ಹೋಟೆಲ್, ಡಾಬಾ, ರೆಸ್ಟೋರೆಂಟ್ಗಳಿಗೆ ನಿತ್ಯ ಕೇವಲ ಒಂದು ಸಾವಿರ ವಾಣಿಜ್ಯ ಸಿಲಿಂಡರ್ ನಿಗದಿಯಿಂದ ತೊಂದರೆಯಾಗಿದ್ದು, ಇನ್ನೂ ಒಂದು ವಾರ ಕಾಲ ಸುಧಾರಿಸಿಕೊಂಡರೆ ಸಮಸ್ಯೆ ಬಗೆಹರಿಯಲಿದೆ.
ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಹೋಟೆಲ್, ಡಾಬಾ, ರೆಸ್ಟೋರೆಂಟ್ಗಳಿಗೆ ನಿತ್ಯ ಕೇವಲ ಒಂದು ಸಾವಿರ ವಾಣಿಜ್ಯ ಸಿಲಿಂಡರ್ ನಿಗದಿಯಿಂದ ತೊಂದರೆಯಾಗಿದ್ದು, ಇನ್ನೂ ಒಂದು ವಾರ ಕಾಲ ಸುಧಾರಿಸಿಕೊಂಡರೆ ಸಮಸ್ಯೆ ಬಗೆಹರಿಯಲಿದೆ. ಹೀಗಾಗಿ ಒಂದೇ ಸಾರಿ 10-15 ಸಾವಿರ ಸಿಲಿಂಡರ್ ಒಟ್ಟುಗೂಡಿಸಿ ಹೋಟೆಲ್ ಮಾಲೀಕರ ಸಂಘಕ್ಕೆ ನೀಡಿ ಅವರಿಗೆ ವಿತರಣೆ ಮಾಡುವಂತೆ ಕೋರುವ ಉದ್ದೇಶವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.ಕಾಂಗ್ರೆಸ್ನ ಐವನ್ ಡಿಸೋಜಾ, ರಮೇಶ್ ಬಾಬು ಅವರು ವಾಣಿಜ್ಯ ಸಿಲಿಂಡರ್ ಸಮಸ್ಯೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಗೃಹ ಬಳಕೆ ಸಿಲಿಂಡರ್ಗಳ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ನಿತ್ಯ 3,52,921 ಸಿಲಿಂಡರ್ ಲಭ್ಯವಾಗುತ್ತಿದೆ. ಈ ಪೈಕಿ ಶೇ.20ರಷ್ಟು ಅಂದರೆ 8500-9000 ಸಾವಿರ ವಾಣಿಜ್ಯ ಸಿಲಿಂಡರ್ಗಳನ್ನು ಅಗತ್ಯವಿರುವ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಶಿಕ್ಷಣ, ಹಾಸ್ಟೆಲ್, ಆಸ್ಪತ್ರೆ, ಅವಶ್ಯವಿರುವ ಸಂಸ್ಥೆಗಳಿಗೆ 4200, ಸರ್ಕಾರಿ ಕ್ಯಾಂಟಿನ್, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣ ಮುಂತಾದವುಗಳಿಗೆ 1200, ಆಹಾರ ಸಂಸ್ಕರಣೆ, ಕೃಷಿ ಪೂರಕ ಸಂಸ್ಥೆಗಳಿಗೆ 300, ಕ್ರೀಡಾ ಹಾಸ್ಟೆಲ್ ಮತ್ತಿತರಗಳಿಗೆ 500 ಹಾಗೂ ಹೋಟೆಲ್, ಡಾಬಾ, ರೆಸ್ಟೋರೆಂಟ್ಗಳಿಗೆ ಕೇವಲ 1000 ಸಿಲಿಂಡರ್ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.
1000 ಸಾವಿರ ಸಿಲಿಂಡರ್ ಯಾವುದಕ್ಕೂ ಸಾಲದು, ಇನ್ನೂ ಒಂದು ವಾರ ಕಾಲ ಅವರು ಸುಧಾರಿಸಿಕೊಳ್ಳಬೇಕು. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. 16 ಹಡಗುಗಳು ಬರಬೇಕಾಗಿದೆ. ಅವುಗಳು ಬಂದರೆ ಪರಿಸ್ಥಿತಿ ಸುಧಾರಿಸಲಿದೆ ಎಂದರು.