ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಬೌದ್ಧಿಕ ದಾರಿದ್ರ್ಯವುಳ್ಳವರು ಗ್ರೀಷ್ಮ ರಂಗೋತ್ಸವದಲ್ಲಿ ಸಿಜಿಕೆ ಹೆಸರು ಕೈಬಿಟ್ಟಿದ್ದಾಗಿ ರಂಗಕರ್ಮಿ ಎಚ್. ಜನಾರ್ಧನ್ ಹೇಳಿದರು.ರಂಗಾಯಣದ ಭೂಮಿಗೀತದಲ್ಲಿ ಭಾನುವಾರ ‘ಸಿಜಿಕೆ ನೆನಪಿನ ಗ್ರೀಷ್ಮ ರಂಗೋತ್ಸವ– 2025’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿಜಿಕೆ ಸಾವಿರಾರು ಹಳ್ಳಿಗಳಿಗೆ ನಮ್ಮನ್ನು ಕರೆದೊಯ್ದಿದ್ದರು. ಅಲ್ಲಿನ ಜನ ಜೀವನವನ್ನು ಪರಿಚಯಿಸಿದ್ದರು. ಅನುಭವಗಳ ಆಧಾರದಲ್ಲಿ, ಜನರ ಒಡನಾಟದಲ್ಲಿ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸಿದ್ದರು. ಅಂತ ವ್ಯಕ್ತಿಯ ಸ್ಮರಣೆಯಲ್ಲಿ ನಾನು ರಂಗಾಯಣ ನಿರ್ದೇಶಕನಾಗಿದ್ದಾಗ ಗ್ರೀಷ್ಮ ರಂಗೋತ್ಸವ ಆಯೋಜಿಸಿದ್ದೆ. ಆದರೆ ಬೌದ್ಧಿಕ ದಾರಿದ್ರ್ಯವುಳ್ಳವರು ಅವರ ಹೆಸರನ್ನು ಕೈಬಿಟ್ಟಿದ್ದಾಗಿ ಹೇಳಿದರು.ಇಂದು ಆಲೋಚಿಸುವುದಕ್ಕೂ ದಾರಿದ್ರ್ಯವಿದೆ. ಇಂತದ್ದೆ ಮಾಡಬೇಕು ಎಂಬ ವಾತಾವರಣವಿದೆ. ಆದರೆ ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಅದಕ್ಕೆ ವಿರುದ್ಧವಾಗಿದ್ದರು. ಸತ್ಯ ಹೇಳಲು ಹೊರಟ ನಿಷ್ಠಾವಂತರು, ಪ್ರಾಮಾಣಿಕರು, ಬದ್ಧತೆ ಮತ್ತು ಕ್ರಿಯಾಶೀಲತೆಯುಳ್ಳವರಿಗೆ ಉತ್ತಮ ಸಾಧನೆ ಮಾಡಲು ರಂಗಾಭೂಮಿ ಅವಕಾಶ ನೀಡುತ್ತದೆ ಎಂದರು.ಸಿಜಿಕೆ ಹವ್ಯಾಸಿ ರಂಗಭೂಮಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಮುದಾಯ ತಂಡವನ್ನು ಕಟ್ಟಿ ಜನರತ್ತ ನಾಟಕಗಳನ್ನು ಕರೆದೊಯ್ದರು. 50 ವಾರಗಳ ರಂಗ ನಿರಂತರ ನಾಟಕೋತ್ಸವವನ್ನು ಆಯೋಜಿಸಿ, 50 ಹವ್ಯಾಸಿ ನಾಟಕ ತಂಡಗಳನ್ನು ಪರಿಚಯಿಸಿದರು. ಸಮುದಾಯ ಸ್ಥಾಪಿಸಿ 50 ವರ್ಷಗಳಾಗಿದ್ದು, ಶೀಘ್ರದಲ್ಲೇ ಆಚರಣೆಗೆ ಮುಂದಾಗಲಿದ್ದೇವೆ ಎಂದು ತಿಳಿಸಿದರು.ವೃತ್ತಿ ರಂಗಭೂಮಿಯವರಷ್ಟೇ ಮಹತ್ವದ ಕೊಡುಗೆ ನೀಡುವಲ್ಲಿ ನ. ರತ್ನ, ಸಿಂಧುವಳ್ಳಿ ಅನಂತಮೂರ್ತಿ ಮೊದಲಾದವರು ಕೊಡುಗೆ ನೀಡಿದ್ದಾರೆ. ಮನುಷ್ಯನ ಅಹಂ, ಸ್ವಾರ್ಥವನ್ನು ನಾಶ ಮಾಡುವ ರಂಗಭೂಮಿಯಲ್ಲಿ ಹವ್ಯಾಸಿ ತಂಡಗಳಿಗೂ ಅವಕಾಶ ನೀಡುವ ಇಂಥ ನಾಟಕೋತ್ಸವಗಳು ಅಗತ್ಯ ಎಂದರು.ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಸಿಜಿಕೆ ನೆನಪಿನಲ್ಲಿ ನಾಟಕೋತ್ಸವ ಆಯೋಜನೆಯೂ ರಂಗಾಯಣದ ಭಾಗವಾಗಿ ನಡೆಯಲಿದೆ. ಹವ್ಯಾಸಿ ರಂಗಭೂಮಿಗೆ ಹೊಸ ಹೊಳಪನ್ನು ನೀಡಿದ ಅವರನ್ನು ಸ್ಮರಿಸುವುದು ಹೆಮ್ಮೆಯ ಸಂಗತಿ ಎಂದರು.ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿದರು. ರಂಗಸಮಾಜ ಸದಸ್ಯ ಎಚ್.ಎಸ್.ಸುರೇಶ್ ಬಾಬು ಇದ್ದರು.ಮಂಜುನಾಥ್ ಭ್ಯಾಟೆ ನಿರ್ದೇಶನದಲ್ಲಿ ನೇಪಥ್ಯ ರಂಗತಂಡದಿಂದ ಕವಿ ಕುವೆಂಪು ರಚನೆಯ ಸ್ಮಶಾನ ಕುರುಕ್ಷೇತ್ರ ನಾಟಕ ಪ್ರದರ್ಶನಗೊಂಡಿತು.