ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿ, ಇದರಲ್ಲಿ ಎರಡು ಮಾತಿಲ್ಲ: ಯದುವೀರ್

| Published : Aug 29 2025, 01:00 AM IST

ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿ, ಇದರಲ್ಲಿ ಎರಡು ಮಾತಿಲ್ಲ: ಯದುವೀರ್
Share this Article
  • FB
  • TW
  • Linkdin
  • Email

ಸಾರಾಂಶ

ಮಾರ್ಕಂಡೇಯರು ತಪಸ್ಸು ಮಾಡಿರುವ ಇತಿಹಾಸವಿರುವ ಸ್ಥಳವಿದು. ಚಾಮುಂಡಿಬೆಟ್ಟಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಚಾಮುಂಡಿಬೆಟ್ಟ ಪ್ರಾಧಿಕಾರ ಆಗಬಾರದು, ಧಾರ್ಮಿಕ ಕೇಂದ್ರವಾಗಿಯೇ ಇರಬೇಕು, ಧರ್ಮದ ವಿಚಾರ ಬಂದಾಗ ನಾವು ಯಾವುದೇ ಹೋರಾಟಕ್ಕೂ ಸಿದ್ಧ ಎಂದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್.

ಕನ್ನಡಪ್ರಭ ವಾರ್ತೆ ಮೈಸೂರು

ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿ, ಇದರಲ್ಲಿ ಎರಡು ಮಾತಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಆಘಾತಕಾರಿ ಹಾಗೂ ಹಾಸ್ಯಾಸ್ಪದ ಹೇಳಿಕೆ. ಗೌರಿ ವಿನಾಯಕನ ಪೂಜೆಯ ಸಂದರ್ಭದಲ್ಲಿ ಈ ರೀತಿ ಹೇಳಿಕೆ ಖಂಡನಿಯ ಎಂದರು.

ಮಾರ್ಕಂಡೇಯರು ತಪಸ್ಸು ಮಾಡಿರುವ ಇತಿಹಾಸವಿರುವ ಸ್ಥಳವಿದು. ಚಾಮುಂಡಿಬೆಟ್ಟಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಆ ಸಂದರ್ಭದಲ್ಲಿ ಬೇರೆ ಧರ್ಮಗಳೇ ಇರಲಿಲ್ಲ. ಬೌದ್ದ ಧರ್ಮ ಒಂದೇ ಆಗ ಇದ್ದಿದ್ದು. ನಮ್ಮ ಧರ್ಮದ ದುರ್ಬಳಕೆ ಮಾಡಿಕೊಳ್ಳಬಾರದು. ನಮ್ಮ ಧಾರ್ಮಿಕ ಕ್ಷೇತ್ರಗಳಿಗೆ ಎಲ್ಲರಿಗೂ ಪ್ರವೇಶ ಇದೆ. ಆದರೆ, ಪ್ರವೇಶ ಇದೆ ಅನ್ನೋ ಕಾರಣಕ್ಕೆ ಅವರದ್ದು ಅನ್ನುವುದು ಸರಿಯಲ್ಲ ಎಂದರು.

ಜಾತ್ಯತೀತ ಧರ್ಮದ ದೃಷ್ಟಿಯಿಂದ ನೋಡಬಹುದು ಅಷ್ಟೇ. ಇದು ಧಾರ್ಮಿಕ ಕೇಂದ್ರ ಕೋಟ್ಯಂತರ ಜನರ ಭಾವನೆಗೆ ಇದರಿಂದ ಧಕ್ಕೆಯಾಗುತ್ತದೆ. ಈ ರೀತಿ ಬೇಜವಾಬ್ದಾರಿತನದ ಹೇಳಿಕೆ ನೀಡಬಾರದು. ಸರ್ಕಾರ ಚಾಮುಂಡಿಬೆಟ್ಟವನ್ನು ನಿಯಂತ್ರಣಕ್ಕೆ ತೆಗದುಕೊಳ್ಳಲು ಮುಂದಾಗಿದೆ. ಬರೀ ಹಿಂದೂ ದೇವಾಲಯಗಳನ್ನು ಗುರಿಯಾಗಿಟ್ಟುಕೊಂಡು ಈ ರೀತಿ ಮಾಡುತ್ತಿದೆ. ಹಿಂದೂಗಳ ಸ್ಥಳಗಳಲ್ಲಿ ಈ ರೀತಿ ಆಗುತ್ತಿದೆ ಎಂದು ಆರೋಪಿಸಿದರು.

