ಕನ್ನಡಪ್ರಭ ವಾರ್ತೆ ಬೆಂಗಳೂರು
ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗಾಧಾರಿತ ಕೌಶಲ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ವಲಯವನ್ನು ಔದ್ಯೋಗಿಕ ವಲಯದ ಸಮೀಪಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಮೇ 15, ಮೇ 16 ರಂದು ನಗರದಲ್ಲಿ ‘ಕ್ಯಾಂಪಸ್ ಟು ಕೆರಿಯರ್’ (ಸಿ2ಸಿ) ಎಂಬ ಶೃಂಗ ಸಭೆ ಆಯೋಜಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ಬುಧವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿ2ಸಿ ಶೃಂಗಸಭೆಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿ, ಖಾಸಗಿ ಹೋಟೆಲ್ನಲ್ಲಿ ನಡೆಯುವ ಶೃಂಗಸಭೆಯಲ್ಲಿ ರಾಜ್ಯದ ಪ್ರಮುಖ ಕೈಗಾರಿಕಾ ಸಂಸ್ಥೆಗಳು, ಶಿಕ್ಷಣ ತಜ್ಞರು ಹಾಗೂ ಸರ್ಕಾರದ ಅಧಿಕಾರಿಗಳು ಒಂದೆಡೆ ಸೇರಿ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಲು ಯಾವ ರೀತಿಯ ಕೌಶಲ್ಯ ಶಿಕ್ಷಣ ನೀಡಬೇಕು ಎಂಬ ಕುರಿತು ಸಮಾಲೋಚನೆ ನಡೆಸಿ ಸಲಹೆ ನೀಡಲಿದ್ದಾರೆ. ಇದಕ್ಕೆ ಅನುಗುಣವಾಗಿ ನಮ್ಮ ಪದವೀಧರರನ್ನು ಉದ್ಯಮ ವಲಯದ ಬೇಡಿಕೆಗನುಗುಣವಾಗಿ ತಯಾರಿಸಲು ನೆರವಾಗಲಿದೆ ಎಂದರು.
ಅಮೆರಿಕದಲ್ಲೇ ಎಂಎಸ್ಸಿ ಪದವಿ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗದಂತೆ ಬದಲಾವಣೆಗಳನ್ನು ತರಬೇಕಿದೆ. ಈಗ ನಮ್ಮಲ್ಲಿ ನಿರ್ಲಕ್ಷ್ಯಕ್ಕೆ ಈಡಾಗಿರುವ ಕ್ಷೇತ್ರಗಳು ಮುಂದೆ ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯವಾಗಿ ಪರಿವರ್ತನೆ ಆಗಬಹುದು. ಹಾಗಾಗಿ ಹೊಸ ಕ್ಷೇತ್ರಗಳ ಜೊತೆಗೆ ತಾತ್ಸಾರಕ್ಕೆ ಒಳಗಾಗಿರುವ ಕ್ಷೇತ್ರಗಳನ್ನು ಕಾಲಕ್ಕೆ ತಕ್ಕಂತೆ ಯಾವ ಬದಲಾವಣೆ ತಂದು ಉಳಿಸಿಕೊಳ್ಳಬೇಕು ಎನ್ನುವ ಬಗ್ಗೆಯೂ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಉದ್ಯಮ ವಲಯ ತಮ್ಮ ಅಗತ್ಯಗಳೇನೆಂಬುದನ್ನು ಮುಕ್ತವಾಗಿ ಹಂಚಿಕೊಳ್ಳಲು ಈ ಶೃಂಗದ ಮೂಲಕ ವೇದಿಕೆ ನೀಡಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಣಿಪಾಲ್ ಅಕಾಡೆಮಿಯ ಏಕಲವ್ಯ ಬರೊಚ, ಎಲೆಟ್ಸ್ ಟೆಕ್ನೋ ಮೀಡಿಯಾ ಮುಖ್ಯಸ್ಥ ಡಾ.ರವಿ ಗುಪ್ತ ಹಾಗೂ ಅನುರಾಗ ಗುಪ್ತ ಸೇರಿ ಕೃಷಿ, ಕೌಶಲ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಗೂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ವಿದೇಶಿ ಭಾಷೆ ಕಲಿಕೆಗೆ ಒತ್ತು:
ಉನ್ನತ ಶಿಕ್ಷಣದಲ್ಲಿ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಮೂಲಕ ನಾವೀನ್ಯತೆ ಚಟುವಟಿಕೆಗೆ ವಿಶೇಷ ಒತ್ತು ನೀಡಲಾಗುವುದು. ಜರ್ಮನ್, ಜಪಾನಿ ಭಾಷೆ ಕಲಿತವರಿಗೆ ಉದ್ಯೋಗಾವಕಾಶಗಳು ಹೆಚ್ಚಿರುವುದು ಗಮನಕ್ಕೆ ಬಂದಿದ್ದು, ನಮ್ಮ ಕಾಲೇಜುಗಳಲ್ಲಿ ಮುಂದೆ ವಿದೇಶಿ ಭಾಷೆ ಕಲಿಕೆಗೆ ಹೆಚ್ಚು ಗಮನ ಕೇಂದ್ರಿಕರಿಸಲಿದ್ದೇವೆ ಎಂದು ಇದೇ ವೇಳೆ ಸಚಿವ ಸುಧಾಕರ್ ತಿಳಿಸಿದರು.