ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಗ್ರಾಪಂಗಳ ಮಟ್ಟದಲ್ಲಿ ತ್ಯಾಜ್ಯಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ತಾಪಂ ಇಒ ಬಿ.ಕೆ. ಮನು ಅಭಿಪ್ರಾಯಪಟ್ಟರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ತಾಪಂ, ಐಟಿಸಿ ಮತ್ತು ಔಟ್ ರೀಚ್ ಸಂಸ್ಥೆಯ ಸಹಯೋಗದಲ್ಲಿ ಗ್ರಾಮೀಣ ಭಾಗದಲ್ಲಿ ದ್ರವತ್ಯಾಜ್ಯ ನಿರ್ವಹಣೆ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಆರಂಭಿಕ ಹಂತದಲ್ಲೇ ತ್ಯಾಜ್ಯಗಳ ಸಮರ್ಪಕ ವಿಂಗಡಣೆ ಮತ್ತು ನಿರ್ವಹಣೆ ಪರಿಣಾಮಕಾರಿಯಾಗಿ ಕೈಗೊಂಡಲ್ಲಿ ಪರಿಸರ ಕಲುಷಿತಗೊಳ್ಳುವ ಪ್ರಮಾಣ ಕಡಿಮೆಯಾಗುವುದು. ಕೇವಲ ಕೈಗಾರಿಕೆಗಳಿಂದ ಮಾತ್ರ ಪರಿಸರ ಮಾಲಿನ್ಯ, ದ್ರವ್ಯತ್ಯಾಜ್ಯಗಳ ಮಲಿನತೆ ಉಂಟಾಗುತ್ತದೆ ಎಂಬ ಭಾವನೆ ಬೇಡ. ಗೃಹಬಳಕೆಯ ತ್ಯಾಜ್ಯ ನೀರಿನಿಂದ ಕೂಡ ಅಕ್ಕಪಕ್ಕದ ಕೆರೆ, ನದಿಗಳ ಒಡಲು ಕಲುಷಿತವಾಗುತ್ತಿದೆ. ತ್ಯಾಜ್ಯ ನಿರ್ವಹಣೆ ಕೇವಲ ಒಬ್ಬರ ಜವಾಬ್ದಾರಿಯಲ್ಲ. ಎಲ್ಲರ ಸಹಕಾರದಿಂದ ಮಾತ್ರ ಸ್ವಚ್ಛತೆ ಕಾಪಾಡಲು ಸಾಧ್ಯವೆನ್ನುವುದನ್ನು ಅರಿಯೋಣವೆಂದರು.
ಸಿಡಿಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ರೋಹಿಣಿ ಪ್ರದೀಪ್ ಮಾತನಾಡಿ, ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 55 ಲೀಟರ್ ನೀರು ಬೇಕು. ಇದರಲ್ಲಿ ಶೇ. 70 ರಿಂದ 80 ರಷ್ಟು ನೀರು ಬೂದು ನೀರಾಗಿ ಪರಿವರ್ತನೆಯಾಗುತ್ತದೆ. ಕೈತೋಟ, ಇಂಗು ಗುಂಡಿ, ಸಮುದಾಯ ಇಂಗು ಗುಂಡಿ, ಚರಂಡಿಗಳ ನೀರು ನಿರ್ವಹಣೆಯನ್ನು ಮಾಡುವುದರ ಮೂಲಕ ಬೂದು ನೀರನ್ನು ಸಂಸ್ಕರಣೆ ಮಾಡುವುದರಿಂದ ಅಂರ್ತಜಲವನ್ನು ವೃದ್ಧಿಸುವುದರ ಜೊತೆಗೆ ನೀರನ್ನು ಮರು ಬಳಕೆ ಮಾಡಬಹುದು ಎಂದರು.ಐಟಿಸಿ ಸಂಸ್ಥೆಯ ಇಒ ಎಂ. ಮನೋಜ್ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಘನ ಹಾಗೂ ದ್ರವತ್ಯಾಜ್ಯ ನಿರ್ವಹಣೆ ಮಾಡಲು ಜಿಲ್ಲೆಯ 256 ಗ್ರಾಪಂಗಳಿಗೆ ಐಇಸಿ ಚಟುವಟಿಕೆಗಳ ಮೂಲಕ ಚುನಾಯಿತ ಪ್ರತಿನಿಧಿಗಳು, ಪಿಡಿಒ ಸಂಜೀವಿನ ಒಕ್ಕೂಟ ಹಾಗೂ ಸ್ವಚ್ಛಗಹಿಗಳಿಗೆ ಜಾಗೃತಿ ಮೂಡಿಸುವ ಮೂಲಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ .ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ
ಕಾರ್ಯಾಗಾರದಲ್ಲಿ 41 ಗ್ರಾಪಂ ಅಧ್ಯಕ್ಷರು, ಪಿಡಿಓ ಔಟ್ ರೀಚ್ ಸಂಸ್ಥೆಯ ಸಂಯೋಜಕರಾದ ಪ್ರಶಾಂತ್, ಮಹೇಶ ಪ್ರಸಾದ್, ಜಿ.ಎಸ್. ಜಗದೀಶ, ಕ್ಷೇತ್ರ ಸಿಬ್ಬಂದಿ ಶಶಿಕುಮಾರ, ಮಹದೇಶ, ಸಂಪತ್ತು, ಸಂಜೀವಿನ ಒಕ್ಕೂಟದ ಎಂಬಿಕೆ ಭಾಗವಹಿಸಿದ್ದರು.