ಸಾರಾಂಶ
ನಗರದ ಲಕ್ಕವ್ವನಹಳ್ಳಿ ರಸ್ತೆಯ ಪಂಪ್ ಹೌಸ್ನಿಂದ ಲಕ್ಕವ್ವನಹಳ್ಳಿವರೆಗೆ ಹೊಸ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಕಿತ್ತು ತಿಂಗಳಾದರೂ ಗುತ್ತಿಗೆದಾರರು, ಇಂಜಿನಿಯರ್ ಇತ್ತ ಸುಳಿದಿಲ್ಲ ಎಂದು ಲಕ್ಕವ್ವನಹಳ್ಳಿ ರಸ್ತೆಯ ನಿವಾಸಿಗಳು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಲಕ್ಕವ್ವನಹಳ್ಳಿ ರಸ್ತೆಯ ಪಂಪ್ ಹೌಸ್ನಿಂದ ಲಕ್ಕವ್ವನಹಳ್ಳಿವರೆಗೆ ಹೊಸ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಕಿತ್ತು ತಿಂಗಳಾದರೂ ಗುತ್ತಿಗೆದಾರರು, ಇಂಜಿನಿಯರ್ ಇತ್ತ ಸುಳಿದಿಲ್ಲ ಎಂದು ಲಕ್ಕವ್ವನಹಳ್ಳಿ ರಸ್ತೆಯ ನಿವಾಸಿಗಳು ಆರೋಪಿಸಿದ್ದಾರೆ.ಲಕ್ಕವ್ವನಹಳ್ಳಿ ರಸ್ತೆಯ ಪಂಪ್ಹೌಸ್ನಿಂದ ಕುರುಬರಹಳ್ಳಿವರೆಗೂ ರಸ್ತೆ ನಿರ್ಮಾಣಕ್ಕೆ ಯಾರೋ ಗುತ್ತಿಗೆ ಪಡೆದಿದ್ದು, 9ನೇ ವಾರ್ಡ್ ನ ಬಹಳಷ್ಟು ನಿವಾಸಿಗಳ ಮನೆ ಮುಂಭಾಗ ಹಾದು ಹೋಗಿರುವ ಈ ಹಳೆ ಟಾರು ರಸ್ತೆಯನ್ನು ಶೀಘ್ರ ನಿರ್ಮಾಣ ಮಾಡುವ ರೀತಿ ಕಿತ್ತು ಹಾಕಲಾಗಿದ್ದು, ಒಂದು ತಿಂಗಳಾಗುತ್ತಾ ಬಂದರೂ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ಹತ್ತಾರು ಬಸ್ಸು, ಕಾರು, ನೂರಾರು ಬೈಕ್, ಆಟೋ ರಿಕ್ಷಾ ದಿನoಪ್ರತಿ ಓದಾಡುವ ಈ ರಸ್ತೆಯಲ್ಲಿ ಈಗ ಧೂಳಿನದೇ ಹಾವಳಿ. ಯಾವುದಾದರೂ ಬಸ್ಸು, ಲಾರಿ ಹೋದ ತಕ್ಷಣ ರಸ್ತೆ ಉದ್ದಕ್ಕೂ ಇರುವ ಮನೆಗಳ ಒಳಗೆಲ್ಲಾ ಧೂಳು ತುಂಬಿಕೊಳ್ಳುತ್ತದೆ. ರಸ್ತೆ ಕಿತ್ತು ಜಲ್ಲಿ ತೇಲಿಸಿರುವುದರಿಂದ ಆಟೋ ಮತ್ತು ಬೈಕ್ ಸವಾರರು ಸಂಚಾರಕ್ಕೆ ಹರ ಸಾಹಸ ಪಡುತ್ತಿದ್ದಾರೆ. ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯವರು ಇನ್ನಾದರೂ ಗುತ್ತಿಗೆದಾರರನ್ನು ಕರೆಸಿ ಆದಷ್ಟು ಬೇಗ ಈ ರಸ್ತೆ ಕಾಮಗಾರಿ ಮುಗಿಸಬೇಕೆಂದು ಆ ಭಾಗದ ನಿವಾಸಿಗಳು ಆಗ್ರಹಿಸಿದ್ದಾರೆ.