ಸಹಾಯಕ ಪ್ರಾಧ್ಯಾಪಕನ ಬಂಧನಕ್ಕೆ ಆಗ್ರಹ

| Published : Jun 26 2025, 01:32 AM IST

ಸಾರಾಂಶ

ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಸಹಾಯಕ ಪ್ರಾಧ್ಯಾಪಕ ಅಶ್ವಿನ್ ಹೆಬ್ಬಾರ್ ಮೇಲೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಮತ್ತು ಆತನನ್ನು ಅಮಾನತುಗೊಳಿಸಬೇಕು ಎಂದು ಲಾಯರ್ಸ್‌ ಗೀಲ್ಡ್‌ನ ಮುಖ್ಯಸ್ಥ, ವಕೀಲ ಕೆ.ಪಿ.ಶ್ರೀಪಾಲ್ ಒತ್ತಾಯಿಸಿದರು.

ಶಿವಮೊಗ್ಗ: ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಸಹಾಯಕ ಪ್ರಾಧ್ಯಾಪಕ ಅಶ್ವಿನ್ ಹೆಬ್ಬಾರ್ ಮೇಲೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಮತ್ತು ಆತನನ್ನು ಅಮಾನತುಗೊಳಿಸಬೇಕು ಎಂದು ಲಾಯರ್ಸ್‌ ಗೀಲ್ಡ್‌ನ ಮುಖ್ಯಸ್ಥ, ವಕೀಲ ಕೆ.ಪಿ.ಶ್ರೀಪಾಲ್ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವ ಅಶ್ವಿನ್ ಹೆಬ್ಬಾರ್ ಎಂಬಾತನ ಲೈಂಗಿಕ ಕಿರುಕುಳದ ಪ್ರಕರಣ ಈಗಾಗಲೇ ಜಗಜ್ಜಾಹೀರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಿರುಕುಳಕ್ಕೆ ಒಳಗಾದ ಮೆಡಿಕಲ್ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ದೂರು ನೀಡಿ ಐದು ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಪೊಲೀಸರು ಎಫ್‌ಐಆರ್ ಮಾಡಿದ್ದರೂ ಇದೂವರೆಗೆ ಆತನನ್ನು ಬಂಧಿಸಿಲ್ಲ, ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಸಿಮ್ಸ್ ಆಡಳಿತ ಮಂಡಳಿ ಕೂಡ ಸಂತ್ರಸ್ತೆಯ ಪರವಾಗಿ ನಿಲ್ಲದೆ ಆರೋಪಿಯ ಪರವಾಗಿಯೇ ಇದೆ. ಸಿಮ್ಸ್ ಅಧೀಕ್ಷಕ ವಿರೂಪಾಕ್ಷಪ್ಪ ಅವರು ಕೂಡ ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಆತನ ಪರವಾಗಿಯೇ ನಿಲ್ಲುತ್ತಾರೆ. ಪೊಲೀಸರೂ ಸುಮ್ಮನಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಮಧ್ಯಪ್ರವೇಶಮಾಡಿ, ಕೂಡಲೇ ಈ ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.

ವೈದ್ಯ ಡಾ.ಅಶ್ವಿನ್ ಹೆಬ್ಬಾರ್ ಮೇಲೆ ಇದೇ ಮೊದಲ ಪ್ರಕರಣವಲ್ಲ. ಈ ಹಿಂದೆಯೂ ಕಾಶ್ಮೀರ ಮೂಲದ ವೈದ್ಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ. ಅದು ನ್ಯಾಯಾಲಯದ ಮೆಟ್ಟಿಲು ಏರಿದೆ. ನ್ಯಾಯಾಲಯದಿಂದ ಸದ್ಯಕ್ಕೆ ತಡೆಯಾಜ್ಞೆ ಇದ್ದರೂ ಪ್ರಕರಣ ಇತ್ಯರ್ಥವಾಗಿಲ್ಲ. ಇಷ್ಟಾದರೂ ಈಗ ಮತ್ತೆ ಅದೇ ರೀತಿಯ ವರ್ತನೆ ಆತ ತೋರಿಸಿದ್ದಾನೆ. ಈ ಪ್ರಕರಣವನ್ನೂ ಮುಚ್ಚಿಹಾಕುವ ಹುನ್ನಾರ ನಡೆದಿತ್ತು. ಆದರೆ ಎಲ್ಲಾ ಕಡೆ ಸುದ್ದಿಯಾದ ನಂತರ ಈಗ ಎಫ್‌ಐಆರ್ ಆಗಿದೆ ಎಂದರು.

