ಮಹಿಳೆ ಸ್ವತಃ ನಿರ್ಧಾರ ತೆಗೆದುಕೊಳ್ಳಲು ಶಕ್ತಳಾದಾಗ ಸಬಲೀಕರಣ ಸಾಕಾರ-ಡಾ. ಪುಟ್ಟರಾಜು

| Published : Mar 23 2024, 01:05 AM IST

ಮಹಿಳೆ ಸ್ವತಃ ನಿರ್ಧಾರ ತೆಗೆದುಕೊಳ್ಳಲು ಶಕ್ತಳಾದಾಗ ಸಬಲೀಕರಣ ಸಾಕಾರ-ಡಾ. ಪುಟ್ಟರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಸಹ ಬಹುತೇಕ ದೇಶಗಳಲ್ಲಿ ಮಹಿಳೆಯನ್ನು ಕೆಟ್ಟದಾಗಿ ನಡೆಸಿಕೊಂಡ ಇತಿಹಾಸವಿದೆ. ಮಹಿಳೆಯರು ಎಲ್ಲಿಯವರೆಗೂ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಹೊಂದುವುದಿಲ್ಲವೋ, ಅಲ್ಲಿಯವರೆಗೂ ಮಹಿಳಾ ಸಬಲೀಕರಣ ಎನ್ನುವ ಪದಕ್ಕೆ ಅರ್ಥವಿರುವುದಿಲ್ಲ.

