ಸಾರಾಂಶ
- ಕರ್ನಾಟಕಕ್ಕೆ ಅನುದಾನ ನೀಡುವಲ್ಲೂ ಮಲತಾಯಿ ಧೋರಣೆ: ಲೋಕಸಭೆ ಅಧಿವೇಶನದಲ್ಲಿ ಮೋದಿ ಸರ್ಕಾರಕ್ಕೆ ತರಾಟೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಜಲಜೀವನ್ ಮಿಷನ್ನಡಿ ಶೇ.80 ಮನೆಗಳಿಗೆ ನಳದ ಮೂಲಕ ನೀರಿನ ಸಂಪರ್ಕ ಇದೆಯೆಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದರಲ್ಲಿ ಕೇವಲ ಶೇ.62ರಷ್ಟು ಮಾತ್ರ ನಳಗಳು ಕಾರ್ಯನಿರ್ವಹಿಸುತ್ತಿವೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರು.ಲೋಕಸಭೆ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಶುಕ್ರವಾರ ಕೇಂದ್ರ ಯೋಜನೆಯಾದ ಜಲಜೀವನ್ ಮಿಷನ್ ಬಗ್ಗೆ ಜಲಶಕ್ತಿ ಸಚಿವಾಲಯ ನೀಡಿದ ಅನುದಾನ ವಿಚಾರವಾಗಿ ಅವರು ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆ ಸಂಪೂರ್ಣ ವಿಫಲವಾಗಿದ್ದು, ದಿನಕ್ಕೆ 55 ಲೀಟರ್ ನೀರಿನ ಗುರಿ ಮಾತ್ರ ಪೂರೈಸುತ್ತಿದೆ ಎಂದರು.
ಶೇ.57 ಮಾತ್ರ ಬಳಕೆ:ಜೆಜೆಎಂ ಯೋಜನೆಗೆ 2024-25ನೇ ಸಾಲಿನಲ್ಲಿ ಶೇ.67.7ರಷ್ಟು ಅನುದಾನ ಕಡಿತವಾಗಿದೆ. ಇದು ನಿಧಿಗಳ ಅಳವಡಿಕೆಯಲ್ಲಿನ ವೈಫಲ್ಯ ತೋರುತ್ತಿದೆ. ಅಟಲ್ ಭೂ ಜಲ್ ಯೋಜನೆಯಡಿ 8000 ಜಲಹೀನ ಪಂಚಾಯಿತಿಗಳಲ್ಲಿ ನೀರಿನ ಪರಿಸ್ಥಿತಿ ಸುಧಾರಣೆ ಆಗಿದೆಯೆಂದು ಕೇಂದ್ರ ಹೇಳುತ್ತದೆ. ಆದರೆ, ವಾಸ್ತವವಾಗಿ ಕೇವಲ ಶೇ.37ರಷ್ಟು ಜಲಹೀನ ಪ್ರದೇಶಗಳನ್ನು ಮಾತ್ರ ತಲುಪಲಾಗಿದೆ. ಯೋಜನೆಯಡಿ ಬಜೆಟ್ನ ನಿಧಿ ಕೇವಲ ಶೇ.57 ಮಾತ್ರ ಬಳಸಿದೆ. ಜಲಶಕ್ತಿ ನಿಧಿಗಳಿದ್ದರೂ ಅವು ಬಳಸಲಾಗುತ್ತಿಲ್ಲ ಎಂದು ದೂರಿದರು.
ಜಲಶಕ್ತಿ ನಿಧಿ ಬಿಡುಗಡೆಯಲ್ಲಿ ವಿಫಲ:ಕೇಂದ್ರವು ತನ್ನದೇ ಬಜೆಟ್ನಲ್ಲಿ ಘೋಷಿಸಿದ ಜಲಶಕ್ತಿ ನಿಧಿ ಬಿಡುಗಡೆಗೆ ವಿಫಲವಾಗಿದೆ. ಕರ್ನಾಟಕವು ಕೇಂದ್ರದ ಖಜಾನೆಗೆ ಕೊಡುಗೆಯಾಗಿ ಪ್ರತಿ ₹100 ನೀಡಿದರೂ, ಕೇವಲ ₹13 ಮಾತ್ರ ರಾಜ್ಯವು ಮರಳಿ ಪಡೆಯುತ್ತಿದೆ. ಜಲಜೀವನ್ ಮಿಷನ್ನಲ್ಲಿ 34 ರಾಜ್ಯಗಳು, ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕವು 22ನೇ ಸ್ಥಾನದಲ್ಲಿದೆ. ಇದು ಆಡಳಿತ ವೈಫಲ್ಯದಿಂದ ಮಾತ್ರವಲ್ಲ, ಕೇಂದ್ರವು ₹26,119 ಕೋಟಿ ಘೋಷಿಸಿದಾಗಲೂ ಕೇವಲ ₹11,760 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಅದರಲ್ಲೂ ಕೇವಲ ಶೇ.45 ಮಾತ್ರ. ಇದು ಮಲತಾಯಿ ಧೋರಣೆಯಲ್ಲದೇ ಮತ್ತೇನು ಎಂದು ಡಾ.ಪ್ರಭಾ ತರಾಟೆಗೆ ತೆಗೆದುಕೊಂಡರು.
