ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ವ್ಯಕ್ತಿಯ ವ್ಯಕ್ತಿತ್ವ ವಿಕಸನ ಹೊಂದಲು ಜಾನಪದ ಸಹಕಾರಿ ಎಂದು ಜನಪದ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಡಿವಿಎಸ್ ಪ್ರಾಂಶುಪಾಲ ಡಾ.ವೆಂಕಟೇಶ್ ತಿಳಿಸಿದರು.ಅವರು ಸಮೀಪದ ಅಗಸನಹಳ್ಳಿಯಲ್ಲಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಜಾನಪದ ಮತ್ತು ಜೀವನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನಪದ ಕಡಿಮೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಜೀವಂತವಾಗಿತ್ತು. ಆದರೆ ಇಂದಿನ ಮೊಬೈಲ್ ಯುಗದಲ್ಲಿ ಜನಪದ ಗ್ರಾಮಗಳಲ್ಲೂ ಕಣ್ಮರೆಯಾಗುತ್ತಿದೆ. ಇಂದಿನ ಜೀವನ ಶೈಲಿ ಯಾಂತ್ರಿಕವಾಗಿದ್ದು, ಅದರ ಹಿಂದೆ ಓಡುತ್ತಿರುವುದರಿಂದ ಮನುಷ್ಯನ ಜೀವನ ಶೈಲಿ ಕೂಡ ಬದಲಾಗಿದೆ. ಆದ್ದರಿಂದ ಮನೆಯಲ್ಲಿರುವ ಹಿರಿಯರು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಜನಪದ ಹಾಗೂ ಜೀವನ ಶೈಲಿಯನ್ನು ಕಲಿಸಬೇಕಾಗಿದೆ ಎಂದರು.
ಜನಪದ ಈ ದೇಶದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಂತಿದೆ. ಜನಪದ ಮರೆತು ಹೋದದಂತೆ ಸಂಸ್ಕೃತಿ, ಸಂಸ್ಕಾರ ಎಲ್ಲವೂ ಮರೆಯಾಗುತ್ತಿದ್ದು, ವಿದೇಶದ ಸಂಸ್ಕೃತಿಗೆ ದಾಸರಾಗುವ ಕಾಲ ದೂರವಿಲ್ಲ. ಈಗಾಗಲೇ ಶೇ. 70 ರಷ್ಟು ಬದಲಾವಣೆಯಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ವಿದೇಶ ಸಂಸ್ಕೃತಿಯಲ್ಲಿ ಮುಳಗಲಿದ್ದೇವೆ ಎಂದು ಹೇಳಿದರು.ಮಹಾನಗರ ಪಾಲಿಕೆಯ ನಿವೃತ್ತ ಸಮುದಾಯ ಸಂಘಟನಾ ಅಧಿಕಾರಿ ಡಾ.ಶಿವರುದ್ರಪ್ಪ ಡಿ.ಪಿ, ಶಿಬಿರದಲ್ಲಿ ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕತೆಯ ಜೀವನ ನಡೆಸಲು ಸಾಧ್ಯ. ಶಿಬಿರವು ಪ್ರತಿಯೊಬ್ಬ ವಿದ್ಯಾರ್ಥಿಗಳು ಅವಶ್ಯಕ. ಶಿಬಿರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದನ್ನು ಗ್ರಾಮಸ್ಥರಿಗೆ ತಲುಪಿಸುವ ಕೆಲಸ ಮಾಡಬೇಕಾಗಿರುವ ಶಿಬಿರಾರ್ಥಿಗಳ ಕರ್ತವ್ಯ ಎಂದರು.
ವೇದಿಕೆಯಲ್ಲಿ ಡಾ.ಕೆ.ವಿ.ಗಿರಿಧರ್ , ಲೋಕೇಶಪ್ಪ ಪಿ., ಕವಿತಾ ಸುಧೀಂದ್ರ, ಗೀತಾ ಅನಿಲ್ಕುಮಾರ್, ನೌಷದ್ ಆಲಿಖಾನ್, ನಾಗಮ್ಮ ಪರಶುರಾಮ್, ವೆಂಕಟೇಶ್, ಕುಮಾರ್ ಎಲ್, ರಾಜುನಾಯ್ಕ, ರುದ್ರಮುನಿ ಸೇರಿದಂತೆ ಇತರರಿದ್ದರು.