ಬ್ಯಾಡಗಿ: ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಸಹ ಬಹುತೇಕ ದೇಶಗಳಲ್ಲಿ ಮಹಿಳೆಯನ್ನು ಕೆಟ್ಟದಾಗಿ ನಡೆಸಿಕೊಂಡ ಇತಿಹಾಸವಿದೆ. ಮಹಿಳೆಯರು ಎಲ್ಲಿಯವರೆಗೂ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಹೊಂದುವುದಿಲ್ಲವೋ, ಅಲ್ಲಿಯವರೆಗೂ ಮಹಿಳಾ ಸಬಲೀಕರಣ ಎನ್ನುವ ಪದಕ್ಕೆ ಅರ್ಥವಿರುವುದಿಲ್ಲ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪುಟ್ಟರಾಜು ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಮಗ್ರ ಸಮಾಜ ನಿರ್ವಹಣಾ ಕೇಂದ್ರ ಬ್ಯಾಡಗಿ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಓರ್ವ ಪುರುಷನ ಆರ್ಥಿಕ ಸ್ಥಿತಿಗತಿ ಮೇಲೆ ತಮ್ಮ ಬದುಕನ್ನು ಅವಲಂಬಿಸಿಕೊಳ್ಳುತ್ತಿದ್ದಾರೆ, ಇದರಿಂದ ಪ್ರಪಂಚದಾದ್ಯಂತ ಮಹಿಳೆಯರು ಇಂದಿನ ದಯನೀಯ ಸ್ಥಿತಿ ತಲುಪಲು ಪ್ರಮುಖ ಕಾರಣವಾಗಿದ್ದು, ಪ್ರಸ್ತುತ ಸಮಾಜದಲ್ಲಿ ಪುರುಷರ ಸಂಕೋಲೆಯಿಂದ ತಪ್ಪಿಸಿಕೊಳ್ಳುವ ಮೂಲಕ ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣದ ಅತ್ಯಂತ ಅವಶ್ಯಕತೆಯಿದೆ ಎಂದರು.ಸಬಲೀಕರಣದಲ್ಲಿ ಹಿಂದೆ ಬಿದ್ದಿದ್ದೇವೆ: ನ್ಯಾಯವಾದಿ ಭಾರತಿ ಕುಲಕರ್ಣಿ ಮಾತನಾಡಿ, ವಿಶ್ವದ ಮೂರನೇ ಶಕ್ತಿ ಎನಿಸಿಕೊಳ್ಳುತ್ತಿರುವ ಭಾರತದಲ್ಲಿ ಮಹಿಳಾ ಸಬಲೀಕರಣ ವಿಷಯದಲ್ಲಿ ಹಿಂದೆ ಬಿದ್ದಿದ್ದೇವೆ, ಪತಿಯೇ ದೇವರು ಎಂಬ ನಂಬಿ ಬದುಕು ನಡೆಸುತ್ತಿರುವ ಸಂಪ್ರದಾಯ ಹಾಗೂ ಮೌಢ್ಯದ ಜೀವನ ನಡೆಸುತ್ತಿರುವ ಮಹಿಳೆಯ ಮೇಲೆ ದೈಹಿಕವಾಗಿ, ಮಾನಸಿಕವಾಗಿ ನಿತ್ಯವೂ ಒಂದಿಲ್ಲೊಂದು ರೀತಿ ದೌರ್ಜನ್ಯ ನಡೆಯುತ್ತಿದ್ದು, ಮಹಿಳಾ ಸಬಲೀಕರಣ ದೇಶದಲ್ಲಿ ಎಂದಿಗಿಂತಲೂ ಹೆಚ್ಚುಅಗತ್ಯವಿದೆ ಎಂದರು.ಅನುಕಂಪ ಬೇಡ ಅವಕಾಶ ಕೊಡಿ: ಮಹಿಳೆಯರನ್ನು ಸಬಲೀಕರಣಗೊಳಿಸಲು ಹಲವು ಮಾರ್ಗಗಳಿದ್ದು ಅದನ್ನು ನನಸಾಗಿಸಲು ವ್ಯಕ್ತಿಗಳು ಮತ್ತು ಸರ್ಕಾರ ಎರಡೂ ಒಗ್ಗೂಡಬೇಕು, ಮಹಿಳಾ ಶಿಕ್ಷಣ ಕಡ್ಡಾಯಗೊಳಿಸಬೇಕು, ಲಿಂಗ ಭೇದವಿಲ್ಲದೆ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಮತ್ತು ವೇತನ ನೀಡಬೇಕು, ಆರ್ಥಿಕ ಬಿಕ್ಕಟ್ಟು ಎದುರಿಸುವಲ್ಲಿ ಶಕ್ತರಾದರೇ ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಯಾವುದೇ ಅನುಮಾನಗಳಿಲ್ಲ ಎಂದರು.ಮರ್ಯಾದಾ ಹತ್ಯೆ ಅಪಾಯ: ಮಹಿಳೆ ಸುರಕ್ಷಿತವಲ್ಲದ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ, ಕೌಟುಂಬಿಕ ದೌರ್ಜನ್ಯ ದೇಶದ ಪ್ರಮುಖ ಸಮಸ್ಯೆಯಾಗಿದೆ. ಬೇಗನೆ ಮದುವೆಯಾಗುವ ಮಹಿಳೆ ಅತೀ ಚಿಕ್ಕವಯಸ್ಸಿನಲ್ಲಿಯೇ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಾಳೆ. ಗಂಡ ಮತ್ತು ಕುಟುಂಬಕ್ಕಾಗಿ ದಣಿವಿಲ್ಲದೇ ಕೆಲಸ ಮಾಡುವುದು ಆಕೆಯ ಕರ್ತವ್ಯ ಎಂದು ಬಿಂಬಿಸಲಾಗುತ್ತದೆ. ಇನ್ನೂ ಮದುವೆ ಸ್ವಾತಂತ್ರ್ಯ ಕೆಳೆದುಕೊಳ್ಳುತ್ತಿರುವ ಮಹಿಳೆ ತಮ್ಮ ಕುಟುಂಬ ಮತ್ತು ಪರಂಪರೆಗೆ ಅಪಖ್ಯಾತಿಯಾದಲ್ಲಿ ಆಕೆಯ ಪ್ರಾಣಕ್ಕೆ ಅಪಾಯವಿದೆ, ಮರ್ಯಾದಾ ಹತ್ಯೆ ನೆಪದಲ್ಲಿ ಆಕೆಯನ್ನು ಹತ್ಯೆಗೈಯಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಲಕ್ಷ್ಮೀ ಗುಗ್ಗರಿ, ಶಂಕರ ಉಪ್ಪಾರ, ವಿ.ಮಮತಾ, ಸಿಸ್ಟರ್ ರೂಪಾ, ಅಚಲಾ, ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಗ್ಲೋರಿಯಾ ತೆರೆಸಿಟಾ, ಸ್ನೇಹ ಸದನ ಸಿಬ್ಬಂದಿ ಸುವರ್ಣಾ, ಗಂಗಾ, ಸರಸ್ವತಿ, ರಹಿಮಾ, ಲಲಿತಾ, ಮಧು, ಶೈಲಾ, ಈರಣ್ಣ, ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ನೇಹ ಸದನ ಕುಟೀರದ ಮಕ್ಕಳು ಪಾಲ್ಗೊಂಡಿದ್ದರು.