ಸಾರಾಂಶ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್ ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಗೊಂದಲಗಳ ನಡುವೆ ಅಡಕೆ ಕ್ಯಾನ್ಸರ್ ಕಾರಕ ಆಗುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ಪತ್ತೆ ಹಚ್ಚಲು ಶೀಘ್ರ ಸಂಶೋಧನೆ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವಿಜ್ಞಾನಿಗಳಿಗೆ ಸೂಚಿಸಿದ್ದಾರೆ.
ನವದೆಹಲಿ: ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್ ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ( ಡಬ್ಲ್ಯೂಎಚ್ಒ) ವರದಿ ಗೊಂದಲಗಳ ನಡುವೆ ಅಡಕೆ ಕ್ಯಾನ್ಸರ್ ಕಾರಕ ಆಗುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ಪತ್ತೆ ಹಚ್ಚಲು ಶೀಘ್ರ ಸಂಶೋಧನೆ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವಿಜ್ಞಾನಿಗಳಿಗೆ ಸೂಚಿಸಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಡಕೆ ಬೆಳೆ ವಿಚಾರದಲ್ಲಿ ಉದ್ಭವಿಸಿರುವ ಗೊಂದಲಗಳ ಬಗ್ಗೆ ಚರ್ಚಿಸಲು ದೆಹಲಿಯ ಕೃಷಿ ಭವನದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದರು. ಇದರಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಪಹ್ಲಾದ್ ಜೋಶಿ , ರಾಜ್ಯ ಸಚಿವರು, ಅಡಕೆ ಬೆಳೆಯುವ ಪ್ರದೇಶಗಳ ಸಂಸದರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಅವರು, ‘ ಕರ್ನಾಟಕದಲ್ಲಿ ಅಡಕೆ ಉತ್ಪಾದನೆಯ ಬಗ್ಗೆ ಡಬ್ಲ್ಯೂಎಚ್ಒ ವರದಿ ಕೆಲವು ಗೊಂದಲಗಳನ್ನು ಸೃಷ್ಟಿಸಿದೆ. ಈ ತಪ್ಪು ಭಾವನೆಯನ್ನು ತೆಗೆದು ಹಾಕಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ವಿಜ್ಞಾನಿಗಳ ತಂಡ ಅಧ್ಯಯನ ನಡೆಸುತ್ತಿದ್ದು, ನಿಗದಿತ ಸಮಯದಲ್ಲಿ ತಮ್ಮ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದರು.
ಮುಂದುವರೆದಂತೆ ಮಾತನಾಡಿದ ಅವರು, ವಿಜ್ಞಾನಿಗಳು ಮತ್ತು ತಜ್ಞರ ತಂಡದೊಂದಿಗೆ ಕರ್ನಾಟಕಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿ ಮತ್ತು ಅಡಿಕೆ ಕೃಷಿ ಅಭಿವೃದ್ಧಿಗೆ ಮಾರ್ಗಸೂಚಿ ರೂಪಿಸುವುದಾಗಿ ಹೇಳಿದರು. ಇದೇ ಸಭೆಯಲ್ಲಿ ಅಡಕೆ ಬೆಳೆಗಾರರ ಸಮಸ್ಯೆ, ಬೆಳೆ ಹಾನಿ, ಬೆಲೆ ವ್ಯತ್ಯಾಸ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಭಾರತ ವಿಶ್ವದಲ್ಲೇ ಅತಿಹೆಚ್ಚು ಅಡಕೆ ಬೆಳೆಯುವ ದೇಶವಾಗಿದ್ದು, ಜಾಗತಿಕವಾಗಿ ಶೇ.63ರಷ್ಟು ಇಲ್ಲಿ ಬೆಳೆಯುತ್ತಾರೆ. ಒಟ್ಟು 14 ಲಕ್ಷ ಟನ್ ಬೆಳೆಯಲಾಗುತ್ತಿದ್ದು, ಈ ಪೈಕಿ ಕರ್ನಾಟಕದ್ದೇ ಸಿಂಹಪಾಲಿದ್ದು, ಇಲ್ಲಿ 10 ಲಕ್ಷ ಟನ್ ಅಡಕೆ ಉತ್ಪಾದನೆಯಾಗುತ್ತದೆ.