ಸಾರಾಂಶ
ಬ್ಯಾಡಗಿ: ಪ್ರಸಕ್ತ ವರ್ಷ ವರುಣದೇವ ಮುನಿಸಿಕೊಂಡ ಬೆನ್ನಲ್ಲೇ ಮುಂಗಾರು ಮತ್ತು ಹಿಂಗಾರು ಸಂಪೂರ್ಣ ಕೈಕೊಟ್ಟಿದೆ. ಯಾವುದೇ ಬೆಳೆಗಳು ನಿರೀಕ್ಷಿತ ಮಟ್ಟದಲ್ಲಿ ರೈತನ ಕೈಹಿಡಿಯಲಿಲ್ಲ, ಕೊಳವೆಬಾವಿ ನೀರಿನಿಂದ ತೋಟಗಾರಿಕೆ ನಡೆಸುತ್ತಿದ್ದ ಕೆಲವರಿಗೂ ಅಂತರ್ಜಲ ಮಟ್ಟ ಕುಸಿತಗೊಂಡಿದ್ದು, ಇದರ ಪರಿಣಾಮವಾಗಿ ಅಡಕೆ ಬೆಳೆಗಾರರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದಾರೆ.
ತಾಲೂಕಿನಲ್ಲಿ ಜಲಕಂಟಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದ್ದು, ಪ್ರಸಕ್ತವರ್ಷ ಹಿಂದೆಂದೂ ಕಂಡರಿಯದ ರಣ ಬಿಸಿಲು ಅಕ್ಷರಶಃ ಜೀವಸಂಕುಲವನ್ನು ಸಂಕಷ್ಟಕ್ಕೆ ತಳ್ಳಿದೆ, ನೀರಿಗಾಗಿ ಎಲ್ಲೆಡೆ ಹಾಹಾಕಾರ ಉಂಟಾಗಿದ್ದು, ನೀರಿಲ್ಲದೇ ರೈತ ವರ್ಗ ಕಂಗಾಲಾಗಿ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಯಿಸಲು ಮುಂದಾಗಿದೆ.ದೀರ್ಘಾವಧಿ ಬೆಳೆ ಅಡಕೆ: ಗೋವಿನ ಜೋಳ ತಾಲೂಕಿನ ಪ್ರಮುಖ ಬೆಳೆಯಾಗಿದೆ. ಆದರೆ, ಮಲೆನಾಡಿಗೆ ಸೀಮಿತವಾಗಿದ್ದ ಅಡಕೆ ಬೆಳೆ ತಾಲೂಕಿಗೆ ಕಾಲಿಟ್ಟಿದ್ದು, ಇತ್ತೀಚೆಗೆ ಕೆಲ ರೈತರು ಲಾಭದಾಯಕ ಕೃಷಿ ನಡೆಸುವ ಉದ್ದೇಶದಿಂದ ಅಡಕೆ ಬೆಳೆ ಮೋರೆ ಹೊಗಿದ್ದಾರೆ, ಇದೊಂದು ದೀರ್ಘಾವಧಿ ಬೆಳೆಯಾಗಿದ್ದರೂ ಸಹ ಶಾಶ್ವತ ಆದಾಯ ನೀಡಲಿದೆ ಎಂಬುದು ರೈತರ ಬಲವಾದ ನಂಬಿಕೆ ಹೀಗಾಗಿ ತಾಲೂಕಿನಲ್ಲಿ ಶೇ.5ರಷ್ಟಿದ್ದ ಪ್ರದೇಶ ಶೇ. 20ಕ್ಕೆ ತಲುಪಿದೆ.
