ಕೀಳರಿಮೆಯಿಂದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಹಿಷ್ಕಾರ

| Published : Jul 16 2025, 01:30 AM IST

ಸಾರಾಂಶ

ಜಿಲ್ಲಾ ಸಚಿವ ಮಧುಬಂಗಾರಪ್ಪ ಸೇತುವೆ ಕೆಲಸದಲ್ಲಿ ತಮ್ಮದೇನು ಪಾತ್ರವಿಲ್ಲ ಎಂದು ಕಸಿವಿಸಿಯಾಗಿ ಕೀಳಿರಿಮೆಯಿಂದ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವರು, ಶಾಸಕರು ಭಾಗವಹಿಸುತ್ತೇನೆ ಎಂದು ಹೇಳಿ ಕೊನೆ ಘಳಿಗೆಯಲ್ಲಿ ಬರದೆ ಹೋದದ್ದು ವಿಧ್ವಂಸಕ ಕೃತ್ಯಕ್ಕೆ ಸಮ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದರು.

ಶಿವಮೊಗ್ಗ: ಜಿಲ್ಲಾ ಸಚಿವ ಮಧುಬಂಗಾರಪ್ಪ ಸೇತುವೆ ಕೆಲಸದಲ್ಲಿ ತಮ್ಮದೇನು ಪಾತ್ರವಿಲ್ಲ ಎಂದು ಕಸಿವಿಸಿಯಾಗಿ ಕೀಳಿರಿಮೆಯಿಂದ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವರು, ಶಾಸಕರು ಭಾಗವಹಿಸುತ್ತೇನೆ ಎಂದು ಹೇಳಿ ಕೊನೆ ಘಳಿಗೆಯಲ್ಲಿ ಬರದೆ ಹೋದದ್ದು ವಿಧ್ವಂಸಕ ಕೃತ್ಯಕ್ಕೆ ಸಮ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವರು ಯಾರನ್ನು ಕರೆಸಿ ಉದ್ಘಾಟಿಸಬೇಕಿತ್ತೋ ಅವರನ್ನು ಕರೆಸಿಕೊಂಡು ಸೇತುವೆ ಉದ್ಘಾಟನಾ ಸಮಾರಂಭವನ್ನು ಮಾಡಿಸಿದ್ದಾರೆ. ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಬಹಿಷ್ಕಾರ ಹಾಕಿ ಒಕ್ಕೂಟ ವ್ಯವಸ್ಥೆಗೆ ಅಸಹಕಾರ ಮನೋಭಾವವನ್ನು ತೋರಿದೆ ಎಂದು ದೂರಿದರು.

ಸಾಗರಕ್ಕೆ ಆಗಮಿಸಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರು ಕೊನೆಗಳಿಗೆಯಲ್ಲಿ ವಾಪಾಸ್ ಹೋಗಿದ್ದು, ಒಳ್ಳೆಯ ಬೆಳವಣಿಗೆ ಅಲ್ಲ. ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳು ಭಾಗವಹಿಸದಿರುವುದರಲ್ಲಿ ಮುಖ್ಯಮಂತ್ರಿಗಳ ಪಾತ್ರವೇನಿಲ್ಲ. ಈ ಬೆಳವಣಿಗೆಯ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರ ಪಾತ್ರವಿದೆ ಎಂದು ಟೀಕಿಸಿದರು.ಯಡಿಯೂರಪ್ಪ ಮತ್ತು ಮಕ್ಕಳು ಯಾವತ್ತೂ ಅಭಿವೃದ್ಧಿಗೆ ವಿರೋಧ ಮಾಡಿಲ್ಲ. ಸೇತುವೆ ಉದ್ಘಾಟನೆಯಲ್ಲಿ ಯಾವುದೇ ಶಿಷ್ಟಾಚಾರದ ಲೋಪ ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ವ್ಯಕ್ತಿ, ನಮ್ಮ ಪಕ್ಷ ಸಿದ್ಧಾಂತ ಏನೇ ಇದ್ದರೂ ಅವರನ್ನು ಗೌರವಿಸುತ್ತೇವೆ. ಆದರೆ, ಅವರು ಜಿಲ್ಲಾ ಮಂತ್ರಿ, ಶಾಸಕರ ಮಾತು ಕೇಳಿಕೊಂಡು ಕಾರ್ಯಕ್ರಮಕ್ಕೆ ಬಾರದೆ ಇರುವ ಸಣ್ಣ ತನ ತೋರಬಾರದಿತ್ತು ಎಂದರು.

ಹಸಿರುಮಕ್ಕಿ ಸೇತುವೆಗೆ ಬಿಜೆಪಿ ಸರ್ಕಾರದಲ್ಲಿ 50 ಕೋಟಿ ರು. ಬಿಡುಗಡೆ ಮಾಡಿದ್ದು, ಈಗ ಕಾಂಗ್ರೆಸ್ ಸರ್ಕಾರವೇ ಇದೆ. ಜಿಲ್ಲಾ ಮಂತ್ರಿ ಮಧುಬಂಗಾರಪ್ಪ ಹಣ ತಂದು ಪೂರ್ಣಗೊಳಿಸಲಿ, ಅಸಂಬದ್ಧಮಾತುಗಳನ್ನು ಬಿಟ್ಟು ಜಿಲ್ಲೆಯಲ್ಲಿ ಕೆಲಸ ಮಾಡಲಿ ಎಂದು ತಾಕೀತು ಮಾಡಿದರು.ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಏನೇನೋ ಮಾತಾಡುತ್ತಾರೆ. ಯಡಿಯೂರಪ್ಪ ಅವರ ಬಗ್ಗೆ ಒಳಗೊಂದು ಹೊರಗೊಂದು ಮಾತಾಡುತ್ತಾರೆ. ಸರ್ಕಾರದಲ್ಲಿ ಗುಂಪಿನಿಂದ ಗುಂಪಿಗೆ ಹಾರಲು ಸಿದ್ದರಾಮಯ್ಯ ಅವರನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇದು ಹಿಂದಿನಿಂದಲೂ ಅವರಿಗೆ ಬಂದಿರುವ ಚಾಳಿ ಎಂದು ವಾಗ್ದಾಳಿ ನಡೆಸಿದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವರಾಜು, ಪ್ರಮುಖರಾದ ಹರಿಕೃಷ್ಣ, ಅಣ್ಣಪ್ಪ, ಮಾಲತೇಶ ಉಪಸ್ಥಿತರಿದ್ದರು.