ಗೋವಿನಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹ: 2ನೇ ದಿನಕ್ಕೆ ಕಾಲಿಟ್ಟ ಆಮರಣ ಉಪವಾಸ

| Published : Nov 23 2025, 02:45 AM IST

ಗೋವಿನಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹ: 2ನೇ ದಿನಕ್ಕೆ ಕಾಲಿಟ್ಟ ಆಮರಣ ಉಪವಾಸ
Share this Article
  • FB
  • TW
  • Linkdin
  • Email

ಸಾರಾಂಶ

ನವಲಗುಂದ ತಾಲೂಕಿನಾದ್ಯಂತ ರೈತರು ಈ ಬಾರಿ ಗೋವಿನ ಜೋಳವನ್ನು ಹೆಚ್ಚಾಗಿ ಬೆಳೆದಿದ್ದು ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ಪರದಾಡುವಂತಾಗಿದೆ. ಎರಡು ತಿಂಗಳ ಮೊದಲೇ ಗೋವಿನಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗುತ್ತಿದೆ.

ನವಲಗುಂದ:

ಗೋವಿನಜೋಳಕ್ಕೆ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ರೈತ ಸೇನಾ ಕರ್ನಾಟಕದಿಂದ ರೈತರು ಆರಂಭಿಸಿದ ಆಮರಣ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ತಾಲೂಕು ಬಿಜೆಪಿ ಸೇರಿದಂತೆ ನಾನಾ ಸಂಘಟನೆಗಳು ಹೋರಾಟ ಬೆಂಬಲಿಸಿವೆ.

ಶನಿವಾರ ರೈತರ ವೀರಗಲ್ಲಿನ ಸ್ಮಾರಕದ ಎದುರಿಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಗಂಗಪ್ಪ ಮನಮಿ, ತಾಲೂಕಿನಾದ್ಯಂತ ರೈತರು ಈ ಬಾರಿ ಗೋವಿನ ಜೋಳವನ್ನು ಹೆಚ್ಚಾಗಿ ಬೆಳೆದಿದ್ದು ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ಪರದಾಡುವಂತಾಗಿದೆ. ಎರಡು ತಿಂಗಳ ಮೊದಲೇ ಗೋವಿನಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗುತ್ತಿದೆ. ಆದರೂ ಈ ವರೆಗೂ ಆರಂಭಿಸಿಲ್ಲ. ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದೋದಗಿದ್ದು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಗೋವಿನಜೋಳಕ್ಕ ಬೆಂಬಲ ಬೆಲೆ ನಿಗದಿ ಪಡಿಸಬೇಕೆಂದು ಒತ್ತಾಯಿಸಿದರು.

ಭಾರತೀಯ ಕಿಸಾನ್ ಸಂಘದ ಗದಗ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ್ ಹೋರಾಟಗಾರರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದರು. ಲೋಕನಾಥ ಹೆಬಸೂರ ಮಾತನಾಡಿ, ಅತಿವೃಷ್ಟಿಯಿಂದ ಬೆಳೆಹಾನಿ ಅನುಭವಿಸಿದ ರೈತರಿಗೆ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಹೆಸರು ಬೆಳೆಯನ್ನು ಬೆಂಬಲ ಬೆಲೆಯಡಿ ಖರೀದಿಸಲು ಖರೀದಿ ಕೇಂದ್ರ ತೆರೆದಿದ್ದರೂ ಅಧಿಕಾರಿಗಳು ಹೆಸರು ಬೆಳೆ ಖರೀದಿಸಲು ನಿರಾಕರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಹೆಸರು ಬೆಳೆಯನ್ನು ಎ,ಬಿ,ಸಿ ಮಾದರಿಯಲ್ಲಿ ವಿಗಂಡಿಸಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು. ಗೋವಿನ ಜೋಳಕ್ಕೆ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿದರು.

ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ಶಂಕರಪ್ಪ ಅಂಬಲಿ, ರಘುನಾಥ ನಡುವಿನಮನಿ, ಸಾಯಿಬಾಬಾ ಆನೆಗುಂದಿ, ಎನ್‌.ಪಿ. ಕುಲಕರ್ಣಿ, ಲಲಿತಾ ಮರಿಗೌಡ್ರ, ನಾಗೇಶ ಮುದಿಗೌಡ್ರ, ಯಶೋದಾ ಚಿಕ್ಕಣ್ಣವರ, ದೇವರಾಜ ಕರಿಯಪ್ಪನವರ, ಶ್ರೀದೇವಿ ಹಲವಾರ, ಸಿದ್ದಪ್ಪ ಜನ್ನರ, ಅನಿತಾ ಮಾಯಣ್ಣವರ, ಈಶ್ವರ ಸಂಗಟಿ, ಪುಷ್ಪಾ ಬಾಜಿ, ಸವಿತಾ ಕೋಳಿವಾಡ, ಬಸನಗೌಡ ಮರಿಗೌಡ್ರ, ಶೇಷಪ್ಪ ಬೆಳಹಾರ, ವಿರೂಪಾಕ್ಷಪ್ಪ ಸೊಪ್ಪಿನ, ಮುತ್ತುರಾಜ ಹೊಸಗೂರ ಇತರರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.