ಸಾರಾಂಶ
15 ದಿನಗಳ ಹಿಂದೆ ಒಂದು ಹಿಂಡು ಆನೆ ತೋಟಗಳಿಗೆ ದಾಳಿ ಮಾಡಿದ್ದು, ನಂತರ ಒಂದು ವಾರದಿಂದ ಪದೇ ಪದೇ ತೋಟಗಳಿಗೆ ಆನೆಗಳ ಹಿಂಡು ನುಗ್ಗಿ ದಾಳಿ ಮಾಡುತ್ತಿದೆ.
ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಾವಳ್ಳಿಯಲ್ಲಿ ಗುರುವಾರ ರಾತ್ರಿ 6 ಆನೆಗಳು ಚಿಕ್ಕಮಾವಳ್ಳಿಯ ನಾರಾಯಣ ಶೇಷಗಿರಿ ಹೆಗಡೆ ಹಾಗೂ ಮಹಬಲೇಶ್ವರ ಶೇಷಗಿರಿ ಹೆಗಡೆ ಅವರ ತೋಟಗಳಿಗೆ ನುಗ್ಗಿ ಹಲವಾರು ಅಡಕೆ, ಬಾಳೆ ಗಿಡಗಳನ್ನು ನಾಶ ಮಾಡಿ ಹಾಕಿವೆ. ಸುಮಾರು ₹80 ಸಾವಿರ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
15 ದಿನಗಳ ಹಿಂದೆ ಒಂದು ಹಿಂಡು ಆನೆ ತೋಟಗಳಿಗೆ ದಾಳಿ ಮಾಡಿದ್ದು, ನಂತರ ಒಂದು ವಾರದಿಂದ ಪದೇ ಪದೇ ತೋಟಗಳಿಗೆ ಆನೆಗಳ ಹಿಂಡು ನುಗ್ಗಿ ದಾಳಿ ಮಾಡುತ್ತಿದೆ. ಒಂಟಿ ಆನೆಯೊಂದು ತೋಟಗಳಲ್ಲಿ ಸುತ್ತಿ ಹೋಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದರೆ, ತಡಕ್ಕೆ ಆಗಮಿಸಿ ಆನೆಗಳನ್ನು ಜನ ವಸತಿ ಪ್ರದೇಶ ತೋಟಗಳಿಂದ ಓಡಿಸಬೇಕಾದ ಅಧಿಕಾರಿಗಳು ಸಿಬ್ಬಂದಿ, ದೂರು ನೀಡಿದ ನೋಡಲು ತೆರಳಿದವರ ಕೈಯಲ್ಲಿ ಆಟಂ ಬಾಂಬ್ ಪಟಾಕಿ ಕೊಟ್ಟು ನೀವೇ ಆನೆಗಳನ್ನು ಓಡಿಸಿ ಎಂದು ಉಚಿತ ಸಲಹೆ ನೀಡಿ ಕಳಿಸಿದ್ದಾರೆ ಎಂದು ರೈತರು ದೂರಿದ್ದಾರೆ. ಅರಣ್ಯ ಪ್ರದೇಶದಲ್ಲಿ ತೀವ್ರವಾದ ಉಷ್ಣತೆಗೆ ಹುಲ್ಲು ಸೊಪ್ಪು ಮುಂತಾದ ಆಹಾರ ಒಣಗಿ ಹೋಗಿರುವುದರಿಂದ ಮತ್ತು ನೀರನ್ನು ಆರಿಸಿ ಆನೆಗಳ ಹಿಂಡು ಜನವಸತಿ ಪ್ರದೇಶಗಳ ಕಡೆಗೆ ದಾಳಿಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಆನೆಗಳ ಉಪಟಳವನ್ನು ತಡೆದು ರೈತರ ಜೀವ ಹಾಗೂ ಆಸ್ತಿಗಳನ್ನು ಕಾಪಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.