ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಬುಧವಾರ ಬರ ಅಧ್ಯಯನ ಪ್ರವಾಸ ನಡೆಸಲಾಯಿತು. ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ನೇತೃತ್ವದ ತಂಡ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ, ಛಲವಾದಿ ನಾರಾಯಣ ಸ್ವಾಮಿ ನೇತೃತ್ವದ ತಂಡ ಚಾಮರಾಜನಗರ ಜಿಲ್ಲೆಯಲ್ಲಿ, ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯಲ್ಲಿ, ಮಾಜಿ ಸಚಿವ ಅರಗ ಜ್ಞಾನೇಂದ್ರ ನೇತೃತ್ವದ ತಂಡ ಹಾಸನ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಯಿತು.

ಆರ್.ಅಶೋಕ ನೇತೃತ್ವದ ತಂಡವು ದಾವಣಗೆರೆ ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೇರ್ಲಿಗೆ ಗ್ರಾಮದ ಅಡಕೆ ತೋಟಕ್ಕೆ ಭೇಟಿ ನೀಡಿ, ಜಿಲ್ಲೆಯ ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿತು. ಮಳೆ ಕೊರತೆ, ಅಂತರ್ಜಲ ಕುಸಿತದಿಂದ ಬತ್ತಿರುವ ಕೊಳವೆ ಬಾವಿಯಿಂದಾಗಿ ಫಲಕ್ಕೆ ಬಂದಿದ್ದ ಅಡಕೆ ತೋಟ ಸಂಪೂರ್ಣ ಒಣಗುತ್ತಿರುವುದನ್ನು ಗಮನಿಸಿತು. ಮಾಜಿ ಸಚಿವ ಬಸವರಾಜ ಭೈರತಿ, ಹರಿಹರ ಶಾಸಕ ಬಿ.ಪಿ.ಹರೀಶ, ಡಾ.ಚಂದ್ರು ಲಮಾಣಿ ತಂಡದಲ್ಲಿದ್ದರು. ಬಳಿಕ, ಚಿತ್ರದುರ್ಗಕ್ಕೆ ತೆರಳಿ, ಹಿರಿಯೂರು ತಾಲೂಕಿನ ಸೂರಗೊಂಡನಹಳ್ಳಿಯಲ್ಲಿ ಬರ ಅಧ್ಯಯನ ನಡೆಸಿತು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ಬೇಡರಪುರ, ಹೆಗ್ಗೋಠಾರ, ಹರವೆ, ಮೂಡ್ನಾಕೂಡು, ಕಾವುದವಾಡಿ ಸೇರಿ ಚಾಮರಾಜನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬರದ ಅಧ್ಯಯನ ನಡೆಸಿತು.

ಇದೇ ವೇಳೆ, ಮಾಜಿ ಸಚಿವ ಅರಗ ಜ್ಞಾನೇಂದ್ರ ನೇತೃತ್ವದ ತಂಡ, ಹಾಸನ ಜಿಲ್ಲೆಯ ವಿವಿಧೆಡೆ ಬರ ಅಧ್ಯಯನ ನಡೆಸಿತು. ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ನೇತೃತ್ವದ ಬರ ಅಧ್ಯಯನ ತಂಡ ರಾಯಚೂರು ಜಿಲ್ಲೆಯ ವಿವಿಧೆಡೆ ತೆರಳಿ, ಬರದಿಂದ ಹಾನಿಗೊಳಗಾದ ಬೆಳೆಗಳ ಪರಿಶೀಲನೆ ನಡೆಸಿತು.