ಸಾರಾಂಶ
ಅಸ್ಪೃಶ್ಯತೆ ಹಾಗೂ ಜಾತಿ ಪದ್ಧತಿಯ ನಿರ್ಮೂಲನೆಗೆ ಹೋರಾಡಿ ತುಳಿತಕ್ಕೊಳಗಾದ ಜನರ ಧನಿಯಾಗಿ ಕೆಲಸ ಮಾಡಿದ ಬಾಬೂಜಿ ದೇಶದ ಕೃಷಿ, ಕಾನೂನು ಹಾಗೂ ಕಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದರು. ದೇಶದ ಆಹಾರ ಭದ್ರತೆಗೆ ಅಪೂರ್ವ ಕಾಣಿಕೆ ನೀಡಿದ ಉಪ ಪ್ರಧಾನಿ ಬಾಬು ಜಗಜೀವನರಾಮ್ ಅವರ ಜೀವನದ ಆದರ್ಶಗಳನ್ನು ಯುವ ಜನರು ಕಡ್ಡಾಯವಾಗಿ ಪಾಲಿಸಿ ಬದಲಾವಣೆ ದಿಕ್ಕಿನತ್ತ ಸಾಗಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದೇಶದ ಆಹಾರ ಭದ್ರತೆಗೆ ಅಪೂರ್ವ ಕಾಣಿಕೆ ನೀಡಿದ ಉಪ ಪ್ರಧಾನಿ ಬಾಬು ಜಗಜೀವನರಾಮ್ ಅವರ ಜೀವನದ ಆದರ್ಶಗಳನ್ನು ಯುವ ಜನರು ಕಡ್ಡಾಯವಾಗಿ ಪಾಲಿಸಿ ಬದಲಾವಣೆ ದಿಕ್ಕಿನತ್ತ ಸಾಗಬೇಕು ಎಂದು ತಾಪಂ ಯೋಜನಾಧಿಕಾರಿ ಡಾ.ಟಿ.ನರಸಿಂಹರಾಜು ಹೇಳಿದರು.ಪಟ್ಟಣ ತಾಲೂಕು ಆಡಳಿತ ಕಾರ್ಯ ಸೌಧದ ಸಭಾಂಗಣದಲ್ಲಿ ನಡೆದ ಬಾಬು ಜಗಜೀವನರಾಮ್ ಅವರ 117ನೇ ಜಯಂತಿಯಲ್ಲಿ ಮಾತನಾಡಿ, ಅಸ್ಪೃಶ್ಯತೆ ಹಾಗೂ ಜಾತಿ ಪದ್ಧತಿಯ ನಿರ್ಮೂಲನೆಗೆ ಹೋರಾಡಿ ತುಳಿತಕ್ಕೊಳಗಾದ ಜನರ ಧನಿಯಾಗಿ ಕೆಲಸ ಮಾಡಿದ ಬಾಬೂಜಿ ದೇಶದ ಕೃಷಿ, ಕಾನೂನು ಹಾಗೂ ಕಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದರು ಎಂದರು.
ದೇಶದ ಉಪ ಪ್ರಧಾನಿಯಾಗಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ದೇಶದ ಇತಿಹಾಸದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಗುಣಗಾನ ಮಾಡಿದರು.ತಾಪಂ ಇಒ ಬಿ.ಎಸ್. ಸತೀಶ್ ಮಾತನಾಡಿ, ಸಾಮಾಜಿಕ ಕ್ರಾಂತಿ ನಡೆಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ ಮಹನೀಯರ ಜಯಂತಿ ಮಹೋತ್ಸವಗಳನ್ನು ಆಚರಿಸುವುದರಿಂದ ಯುವಜನರಿಗೆ ಪ್ರೇರೇಪಣೆ ಸಿಕ್ಕಂತಾಗುತ್ತದೆ. ಎಂದರು.
ಈ ವೇಳೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಗ್ರೇಡ್ 2 ತಹಸೀಲ್ದಾರ್ ಲೋಕೇಶ್, ಸಿಡಿಪಿಓ ಅರುಣ್ ಕುಮಾರ್, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಬಸ್ತಿರಂಗಪ್ಪ, ತಾಲೂಕು ಎಸ್.ಸಿ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜಯ್ಯ, ಸುರೇಶ ಹರಿಜನ, ಬಿಸಿಎಂ ಅಧಿಕಾರಿ ವೆಂಕಟೇಶ್, ಆದಿದ್ರಾವಿಡ ಅರುಂದತಿಯಾರ್ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬನ್ನಾರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು ಇದ್ದರು.