ಬೆಂಗಳೂರು : ರಾಜ್ಯವು ಹಲವು ವರ್ಷಗಳ ನಂತರ ಹೀಟ್ ವೇವ್ ಬಿಸಿ ಅನುಭವಿಸುತ್ತಿದೆ. ಇದರ ಪರಿಣಾಮ ಕೊಳವೆಬಾವಿ, ಅಣೆಕಟ್ಟುಗಳಲ್ಲಿ ನೀರು ಕಡಿಮೆಯಾಗಿದೆ. ಮುಂದಿನ ಎರಡು ತಿಂಗಳಲ್ಲಿ ರಾಜ್ಯ ನೀರಿನ ಸಮಸ್ಯೆ ಎದುರಿಸಬಹುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಮಟ್ಟದಲ್ಲಿ ಸಮಸ್ಯೆ ಮೇಲೆ ನಿಗಾವಹಿಸಿ ಪರಿಹಾರ ನೀಡಲು ಶಾಸಕರ ಅಧ್ಯಕ್ಷತೆಯ ಟಾಸ್ಕ್ಫೋರ್ಸ್ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ವರ್ಷಗಳ ನಂತರ ಹೀಟ್ ವೇವ್ನ ಅನುಭವ ಆಗುತ್ತಿದೆ. ಇದರಿಂದ ರಕ್ಷಣೆಗಾಗಿ ಆರೋಗ್ಯ ಇಲಾಖೆಯಿಂದ ಎಸ್ಒಪಿ ಪ್ರಕಟಿಸಲಾಗಿದೆ. ಅದರ ಜತೆಗೆ ಕೊಳವೆಬಾವಿ, ಅಣೆಕಟ್ಟುಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸಭೆ ನಡೆಸಿದ್ದಾರೆ. ನೀರಿನ ಸಮಸ್ಯೆ ಎದುರಾಗದಂತೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಸೂಚನೆ ನೀಡಿದ್ದಾರೆ ಎಂದರು.
ಹವಾಮಾನ ಏರುಪೇರಿನಿಂದ ಸಮಸ್ಯೆ ಎದುರಾಗುತ್ತದೆ. ಸಮಸ್ಯೆ ಎದುರಿಸಲು ಹಣದ ಕೊರತೆಯಿಲ್ಲ. ಆದರೆ, ಕೊಳವೆಬಾವಿ ಕೊರೆದರೂ ನೀರು ಬರಬೇಕಲ್ಲ. ಪ್ರಕೃತಿಯ ನಿಯಮವಿದು. ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ಟಾಸ್ಕ್ಫೋರ್ಸ್ ರಚನೆಯಾಗಿದ್ದು, ಪ್ರತಿ ಟಾಸ್ಕ್ಫೋರ್ಸ್ಗೂ ಶಾಸಕರು ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದರು.
ಬಿಜೆಪಿ ಬೌದ್ಧಿಕವಾಗಿ ದಿವಾಳಿ: ಪ್ರಿಯಾಂಕ್
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿಗೆ ಕೊನೇ ಸ್ಥಾನ ದೊರೆತ ವಿಚಾರಕ್ಕೆ ಬಿಜೆಪಿ-ಜೆಡಿಎಸ್ ವ್ಯಂಗ್ಯವಾಡಿರುವ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ-ಜೆಡಿಎಸ್ ಬೌದ್ಧಿಕವಾಗಿ ದಿವಾಳಿಯಾಗಿವೆ. ಯಡಿಯೂರಪ್ಪ ಅವರು ಶಿವಮೊಗ್ಗವನ್ನು ಸಿಂಗಾಪುರ ಮಾಡಿದ್ದಾರೆಯೇ? ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯನ್ನು ಹಾಂಕಾಂಗ್ ಮಾಡಿದ್ದಾರೆಯೇ? ಕಲಬುರಗಿಯಲ್ಲಿ ಬಿಜೆಪಿ ಬೆಂಬಲಿಗರ ಮಕ್ಕಳಿಲ್ಲವೇ? ವೈಯಕ್ತಿಕವಾಗಿ ನನ್ನ ತಂದೆ, ಪತ್ನಿ ಹಾಗೂ ನನ್ನ ಬಗ್ಗೆಯೂ ಮಾತನಾಡುತ್ತಾರೆ. ವಿರೋಧ ಪಕ್ಷದವರ ಬಳಿ ಬೇರೆ ವಿಷಯವಿಲ್ಲ. ಹೀಗಾಗಿ ಈ ರೀತಿ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2 ತಿಂಗಳು ಸಮಸ್ಯೆ ಸಂಭವ
ಕೊಳವೆಬಾವಿ, ಅಣೆಕಟ್ಟುಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸಭೆ ನಡೆಸಿದ್ದಾರೆ.
- ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
- ಹವಾಮಾನ ಏರುಪೇರಿನಿಂದಾಗಿ ಹಲವು ವರ್ಷಗಳ ನಂತರ ರಾಜ್ಯದಲ್ಲಿ ಹೀಟ್ವೇವ್ ಅನುಭವ
- ನೀರಿನ ಸಂಗ್ರಹ ಕುಸಿತ. ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಈಗಾಗಲೇ ಸಿಎಂ ಸೂಚನೆ
- ಸಮಸ್ಯೆ ಎದುರಿಸಲು ಹಣದ ಕೊರತೆ ಇಲ್ಲ. ಬೋರ್ವೆಲ್ ಬಾಡಿಗೆಗೆ ಪಡೆದು ನೀರು ಪೂರೈಕೆ
- ಪ್ರತಿ ಜಿಲ್ಲೆಯಲ್ಲೂ ಟಾಸ್ಕ್ಫೋರ್ಸ್ ರಚನೆ. ಶಾಸಕರೇ ಅದಕ್ಕೆ ಅಧ್ಯಕ್ಷರು: ಸಚಿವ ಪ್ರಿಯಾಂಕ್