2024-25ರಲ್ಲಿ ಕರ್ನಾಟಕಕ್ಕೆ ₹3,804 ಕೋಟಿ ಮೀಸಲಾಗಿದ್ದರೂ, ಕೇವಲ ₹570 ಕೋಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಸರ್ಕಾರ ತನ್ನ ಬಜೆಟ್ನಿಂದ ₹4,977 ಕೋಟಿ ಖರ್ಚು ಮಾಡಿದೆ. ಇದು ಕೇಂದ್ರ-ರಾಜ್ಯ 60:40 ಅನುಪಾತಕ್ಕೂ ಹೆಚ್ಚು. ಅನೇಕ ಪತ್ರ, ನಿಯೋಗ, ಮನವಿ, ಪ್ರತಿಭಟನೆಗಳ ಬಳಿಕವೂ ಕೇಂದ್ರ ಸರ್ಕಾರವು ಹೆಚ್ಚು ನಿಧಿ ಬಿಡುಗಡೆ ಮಾಡಿಲ್ಲ. ಆದರೆ, ಕರ್ನಾಟಕ ನಿಷ್ಠೆಯಿಂದ ತನ್ನ ತೆರಿಗೆ ಪಾಲನ್ನು ಕೇಂದ್ರಕ್ಕೆ ನೀಡುತ್ತಲೇ ಬಂದಿದೆ. ಆದರೂ, ಕೇಂದ್ರ ಸರ್ಕಾರ ಮಾತ್ರ ಕರ್ನಾಟಕಕ್ಕೆ ಸರಿಯಾಗಿ ಸ್ಪಂದಿಸುವ ಬದ್ಧತೆ ತೋರುತ್ತಿಲ್ಲ ಎಂದು ದೂರಿದರು.ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಗಳ 2 ಲಕ್ಷ ಹೆಕ್ಟೇರ್ನಲ್ಲಿ ಹನಿ ನೀರಾವರಿ, 367 ಸಣ್ಣ ನೀರಾವರಿ ಟ್ಯಾಂಕ್ ಗಳನ್ನು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆ ಅತ್ಯಗತ್ಯ. ಕೇಂದ್ರವು ₹5,300 ಕೋಟಿ ಘೋಷಿಸಿದರೂ, ಕರ್ನಾಟಕ ರಾಜ್ಯದ ನಾವು ಖಾಲಿ ಚೆಂಬು ಮಾತ್ರ ಪಡೆದಿದ್ದೇವೆ. ಕರ್ನಾಟಕ ತನ್ನ ಪಾಲಿನ ₹10,121.75 ಕೋಟಿ ಯೋಜನೆಗೆ ನೀಡಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಮೊದಲನೆಯದಾಗಿ ಕರ್ನಾಟಕದ ಬಾಕಿ ಉಳಿದ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಕರ್ನಾಟಕ ನೀಡುವ ಪ್ರತಿ ರು.ಗೂ 2 ಪಟ್ಟು ಮರಳಿ ನೀಡಬೇಕು. 2ನೆಯದಾಗಿ ಬಜೆಟ್ ನಿಯೋಜನೆಗಳನ್ನು ಗುರಿಗಳಿಗೆ ಅನುಗುಣವಾಗಿ ಹೆಚ್ಚಿಸಬೇಕು. ನೀರಿನ ಭದ್ರತೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವುದಿಲ್ಲ. ಬಜೆಟ್ನಲ್ಲಿ ಘೋಷಿಸಿದ ನಿಧಿಗಳನ್ನು ಕನಿಷ್ಠವಾದರೂ ಬಳಕೆ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಕೇಂದ್ರಕ್ಕೆ ಆಗ್ರಹಿಸಿದರು.- - -
ಕೋಟ್ ದಾವಣಗೆರೆಯ ಭದ್ರಾ ಕಾಲುವೆ ಅಚ್ಚುಕಟ್ಟೆ ಕೊನೆಯ ಭಾಗದ ಪ್ರದೇಶಗಳಾದ ಹರಿಹರ, ಮಲೇಬೆನ್ನೂರು, ದಾವಣಗೆರೆ, ಹರಪನಹಳ್ಳಿ ಸೇರಿದಂತೆ ಸುಮಾರು 5,700 ಹೆಕ್ಟೇರ್ ಕೃಷಿ ಭೂಮಿ ಹೊಂದಿದೆ. ನೂರಾರು ಗ್ರಾಮೀಣ ಭಾಗಕ್ಕೆ ನೀರೊದಗಿಸುತ್ತಿದೆ. ಕಾಲುವೆಗಳಲ್ಲಿ ಭಾರಿ ಪ್ರಮಾಣದ ಹೂಳು ಶೇಖರಣೆಯಾಗಿದ್ದು, ರೈತರು ವಾರ್ಷಿಕ ಒಂದೇ ಬೆಳೆದು, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭದ್ರಾ ಕಾಲುವೆ ಹೂಳೆತ್ತಲು ಮತ್ತು ನೀರಿನ ಹರಿವನ್ನು ಸುಗಮಗೊಳಿಸಲು, ನಾಲೆ ಆಧುನಿಕರಣಕ್ಕೆ ₹150 ಕೋಟಿ ವಿಶೇಷ ಅನುದಾನವನ್ನು ಕಾಲುವೆಗಳ ಕೊನೆ ಭಾಗದ ರೈತರ ಅನುಕೂಲಕ್ಕಾಗಿ ಬಿಡುಗಡೆ ಮಾಡಬೇಕು- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ
- - - -21ಕೆಡಿವಿಜಿ2.ಜೆಪಿಜಿ:ಜಲಜೀವನ ಮಿಷನ್ ಯೋಜನೆ ವೈಫಲ್ಯ, ರಾಜ್ಯಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಶುಕ್ರವಾರ ಲೋಕಸಭೆಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು.