ಸಾರಾಂಶ
ಬಿಜೆಪಿಯವರು ಅಧಿಕಾರದಿಂದ ಕೆಳಗೆ ಇಳಿಯುವಾಗ 50 ಲಕ್ಷ ಕೋಟಿ ಕೆಲಸ ಕೊಟ್ಟು ಹೋಗಿದ್ದಾರೆ. ಅದಕ್ಕೆಲ್ಲ ದುಡ್ಡು ಹೊಂದಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಚಿತ್ರದುರ್ಗ : ಬಿಜೆಪಿಯವರು ಅಧಿಕಾರದಿಂದ ಕೆಳಗೆ ಇಳಿಯುವಾಗ 50 ಲಕ್ಷ ಕೋಟಿ ಕೆಲಸ ಕೊಟ್ಟು ಹೋಗಿದ್ದಾರೆ. ಅದಕ್ಕೆಲ್ಲ ದುಡ್ಡು ಹೊಂದಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ಕಷ್ಟವಾದರೂ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ನಡೆದಿದ್ದೇವೆ. 5ವರ್ಷ ಅವಕಾಶವಿದ್ದರೂ ಬಂದಾಕ್ಷಣ ಯೋಜನೆಗಳು ಜಾರಿ ಮಾಡಿದ್ದೇವೆ. ಬಿಜೆಪಿ ಮಾಡಿಟ್ಟ ಯೋಜನೆಗಳಿಗೆ ನಾವು ಹಣ ಕೊಡಬೇಕಿದೆ. ಈ ನಡುವೆ ಸಾವಿರಾರು ಕೋಟಿ ರು. ಕೆಲಸ ನಡೆಯುತ್ತಿದೆ. ಒಂದು ವರ್ಷ ಕಷ್ಟ ಆಗುತ್ತದೆ. ಮುಂದಿನ ವರ್ಷ ಸಲೀಸಾಗಲಿದೆ ಎಂದರು. ಹಿಂದುತ್ವದ ಹೆಸರೇಳಿದರೆ ಸಿಎಂ, ಡಿಸಿಎಂಗೆ ದೆವ್ವ ಬಂದಂತೆ ಆಗುತ್ತದೆಂದು ಕೆ ಎಸ್ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಿಎಂ, ಡಿಸಿಎಂ, ನಾವೆಲ್ಲಾ ಹಿಂದೂಗಳೇ ಆಗಿದ್ದೇವೆ. ನಾವೂ ಕೂಡಾ ರಾಮನ ಭಕ್ತರೇ. ರಾಮನವಮಿಗೆ ನಾವೆಲ್ಲ ಪಾನಕ, ಕೋಸುಂಬರಿ ಹಂಚುತ್ತೇವೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಭದ್ರಾ ಯೋಜನೆಗೆ 5.300ಕೋಟಿ ಘೋಷಿಸಿ ಈವರೆಗೆ ಕೊಟ್ಟಿಲ್ಲ.
ಹಳೇ ಅನುದಾನವೇ ಕೊಟ್ಟಿಲ್ಲ, ಹಾಗಾಗಿ, ಹೊಸದನ್ನು ಕೊಡುತ್ತೆ ಎಂದು ಹೇಗೆ ನಂಬುವುದು. ಬಿಜೆಪಿ ಕೊಟ್ಟ ಮಾತನ್ನು ಯಾವತ್ತು ಉಳಿಸಿಕೊಂಡಿದೆ? ಹೇಳಿ ಎಂದು ಸುಧಾಕರ್ ಪ್ರಶ್ನಿಸಿದರು.