ಸಾರಾಂಶ
ಲಕ್ಷ್ಮೇಶ್ವರ: ಹದಿ ಹರೆಯದಲ್ಲಿ ಮಾದಕ ವಸ್ತುವಿಗೆ ನಮ್ಮ ಮನಸ್ಸು ಜಾರಿದಲ್ಲಿ ಅದರಿಂದ ವಾಪಸ್ಸು ಬರುವುದು ಬಹಳಷ್ಟು ಕಠಿಣವಾದುದು. ಮಾದಕ ವಸ್ತುಗಳು ನಮ್ಮ ಭವಿಷ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಲಕ್ಷ್ಮೇಶ್ವರ ಠಾಣೆಯ ಪಿಎಸ್ಐ ನಾಗರಾಜ ಗಡದ ಹೇಳಿದರು.
ಸೋಮವಾರ ಪಟ್ಟಣದ ಕಮಲಾ ವೆಂಕಪ್ಪ ಅಗಡಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಾದಕ ವಸ್ತುಗಳ ದಾಸರಾಗುವುದು ಸುಲಭ ಒಮ್ಮೆ ಅದರ ದಾಸರಾದಲ್ಲಿ ಅದರಿಂದ ಹೊರ ಬರುವುದು ಸುಲಭದ ಮಾತಲ್ಲ. ಹದಿ ಹರೆಯದ ಮನಸ್ಸುಗಳು ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾಗುತ್ತವೆ. ಆದ್ದರಿಂದ ಮನಸ್ಸಿನ ನಿಯಂತ್ರಣದಿಂದ ಮಾದಕ ವಸ್ತುಗಳ ಕಡೆಗೆ ಮನಸ್ಸು ಜಾರದಂತೆ ಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಮಾದಕ ವಸ್ತುಗಳ ದಾಸರಾದಲ್ಲಿ ನಮ್ಮ ಮುಂದಿನ ಜೀವನ ನರಕದಲ್ಲಿ ಮುಕ್ತಾಯವಾಗುತ್ತದೆ. ಮಾದಕ ದ್ರವ್ಯಗಳು ನಮ್ಮನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋದಂತೆ ಭಾಸವಾಗುತ್ತದೆ. ಆದರೆ ಅದು ವಾಸ್ತವವಲ್ಲ ಆದ್ದರಿಂದ ಮಾದಕ ದ್ರವ್ಯಗಳ ಗುಲಾಮರಾಗುವುದಕ್ಕಿಂತ ಮೊದಲು ನೂರಾರು ಬಾರಿ ಆಲೋಚನೆ ಮಾಡುವುದು ಒಳಿತು ಎಂದು ಹೇಳಿದರು.
ಈ ವೇಳೆ ಅಗಡಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್. ಹಯವದನ ಸೇರಿದಂತೆ ಪೊಲೀಸ್ ಇಲಾಖೆಯ ಮಾರುತಿ ಲಮಾಣಿ, ಕ್ರೈಂ ಪಿಎಸ್ಐ ಕೆ.ಟಿ.ರಾಥೋಡ ಮೊದಲಾದವರು ಇದ್ದರು.ಪಟ್ಟಣದ ಪುರಸಭೆಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಯೂ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಕುರಿತ ಕಾರ್ಯಕ್ರಮದಲ್ಲಿ ಪಿಎಸ್ಐ ನಾಗರಾಜ ಗಡದ ಮಾತನಾಡಿದರು.