ಸಾರಾಂಶ
ಮಹಾರಾಷ್ಟ್ರದಲ್ಲಿ ಚುನಾವಣೆ ಹಾಗೂ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ ಎನ್ನುವ ಕಾರಣಕ್ಕಾಗಿ ಬಿಜೆಪಿ ನಾಯಕರು ವಕ್ಫ್ ಆಸ್ತಿ ಕುರಿತು ಇಲ್ಲಸಲ್ಲದ ವದಂತಿ ಹಬ್ಬಿಸುವ ಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಆರೋಪಿಸಿದರು.
ಕಲಬುರಗಿ : ಮಹಾರಾಷ್ಟ್ರದಲ್ಲಿ ಚುನಾವಣೆ ಹಾಗೂ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ ಎನ್ನುವ ಕಾರಣಕ್ಕಾಗಿ ಬಿಜೆಪಿ ನಾಯಕರು ವಕ್ಫ್ ಆಸ್ತಿ ಕುರಿತು ಇಲ್ಲಸಲ್ಲದ ವದಂತಿ ಹಬ್ಬಿಸುವ ಯತ್ನ ಮಾಡುತ್ತಿದ್ದಾರೆ. ಹಿಂದೆ ಬೊಮ್ಮಾಯಿಯವರೇ ವಕ್ಪ್ ಸಭೆ ಮಾಡಿಲ್ವಾ?. ಅವರೇ ಇದೆಲ್ಲಾ ಅಲ್ಲಾನಾ ಆಸ್ತಿ ಎಂದಿದ್ದಾರೆ. ಇವಾಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿಯವರು ಸುಮ್ಮನೆ ನನಗೆ ಪ್ರಚಾರ ನೀಡುತ್ತಿದ್ದಾರೆ, ರಾಷ್ಟ್ರೀಯ ಮಟ್ಟದಲ್ಲಿ ಪುಕ್ಕಟ್ಟೆ ಪ್ರಚಾರ ಮಾಡ್ತಿದ್ದಾರೆ. ಹಿಂದೆ ಬೊಮ್ಮಾಯಿ ವಕ್ಪ್ ಸಭೆ ಮಾಡಿಲ್ವಾ?’ ಎನ್ನುತ್ತ ಅವರು ವಿಡಿಯೋ ತೋರಿಸಿದರು. ‘ಅವರೇ ಇದೆಲ್ಲಾ ಅಲ್ಲಾನಾ ಆಸ್ತಿ ಎಂದಿದ್ದಾರೆ. ಇವಾಗ ಉಲ್ಟಾ ಹೊಡೆಯುತ್ತಿದ್ದಾರೆ ಏನು ಮಾಡೋಣ?’ ಎಂದು ಪ್ರಶ್ನಿಸಿದರು.
ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಲು ಹೇಳಿದ್ದೇವೆ. ಈಗಾಗಲೇ ಸಿಎಂ ಸ್ಪಷ್ಟವಾದ ಆದೇಶ ನೀಡಿದ್ದಾರೆ. ರೈತರ ಜಮೀನನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುತ್ತಿಲ್ಲ. ಅವರು ನಮ್ಮ ಅನ್ನದಾತರು, ಅವರ ಜಮೀನು ತೆಗೆದುಕೊಳ್ಳೊಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ವಕ್ಫ್ ಬೋಡ್೯ ಜಮೀನು ಒತ್ತುವರಿಯಾಗಿದೆ. 90 ಪ್ರತಿಶತ ಮುಸ್ಲಿಂರೇ ವಕ್ಫ್ ಬೋರ್ಡ್ ಆಸ್ತಿ ಒತ್ತುವರಿ ಮಾಡಿದ್ದಾರೆ. ಹಿಂದೂಗಳು ಕೇವಲ 10 ಪರ್ಸೆಂಟ್ ಮಾಡಿರಬಹುದು, ಯಾರನ್ನೂ ಒಕ್ಕಲೆಬ್ಬಿಸೊ ಉದ್ದೇಶವಿಲ್ಲ ಎಂದರು.