ಸಾರಾಂಶ
ಕೃಷ್ಣಾ ನದಿ ಪ್ರವಾಹದಿಂದ ಪ್ರತಿ ಬಾರಿ ಹಲವು ಗ್ರಾಮಗಳು ಬಾಧಿತಗೊಳ್ಳುತ್ತವೆ. ಈ ನಿಟ್ಟಿನಲ್ಲಿ ನೆರೆ ಸಂತ್ರಸ್ತರಿಗೆ ಶಾಸ್ವತ ಪರಿಹಾರ ಒದಗಿಸಲು ಬದ್ಧನಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಅಥಣಿ
ಕೃಷ್ಣಾ ನದಿ ಪ್ರವಾಹದಿಂದ ಪ್ರತಿ ಬಾರಿ ಹಲವು ಗ್ರಾಮಗಳು ಬಾಧಿತಗೊಳ್ಳುತ್ತವೆ. ಈ ನಿಟ್ಟಿನಲ್ಲಿ ನೆರೆ ಸಂತ್ರಸ್ತರಿಗೆ ಶಾಸ್ವತ ಪರಿಹಾರ ಒದಗಿಸಲು ಬದ್ಧನಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.ಸೋಮವಾರ ಸಪ್ತಸಾಗರ ಗ್ರಾಮದಲ್ಲಿ ನೆರೆ ಸಂತ್ರಸ್ತರನ್ನು ಭೇಟಿಯಾಗಿ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನೆರೆ ಹಾವಳಿಯಿಂದ ಸಂತ್ರಸ್ತರಾಗುವ ನದಿ ತೀರದ ಜನತೆಗೆ ಶಾಶ್ವತ ನೆಲೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಜಮೀನು ಇದ್ದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಧನಸಹಾಯ ಹಾಗೂ ಜಮೀನು ಇಲ್ಲದವರಿಗೆ ನಿವೇಶನ ನೀಡಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದವರು ಹೇಳಿದರು.
ಪ್ರವಾಹ ಬಂದಾಗಲೊಮ್ಮೆ ಜನ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡು ತಗ್ಗಿದ ಬಳಿಕ ಮತ್ತೆ ವಾಪಸ್ ಆಗುವುದು ನಡೆದೇ ಇದೆ. ಹೀಗಾಗಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ಮಾಡಿದ್ದಾಗಿ ಸವದಿ ಹೇಳಿದರು.ಸಪ್ತಸಾಗರ-ಸಪ್ತಸಾಗರಹಾಳ ಮಧ್ಯೆ ಸೇತುವೆ ನಿರ್ಮಾಣ ಮಾಡಿ ಬೇರೆಡೆಗೆ ಹೋಗಲು ಅವಕಾಶ ಮಾಡಿಕೊಡಲಾಗುವುದು. ಪ್ರವಾಹ ತಗ್ಗಿದ ನಂತರ ಅಧಿಕಾರಿಗಳನ್ನು ಕಳುಹಿಸಿ ಸರ್ವೆ ಮಾಡಿ ಯೋಜನೆ ರೂಪಿಸಲಾಗುವುದೆಂದು ಭರವಸೆ ನೀಡಿದರು.
ಈ ವೇಳೆ ಶಂಕರಹಟ್ಟಿ ಪಿಕೆಪಿಎಸ್ ಅಧ್ಯಕ್ಷ ರಾಜು(ಸಂಜಯ) ನಾಡಗೌಡ, ಗ್ರಾಪಂ ಅಧ್ಯಕ್ಷ ಬಸವರಾಜ ಹನಗಂಡಿ, ಶ್ರೀಶೈಲ ಹವಾಲ್ದಾರ, ಅಶೋಕ ಐಗಳಿ, ಶಿವರುದ್ರ ಘೂಳಪ್ಪನವರ, ಜಡೆಪ್ಪ ಕುಂಬಾರ, ಶಾಂತಿನಾಥ ನಂದೇಶ್ವರ, ರಮೇಶ ಪಟ್ಟಣ,ಶ್ರೀನಿವಾಸ ಪಟ್ಟಣ, ಮಹೇಂದ್ರ ಸುಲಾರೆ, ಸಚೀನ ಕಾಂಬಳೆ, ಟಿ.ಬಿ.ನದಾಫ, ಇಸ್ಮಾಯಿಲ್ ಕರಿಶಾಬು, ನೋಡಲ್ ಅಧಿಕಾರಿ ಮಹಾವೀರ ಅವಟಿ, ಪಿಡಿಒ ಕೃಷ್ಣಾ ಸತಿಗೇರಿ, ಡಾ,ರಮೇಶ ಬಸಗೌಡರ, ಪ್ರಫುಲ್ ಅವಟಿ, ಅಶೋಕ ಕೋಗಿಲೆ ಸೇರಿದಂತೆ ಅನೇಕರು ಇದ್ದರು.