₹2025 ಕೋಟಿ ಕಾಮಗಾರಿಗೆ ಏ. 16ರಂದು ಸಿಎಂ ಸಿದ್ದರಾಮಯ್ಯ ಚಾಲನೆ : ಸಚಿವ ಈಶ್ವರ ಖಂಡ್ರೆ

| N/A | Published : Apr 14 2025, 01:23 AM IST / Updated: Apr 14 2025, 12:42 PM IST

₹2025 ಕೋಟಿ ಕಾಮಗಾರಿಗೆ ಏ. 16ರಂದು ಸಿಎಂ ಸಿದ್ದರಾಮಯ್ಯ ಚಾಲನೆ : ಸಚಿವ ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

  2025 ಕೋಟಿ ರು. ಯೋಜನೆಯನ್ನು ಜಿಲ್ಲೆಗೆ ನೀಡಿ ಅಭಿವೃದ್ಧಿಗೆ ಸಾಥ ನೀಡಿದ್ದು, ಇವುಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲು ಸಿಎಂ ಸಿದ್ದರಾಮಯ್ಯ ಏ. 16ರಂದು ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

 ಬೀದರ್‌ : ವಿಮಾನಯಾನ, ಕುಡಿಯುವ ನೀರು, ಕೃಷಿ ಜಲ ಮೂಲ, ಜಿಲ್ಲಾ ಸಂಕೀರ್ಣ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ ಕ್ಷೇತ್ರಗಳಿಗೆ 2025 ಕೋಟಿ ರು. ಯೋಜನೆಯನ್ನು ಜಿಲ್ಲೆಗೆ ನೀಡಿ ಅಭಿವೃದ್ಧಿಗೆ ಸಾಥ್ ನೀಡಿದ್ದು, ಇವುಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲು ಸಿಎಂ ಸಿದ್ದರಾಮಯ್ಯ ಏ. 16ರಂದು ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ 48 ಕೋಟಿ ರು. ವೆಚ್ಚದಲ್ಲಿ ಪ್ರಜಾ ಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ, ಬೀದರ್‌ನಿಂದ ಬೆಂಗಳೂರಿಗೆ ಪುನರಾರಂಭಗೊಂಡ ನಾಗರಿಕ ವಿಮಾನಯಾನ ಸೇವೆಗೆ ಮರುಚಾಲನೆ ನಡೆಯಲಿದೆ. ಏ. 17ರಂದು ಬೆಳಗ್ಗೆ ಬೀದರ್‌ನಿಂದ ಬೆಂಗಳೂರಿಗೆ ತೆರಳಲಿರುವ ಆಯ್ದ 5 ಪ್ರಯಾಣಿಕರಿಗೆ ಬೋರ್ಡಿಂಗ್‌ ಪಾಸ್ ವಿತರಿಸುವ ಮೂಲಕ ನಾಗರಿಕ ವಿಮಾನಯಾನ ಸೇವೆಯ ಪುನಾರಂಭಕ್ಕೆ ಸಿಎಂ ವಿದ್ಯುಕ್ತ ಚಾಲನೆ ನೀಡಲಿದ್ದಾರೆ ಎಂದರು.

ಕೇಂದ್ರ ಸರ್ಕಾರ ಉಡಾನ್ ಸಬ್ಸಿಡಿ ನಿಲ್ಲಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬೀದರ್‌ ಬೆಂಗಳೂರು ನಾಗರಿಕ ವಿಮಾನಯಾನ ಪುನಾರಂಭಿಸಲು ಕೆಕೆಆರ್‌ಡಿಬಿಯಿಂದ ಪ್ರಸಕ್ತ ವರ್ಷ 14 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಔರಾದ್‌ನ ನಾಗೂರ್‌, ಸಂತಪೂರ್‌ನಲ್ಲಿ 220 ಕೆ.ವಿ. ಉಪಕೇಂದ್ರಗಳ ಉದ್ಘಾಟನೆ (₹114 ಕೋಟಿ), ಬೀದರ್‌ ನಗರಸಭೆ, ಭಾಲ್ಕಿ ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿ (49 ಕೋಟಿ ರು.), ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಭಾಲ್ಕಿಯಲ್ಲಿ 400 ಮನೆಗಳ ಹಸ್ತಾಂತರ (23 ಕೋಟಿ ರು.) ಬ್ರಿಮ್ಸ್‌ನಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಮತ್ತು ಕ್ಯಾಥಲ್ಯಾಬ್‌ (15.11 ಕೋಟಿ ರು.) ಹಾಗೂ ಜೊತೆಗೆ ವಿದ್ಯಾರ್ಥಿ ನಿಲಯ, ಅಂಗನವಾಡಿ ಕೇಂದ್ರ, ಶಾಲೆ ಮತ್ತು ಆರೋಗ್ಯ ಕೇಂದ್ರ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಭಾಲ್ಕಿ ತಾಲೂಕಿನ ಮೆಹಕರ್‌ ಏತ ನೀರಾವರಿ ಯೋಜನೆ ಹಾಗೂ ಔರಾದ್‌ ತಾಲೂಕಿನ 36 ಕೆರೆ ತುಂಬಿಸುವ ಯೋಜನೆ (ಒಟ್ಟು ಮೊತ್ತ 582 ಕೋಟಿ ರು.)