ಪ್ರಾಕೃತಿಕ ವಿಕೋಪಗಳಿಂದ ಮುಕ್ತಿ: ಇತ್ತೀಚೆಗೆ ಅಡಕೆಗೆ ಸಿಗುತ್ತಿರುವ ಉತ್ತಮ ಬೆಲೆ ಇನ್ನಿತರ ಬೆಳೆಗಳಿಗೆ ಸಿಗುತ್ತಿಲ್ಲ, ಹೀಗಾಗಿ ರೈತರು ಅಡಿಕೆ ಬೆಳೆಯತ್ತ ಮುಖಮಾಡಿದೆ, ಆಹಾರ ಬೆಳೆಗಳಿಗೆ ತಗಲುತ್ತಿರುವ ರೋಗ, ಪ್ರಾಕೃತಿಕ ವಿಕೋಪಗಳ ನಡುವೆ ಬೆಳೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡಸವಾಲು. ಮೆಕ್ಕೆಜೋಳ, ಹತ್ತಿ ಸೇರಿದಂತೆ ವಾಣಿಜ್ಯ ಬೆಳೆಗಳಿಗೆ ಹಾಕಿದ ಬಂಡವಾಳದಲ್ಲಿ ಅರ್ಧದಷ್ಟು ಬರುತ್ತಿಲ್ಲ, ಹಾಗಾಗಿ ರೈತರು ಅಡಕೆ ಬೆಳೆಯುವುದರಿಂದ ಉತ್ತಮ ಧಾರಣೆ ಪಡೆಯಬಹುದು ಎಂಬ ಕಾರಣಕ್ಕೆ ಕಷ್ಟಪಟ್ಟು ಅಡಿಕೆ ಬೆಳೆ ಬೆಳೆಯಲಾರಂಭಿಸಿದ್ದಾರೆ.ಅಂತರ್ಜಲ ಮಟ್ಟ ಕುಸಿತ: ಪ್ರಾಕೃತಿಕ ವಿಕೋಪದಿಂದ ಇತ್ತೀಚೆಗೆ ಮಳೆಯ ಪ್ರಮಾಣ ಕುಂಟುತ್ತಾ ಸಾಗಿದೆ, ಮೊದಲೆಲ್ಲ ನೂರು ಅಡಿಗೆ ಸಿಗುತ್ತಿದ್ದ ನೀರು ಇದೀಗ 800 ಅಡಿ ಕೊರೆದರೂ ಸಿಗುತ್ತಿಲ್ಲ, ಬೆಳೆದು ನಿಂತ ಅಡಕೆಯನ್ನು ಉಳಿಸಿಕೊಳ್ಳುವುದೇ ದುಸ್ತರವಾಗಿದೆ. ದುಬಾರಿ ಹಣವನ್ನು ತೆತ್ತು ಟ್ಯಾಂಕರ್ ಮೂಲಕ ನೀರು ತರಿಸಿ ಅಡಕೆಗೆ ಬೆಳೆಗೆ ಹಾಕಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಈ ವರ್ಷ ಮಳೆ ಕೊರತೆಯಿಂದ ಅಡಕೆ ಬೆಳೆಗಳನ್ನ ಉಳಿಸಿಕೊಳ್ಳುವುದು ರೈತರ ಪಾಲಿಗೆ ಕಷ್ಟ ಸಾಧ್ಯವಾಗಿದೆ.ಸರ್ಕಾರ ಸ್ಪಂದಿಸುತ್ತಿಲ್ಲ: ತಾಲೂಕಿನಲ್ಲಿ ಯಾವುದೇ ನದಿ ಹರಿದಿಲ್ಲ, ನೀರಾವರಿ ಯೋಜನೆಗಳು ಕಾಗದಕ್ಕೆ ಮಾತ್ರ ಸೀಮಿತವಾಗಿದೆ, ರೈತರಿಗೆ ಕೊಳವೆ ಬಾವಿಗಳ ನೀರೇ ಗತಿ, ಪ್ರಸಕ್ತ ವರ್ಷ ಮಳೆಯಿಲ್ಲದೇ ಕೊಳವೆಭಾವಿಗಳು ಬತ್ತಿ ಹೋಗಿದ್ದು, ಇಂತಹ ಸಂದರ್ಬದಲ್ಲಿ ಸರಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎನ್ನುತ್ತಾರೆ ಶಿಡೆನೂರಿನ ಅಡಕೆ ಬೆಳೆಗಾರ ಮಲ್ಲಿಕಾರ್ಜುನ ದುರ್ಗದ.