ಆರ್‌ಎಸ್ಎಸ್ ಗೀತೆ ಹಾಡಿ ಅದರ ಬಗ್ಗೆ ಗೊತ್ತಿದೆ ಅಂದರು. ಪಕ್ಷದಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆ ಕೇಳಿದರು. ಅದನ್ನು ಬ್ಯಾಲೆನ್ಸ್ ಮಾಡಲು ಈ ರೀತಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಗಂಭೀರ ಸಮಸ್ಯೆ ಇರುವಾಗ ಈ ರೀತಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಾರೆ. ಇದು ಈ ಹಿಂದೆಯೂ ಈ ರೀತಿ ಆಗಿದೆ ಎಂದರು.

ಧರ್ಮದ ವಿಚಾರ ಬಂದಾಗ ನಾವು ಯಾವುದೇ ಹೋರಾಟಕ್ಕೂ ಸಿದ್ಧ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು. ಚಾಮುಂಡಿಬೆಟ್ಟ ಪ್ರಾಧಿಕಾರ ಆಗಬಾರದು. ಪ್ರಾಧಿಕಾರವಾದರೆ ಅದನ್ನು ಪ್ರವಾಸೋದ್ಯಮ ಕೇಂದ್ರ ಮಾಡುತ್ತಾರೆ. ಚಾಮುಂಡಿಬೆಟ್ಟ ಧಾರ್ಮಿಕ ಕೇಂದ್ರವಾಗಿಯೇ ಇರಬೇಕು ಎಂದು ಅವರು ಆಗ್ರಹಿಸಿದರು.

ದಸರಾ ಉದ್ಘಾಟಕರ ಬಗ್ಗೆ ಅನಪೇಕ್ಷಿತ ಚರ್ಚೆ: ಕೆ.ಮಹೇಶ್

ಕನ್ನಡಪ್ರಭ ವಾರ್ತೆ ಮೈಸೂರು

ಈ ಬಾರಿಯ ದಸರಾ ಉದ್ಘಾಟನೆಗೆ ಆಯ್ಕೆಗೊಂಡಿರುವ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರ ಬಗ್ಗೆ ನಡೆಯುತ್ತಿರುವ ಚರ್ಚೆಯೂ ಅನಪೇಕ್ಷಿತವಾದದ್ದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಕೆ. ಮಹೇಶ್ ತಿಳಿಸಿದ್ದಾರೆ.

ಜಾಗತಿಕವಾಗಿ ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ ಲೇಖಕರ ಬಗ್ಗೆ ಅಸಹನೆ ಮತ್ತು ಅಸಹಿಷ್ಣುತೆಯಿಂದ ಹೇಳಿಕೆಗಳನ್ನು ನೀಡುತ್ತಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದು. ರಾಜ್ಯ ಸರ್ಕಾರವು ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿ ಗೌರವ ಸಲ್ಲಿಸಿದೆ. ಎಲ್ಲಾ ರೀತಿಯಲ್ಲೂ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಸರ್ವತಃ ಸಮರ್ಥನೀಯರಾಗಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿಯ ಬಿಜೆಪಿ ಕೆಲವು ನಾಯಕರು ತಮ್ಮ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಇದು ಅತ್ಯಂತ ಹೇಯವಾದದ್ದು ಎಂದು ಕಿಡಿಕಾರಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿಬೆಟ್ಟದ ವಿಚಾರವಾಗಿ ಹೇಳಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಯಿತು. ಸರ್ಕಾರದ ಅಧೀನಕ್ಕೆ ಒಳಪಟ್ಟ ಯಾವುದೇ ದೇವಸ್ಥಾನಗಳು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಎಲ್ಲಾ ಧರ್ಮ, ಜಾತಿ, ವರ್ಗದ ಜನರ ಸ್ವತ್ತಾಗಿರುತ್ತದೆ. ಅಧಿಕಾರ ವಂಚಿತರಾದ ಬಿಜೆಪಿ ನಾಯಕರ ಅಸಹನೆಗೆ ಕೊನೇ ಮೊದಲಿಲ್ಲ ಎಂದು ಟೀಕಿಸಿದ್ದಾರೆ.