ಕಾಂಗ್ರೆಸ್‌ ಗ್ಯಾರಂಟಿಗಳು ಅಮೆರಿಕಾದಲ್ಲೂ ಸದ್ದು: ಶಾಂತನಗೌಡ

| Published : Nov 11 2025, 02:15 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ನಾಡಿಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅವರು ಕೊಟ್ಟ ಗ್ಯಾರಂಟಿ ಯೋಜನೆಗಳ ಮಾದರಿಗಳು ಅಮೆರಿಕಾದಲ್ಲೂ ಸದ್ದು ಮಾಡುತ್ತಿವೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ಸಿದ್ದರಾಮಯ್ಯ ತಾಲೂಕು ಕ್ರೀಡಾಂಗಣ ಹೆಸರಿನ ನಾಮಫಲಕ ಅನಾವರಣ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ನಾಡಿಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅವರು ಕೊಟ್ಟ ಗ್ಯಾರಂಟಿ ಯೋಜನೆಗಳ ಮಾದರಿಗಳು ಅಮೆರಿಕಾದಲ್ಲೂ ಸದ್ದು ಮಾಡುತ್ತಿವೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಶನಿವಾರ ಪಟ್ಟಣದಲ್ಲಿರುವ ತಾಲೂಕು ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ತಾಲೂಕು ಕ್ರೀಡಾಂಗಣ ಹೆಸರಿನ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ನೀಡಿದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದ ಬಿಜೆಪಿಯವರು ಇದೀಗ ಅಧಿಕಾರದಲ್ಲಿರುವ ತಮ್ಮ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲೂ ಸಿದ್ದರಾಮಯ್ಯ ಸಾಧನೆಗಳು ಕೇಳಿಬರುತ್ತಿವೆ. ಸಿದ್ದರಾಮಯ್ಯ ಹಿಂದುಳಿದ ನಾಯಕ ಎಂದು ಇಡೀ ದೇಶವೇ ಅವರನ್ನು ಒಪ್ಪಿಕೊಂಡಿದೆ ಎಂದರು.

ಇಂತಹ ನಾಯಕನ ಹೆಸರನ್ನು ಹೊನ್ನಾಳಿಯ ಕ್ರೀಡಾಂಗಣಕ್ಕೆ ಇಡಬೇಕು ಎಂದು ಪುರಸಭೆ ಪಕ್ಷಾತೀತವಾಗಿ ತೀರ್ಮಾನಿಸಿದೆ. ಅದಕ್ಕೆ ತಮ್ಮ ಸಂಪೂರ್ಣ ಸಹಮತವಿದೆ. ಇದನ್ನು ಸಂಬಂಧಪಟ್ಟ ಇಲಾಖೆಗೆ ಕಳಿಸಿಕೊಟ್ಟಿದ್ದು, ಅದರಂತೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ನಿಗಮ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಕನಕದಾಸ ಜಯಂತಿ ದಿನದಂದೇ ಈ ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಕ್ರೀಡಾಂಗಣ ಎಂದು ಹೆಸರಿಟ್ಟು ನಾಮಫಲಕ ಅನಾವರಣ ಮಾಡಿರುವುದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಪುರಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರು ಈ ಹೆಸರನ್ನು ಇಡಲು ತೀರ್ಮಾನ ಕೈಗೊಂಡಿದ್ದಾರೆ. ಪುರಸಭೆ ಹಾಗೂ ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭ ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ, ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಮಾಜಿ ಉಪಾಧ್ಯಕ್ಷರಾದ ರಂಜಿತಾ ಚನ್ನಪ್ಪ, ಸದಸ್ಯರಾದ ಧರ್ಮಪ್ಪ, ಹೊಸಕೇರಿ ಸುರೇಶ್, ಮುಖಂಡರಾದ ಎಚ್.ಬಿ. ಅಣ್ಣಪ್ಪ, ಆರ್. ನಾಗಪ್ಪ, ಎಚ್.ಎ. ನರಸಿಂಹಪ್ಪ, ರೇವಣಸಿದ್ದಪ್ಪ ಮೂಲಿ, ಮಾದಪ್ಪ, ಪರಸಣ್ಣಾರ ನರಸಿಂಹಪ್ಪ, ಗಾಳೇಶಪ್ಪ, ಸತೀಶ್, ಚಂದ್ರು, ವಡ್ಡಿ ಚನ್ನಪ್ಪ, ಕ್ರೀಡಾಧಿಕಾರಿ ಕಾಳಿಂಗಪ್ಪ, ಎಂಜಿನಿಯರ್ ದೇವರಾಜ್, ಡಾ. ವಿಶ್ವನಟೇಶ್ ಇತರರು ಭಾಗಿಯಾಗಿದ್ದರು.

- - -

(ಕೋಟ್) ಪ್ರತಿ ವರ್ಷ ತುಂಗಭದ್ರಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ಪಟ್ಟಣದ ಬಾಲರಾಜ್ ಘಾಟ್‌ನಲ್ಲಿ ಕೆಲವು ಮನೆಗಳು ಮುಳುಗಡೆಯಾಗುತ್ತವೆ. ಈ ಹಿನ್ನೆಲೆ ಈ ಭಾಗದ ನದಿಗೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ₹6 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಜಿಲ್ಲಾಧಿಕಾರಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಟೆಂಡರ್ ಕರೆಯಲಾಗಿದೆ.

- ಡಿ.ಜಿ. ಶಾಂತನಗೌಡ, ಶಾಸಕ.

- - -

-8ಎಚ್.ಎಲ್.ಐ4.ಜೆಪಿಜಿ:

ಹೊನ್ನಾಳಿ ತಾಲೂಕು ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಕ್ರೀಡಾಂಗಣ ಎಂದು ನಾಮಕರಣದ ಫಲಕವನ್ನು ಶಾಸಕ ಡಿ.ಜಿ. ಶಾಂತನಗೌಡ ಅನಾವರಣಗೊಳಿಸಿದರು. ಎಚ್.ಬಿ.ಮಂಜಪ್ಪ, ಮೈಲಪ್ಪ, ಸಾವಿತ್ರಪ್ಪ, ವಿಜೇಂದ್ರಪ್ಪ ಇತರರು ಇದ್ದರು.