ಬೀದರ್‌ ತಾಲೂಕಿನ ಬಗದಲ್‌ ಹಾಗೂ ಇತರ 104 ಜನವಸತಿ ಮತ್ತು ಚಿಟಗುಪ್ಪ ತಾಲೂಕಿನ ಮನ್ನಾಎಖೇಳಿ ಹಾಗೂ 32 ಜನ ವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ (330 ಕೋಟಿ ರು.) ಬೀದರ್‌ ನಗರಸಭೆ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್‌, ಚಿಟಗುಪ್ಪ ಮತ್ತು ಔರಾದ್‌ ಪುರಸಭೆ ವ್ಯಾಪ್ತಿಯಲ್ಲಿ ಜಲಮೂಲಗಳ ಪುನಶ್ಚೇತನ ಮತ್ತು ಉದ್ಯಾನ ಅಭಿವೃದ್ಧಿ (100 ಕೋಟಿ ರು.) ಬೀದರ್‌ ನಗರಸಭೆ, ಹುಮನಾಬಾದ್ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಉನ್ನತೀಕರಣ (80 ಕೋಟಿ ರು.) ಔರಾದ್‌ ತಾಲೂಕಿನ ಹಂಗರಗಾ– ಸಾವರಗಾಂವ್‌ ನಡುವೆ ಬಾಂದಾರ ಸೇತುವೆ (70 ಕೋಟಿ ರು.), ಪ್ರಜಾಸೌಧ ಜಿಲ್ಲಾಡಳಿತ ಕಚೇರಿ ಕಟ್ಟಡ ನಿರ್ಮಾಣ ( 48 ಕೋಟಿ ರು.), ಹೊಸ ತಾಲೂಕುಗಳಾದ ಚಿಟಗುಪ್ಪ, ಕಮಲನಗರ, ಹುಲಸೂರು ಆಡಳಿತ ಕೇಂದ್ರ ಕಟ್ಟಡ ನಿರ್ಮಾಣ (25 ಕೋಟಿ ರು.) ಹೊನ್ನಿಕೇರಿ ಮೀಸಲು ಅರಣ್ಯದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ (15 ಕೋಟಿ ರು.) ಭಾಲ್ಕಿಯಲ್ಲಿ ಅತ್ಯಾಧುನಿಕ 150 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ( 16 ಕೋಟಿ ರು.) ಭಾಲ್ಕಿಯಲ್ಲಿ ಸುಸಜ್ಜಿತ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಸಮುಚ್ಛಯ (15 ಕೋಟಿ ರು.),ಭಾಲ್ಕಿ ಆರ್‌ಟಿಓ ಕಚೇರಿ ಮತ್ತು ವಾಹನ ಚಾಲನಾ ಪರೀಕ್ಷಾ ಪಥ ಸೇರಿದಂತೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಡಿಸಿಎಂ ಡಿ.ಕೆ ಶಿವಕುಮಾರ, ಸಚಿವರಾದ ರಾಮಲಿಂಗಾರೆಡ್ಡಿ, ಎಚ್‌ಕೆ ಪಾಟೀಲ್‌, ಕೆಜೆ ಜಾರ್ಜ್‌, ದಿನೇಶ ಗುಂಡೂರಾವ್‌, ವೆಂಕಟೇಶ, ಎನ್‌ಎಸ್‌ ಬೋಸರಾಜ್‌, ಜಮೀರ್‌ ಅಹ್ಮದಖಾನ್‌, ರಹೀಮ್‌ಖಾನ್‌, ಸತೀಶ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ಶರಣ ಪಾಟೀಲ್‌, ಸಂಸದ ಸಾಗರ ಖಂಡ್ರೆ ಪಾಲ್ಗೊಳ್ಳಲಿದ್ದಾರೆ ಎಂದರು.

ಡೀಸಿ ಶಿಲ್ಪಾ ಶರ್ಮಾ, ಜಿಪಂ ಸಿಇಓ ಡಾ. ಗಿರೀಶ್ ದಿಲೀಪ್ ಬದೋಲೆ, ಎಸ್‌ಪಿ ಪ್ರದೀಪ ಗುಂಟಿ ಇದ್ದರು.