ಹಾನಿಯಾಗಿರುವುದು.
