ಸಾರಾಂಶ
ಮಲಪ್ರಭಾ ನದಿ ತಟದಲ್ಲಿರುವ ಸುಕ್ಷೇತ್ರ ಮಧ್ವೀರಶೈವ ಶಿವಯೋಗ ಮಂದಿರದಲ್ಲಿ 114ನೇ ಜಾತ್ರಾ ಮಹೋತ್ಸವದ ಅಂಗವಾಗಿ ಕಾರಣಿಕ ಯುಗ ಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಮಹಾ ರಥೋತ್ಸವ ಶನಿವಾರ ಸಂಜೆ ಸಕಲ ವಾಧ್ಯಗಳೊಂದಿಗೆ ಅಪಾರ ಜನಸ್ತೋಮದ ಮಧ್ಯೆ ಜರುಗಿತು.
ಕನ್ನಡಪ್ರಭ ವಾರ್ತೆ ಬಾದಾಮಿ
ಸಮೀಪದ ಮಲಪ್ರಭಾ ನದಿ ತಟದಲ್ಲಿರುವ ಸುಕ್ಷೇತ್ರ ಮಧ್ವೀರಶೈವ ಶಿವಯೋಗ ಮಂದಿರದಲ್ಲಿ 114ನೇ ಜಾತ್ರಾ ಮಹೋತ್ಸವದ ಅಂಗವಾಗಿ ಕಾರಣಿಕ ಯುಗ ಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಮಹಾ ರಥೋತ್ಸವ ಶನಿವಾರ ಸಂಜೆ ಸಕಲ ವಾಧ್ಯಗಳೊಂದಿಗೆ ಅಪಾರ ಜನಸ್ತೋಮದ ಮಧ್ಯೆ ಜರುಗಿತು.ಸಹಸ್ರಾರು ಭಕ್ತರು ಕುಮಾರೇಶ್ವರ ಮಹಾರಾಜ್ ಕಿ ಜೈ ಎಂದು ಜಯಘೋಷಗಳೊಂದಿಗೆ ಏಷ್ಯಾ ಕಂಡದಲ್ಲಿಯೇ ಅತಿ ಎತ್ತರದ (65 ಅಡಿ) ರಥವನ್ನು ಎಳೆದರು. ರಥಕ್ಕೆ ಭಕ್ತಿಯಿಂದ ಹೂ ಅರ್ಪಿಸಿದರು. ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ ಹಾವೇರಿ ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸುತ್ತ-ಮುತ್ತಲಿನ ಗ್ರಾಮಗಳಿಂದ ಡೊಳ್ಳು, ಭಜನಾ ಮಂಡಳಿ, ಕರಡಿ ಮಜಲು, ಹೆಜ್ಜೆ ಕುಣಿತ ಸೇರಿದಂತೆ ವಾಧ್ಯಮೇಳಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು.
ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಬಾಳೆಹೊಸೂರ ದಿಂಗಾಲೇಶ್ವರ ಸ್ವಾಮೀಜಿ, ಒಳಬಳ್ಳಾರಿ ಸಿದ್ಧಲಿಂಗ ಸ್ವಾಮೀಜಿ, ಕಮತಗಿ ಹೊಳೆಹುಚ್ಚೇಶ್ವರ ಸ್ವಾಮೀಜಿ, ಹಾಳಕೆರೆ-ಗಂಜಿಹಾಳ ಅನ್ನದಾನೇಶ್ವರ ಮಠದ ಉತ್ತರಾಧಿಕಾರಿಗಳಾದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಕಾಶಿನಾಥ ಸ್ವಾಮೀಜಿ, ಗದಗ ಕಲ್ಲಯ್ಯಜ್ಜನವರು, ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ, ದರೂರ ಶ್ರೀಗಳು, ಯಲಬುರ್ಗಾ, ಸವನೂರ ಶ್ರೀಗಳು, ವಿವಿಧ ಮಠಾಧೀಶರು, ವಟುಸಾಧಕರು, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಶಾಂತಗೌಡ ಪಾಟೀಲ, ಮಹಾಂತೇಶ ಮಮದಾಪೂರ, ದರ್ಮದರ್ಶಿ ಎಂ.ಬಿ. ಹಂಗರಗಿ, ಮಹೇಶ ಹೊಸಗೌಡರ, ಮುಕ್ಕನಗೌಡ ಜನಾಲಿ, ಶರಣಗೌಡ ಪಾಟೀಲ, ಮುತ್ತಣ್ಣ ಚಿನಿವಾಲರ, ಸಿದ್ದಣ್ಣ ಟೆಂಗಿನಕಾಯಿ, ಸಿದ್ದಣ್ಣ ಶಿವನಗುತ್ತಿ ಎಂ.ಡಿ. ಯಲಿಗಾರ, ಡಾ.ಆರ್.ಸಿ. ಭಂಡಾರಿ. ಸೇರಿದಂತೆ ಗಣ್ಯರು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.