ಪ್ರಕರಣ ದಾಖಲಾಗುತ್ತಿದ್ದಂತೆ ಅಶ್ವಿನ್ ಹೆಬ್ಬಾರ್ ನಾಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಹುಡುಕಿ ಬಂಧಿಸಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈತನ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಲಾಯರ್ಸ್‌ಗೀಲ್ಡ್ ಮೂಲಕವೇ ಹೈಕೋರ್ಟ್‌ನಲ್ಲಿ ಸುಮೋಟೋ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಷಹರಾಜ್ ಸಿದ್ದಿಕಿ, ಟಿ.ವಿಜಯ್ ಇದ್ದರು.

ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ಶಿವಮೊಗ್ಗ: ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಸಿಮ್ಸ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವೈದ್ಯಕೀಯ ವಿದ್ಯಾರ್ಥಿ ಗಳು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ವೈದ್ಯ ವಿದ್ಯಾರ್ಥಿನಿಗೆ ಡಾ.ಅಶ್ವಿನ್ ಹೆಬ್ಬಾರ್ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದರು. ಈ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳಿದ್ದರು.

ಡಾ.ಅಶ್ವಿನ್ ಹೆಬ್ಬಾರ್‌ಗೆ ನಾವು

ಯಾವ ಬೆಂಬಲವನ್ನೂ ನೀಡಿಲ್ಲ

ಶಿವಮೊಗ್ಗ: ಸಿಮ್ಸ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್ ಅವರಿಂದ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಎಲ್ಲಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಸ್ಪಷ್ಟೀಕರಣ ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಾ.ಅಶ್ವಿನ್ ಹೆಬ್ಬಾರ್ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬಂದ ತಕ್ಷಣ ಸಂತ್ರಸ್ತೆ ಮೊದಲು ಕಾಲೇಜಿನ ರೆಸಿಡೆನ್ಸ್ ಸ್ನಾತಕೋತ್ತರ ಸಮಿತಿಗೆ ದೂರು ನೀಡಿದ್ದರು. ಬಳಿಕ ಆ ಸಮಿತಿಯಿಂದ ಸಿಮ್ಸ್ ಆಡಳಿತ ಮಂಡಳಿಗೆ ಮತ್ತು ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ಹಾಗೂ ಆಸ್ಪತ್ರೆಯ ಅಧೀಕ್ಷಕರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಸಮಿತಿಯ ವರದಿ ಇನ್ನೂ ಬರಬೇಕಾಗಿದೆ. ಈಗಾಗಲೇ ಅವರ ದೂರನ್ನು ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಲಾಗಿದ್ದು, ತನಿಖೆ ಮುಂದುವರೆದಿದೆ. ಸಂತ್ರಸ್ತೆಯ ಕಡೆಯವರು ಈಗಾಗಲೇ ಮಹಿಳಾ ಠಾಣೆಗೂ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ ಎಂದು ತಿಳಿಸಿದರು.

ಡಾ. ಅಶ್ವಿನ್ ಹೆಬ್ಬಾರ್‌ ಈ ಪ್ರಕರಣದ ನಂತರ ಕರ್ತವ್ಯಕ್ಕೆ ಹಾಜರಾಗಿಲ್ಲ. ನಾವು ಅವರನ್ನು ರಕ್ಷಿಸುತ್ತಿದ್ದೇವೆ ಮತ್ತು ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದೇವೆ ಎಂಬುದು ಸುಳ್ಳು. ಆರೋಪಿತ ವೈದ್ಯರಿಗೆ ನೋಟಿಸ್‌ ನೀಡಿದ್ದೇವೆ. ಅವರಿಂದ ಲಿಖಿತ ರೂಪದಲ್ಲಿ ಸ್ಪಷ್ಟೀಕರಣವನ್ನು ಬಯಸಿದ್ದೇವೆ. ಇದು ಸಿಮ್ಸ್ ಕ್ಯಾಂಪಸ್‌ನ ಹೊರಗೆ ನಡೆದ ಘಟನೆ. ಸಂತ್ರಸ್ತೆ ಎರಡನೇ ವರ್ಷದ ಪಿಜಿ ವಿದ್ಯಾರ್ಥಿನಿಯಾಗಿದ್ದು, ವಿಚಾರಣೆ ನಡೆಯುತ್ತಿದೆ. ಅರೋಪಿಗೆ ನಾವು ಯಾವ ಬೆಂಬಲವನ್ನೂ ನೀಡಿಲ್ಲ, ರಕ್ಷಣೆಯನ್ನೂ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.