ಸಾರಾಂಶ
ಬೀದರ್ ಲೋಕಸಭಾ ಕ್ಷೇತ್ರದಿಂದ ಒಳ್ಳೆಯ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಡಿ ಎಂದು ಶಾಸಕ ಪ್ರಭು ಚ್ಹಾಣ್ ಅವರು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬೇಡಿಕೊಂಡ ಘಟನೆ ಜರುಗಿತು
ಬೀದರ್: ದೇಶಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಾದರೆ ರಾಜ್ಯದ 28ಕ್ಕೆ 28 ಸ್ಥಾನ ಗೆಲ್ಲಲೇಬೇಕು. ಹೀಗಾಗಿ ಬೀದರ್ ಲೋಕಸಭಾ ಕ್ಷೇತ್ರದಿಂದ ಒಳ್ಳೆಯ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಡಿ ಎಂದು ಶಾಸಕ ಪ್ರಭು ಚ್ಹಾಣ್ ಅವರು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬೇಡಿಕೊಂಡ ಘಟನೆ ಜರುಗಿತು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಬೀದರ್ಗೆ ಆಗಮಿಸಿದ ಬಿವೈ ವಿಜಯೇಂದ್ರ ಅವರಿಗೆ ಗಣೇಶ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಭು ಚವ್ಹಾಣ್ ಅವರು, ನಾವು ಇರುವದೇ ಕಾರ್ಯಕರ್ತರಿಂದ ಹೀಗಾಗಿ ಕಾರ್ಯಕರ್ತರಿಗೆ ಅನ್ಯಾಯ, ಧೋಖಾ ಮಾಡಬಾರದು. ನಮ್ಮ ಕಾರ್ಯಕರ್ತರು ತನುಮನ ಧನದಿಂದ ಕೆಲಸ ಮಾಡ್ತಾರೆ. ಕಾರ್ಯಕರ್ತರು ಫೋನ್ ಮಾಡಿದರೆ ಅವರ ಕರೆಯನ್ನು ಸ್ವೀಕರಿಸಬೇಕಲ್ಲವೇ ಆದರೆ, ನಮ್ಮ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವುದು ಎಷ್ಟು ಸೂಕ್ತ ಎಂದು ಪರೋಕ್ಷವಾಗಿ ಖೂಬಾ ವಿರುದ್ಧ ಗುಡುಗಿದರು.ಮತ್ತೊಮ್ಮೆ ಬೀದರ್ ಸಂಸದ ಸ್ಥಾನವನ್ನು ಮತ್ತೊಮ್ಮೆ ಗೆಲ್ಲಬೇಕಿದೆ ಅದಕ್ಕೆ ಸೂಕ್ತವಾದ ಉತ್ತಮ ವ್ಯಕ್ತಿಯನ್ನು ನೀಡಿದ್ದೆಯಾದಲ್ಲಿ ಭಾರಿ ಮತಗಳಿಂದ ಗೆಲ್ತೇವೆ, ಬೀದರ್ ಅಭಿವೃದ್ಧಿ ಆಗುತ್ತದೆ. ಇದಕ್ಕಾಗಿ ನಿಮಗೆ ನಾನು ಕೈಮುಗಿಯುತ್ತೇನೆ, ಕಾಲಿಗೆ ಬಿದ್ದು ನಮಸ್ಕರಿಸುತ್ತೇನೆ ಎಂದು ಹೇಳಿ ವೇದಿಕೆ ಮೇಲೆ ಕುಳಿತಿದ್ದ ಬಿವೈ ವಿಜಯೇಂದ್ರ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದರು.