ಸಾರಾಂಶ
ವಿಧಾನಸಭೆ : ನಕ್ಸಲ್ ಪೀಡಿತ ಪ್ರದೇಶದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿ ರಾತ್ರಿಯಿಡೀ ನಿದ್ದೆಗೆಟ್ಟ ಸ್ವಾರಸ್ಯಕರ ಘಟನೆಯನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿವರಿಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ನಕ್ಸಲ್ ಶರಣಾಗತಿ ವಿಚಾರ ಪ್ರಸ್ತಾಪಿಸಲಾಯಿತು. ಅದರಲ್ಲಿ ಪಾಲ್ಗೊಂಡ ಆರ್.ಅಶೋಕ್, ನಾನು ಆರೋಗ್ಯ ಸಚಿವನಾಗಿದ್ದಾಗ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ತೆರಳಿದ್ದೆ. ಆಗ ನಕ್ಸಲ್ ಪೀಡಿತ ಪ್ರದೇಶದ ಮಾರ್ಗದಲ್ಲಿ ಸಂಚರಿಸುವಾಗ ಸೈರನ್ ಹಾಕದಂತೆ ತಿಳಿಸಿ, ಎಚ್ಚರಿಕೆಯಿಂದ ಪೊಲೀಸರು ನನ್ನನ್ನು ಕರೆದುಕೊಂಡು ಹೋದರು. ನಂತರ ರಾತ್ರಿ ಅದೇ ಭಾಗದ ಸರ್ಕಾರಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದೆ. ಮೊದಲೇ ನಕ್ಸಲರ ಭಯವಿದ್ದ ಪ್ರದೇಶವಾದ್ದರಿಂದ ಸಣ್ಣ ಶಬ್ದವಾದರೂ ಭಯಪಡುವಂತಾಗಿತ್ತು. ರಾತ್ರಿಯಿಡೀ ಖುರ್ಚಿಯಲ್ಲೇ ಕೂತು ಕಾಲ ಕಳೆದೆ. ಅಷ್ಟು ಭಯದ ವಾತಾವರಣ ಅಲ್ಲಿತ್ತು ಎಂದು ತಿಳಿಸಿದರು.
ಅದಕ್ಕೂ ಮುನ್ನ ಮಾತನಾಡಿದ ಬಿಜೆಪಿಯ ಸುನೀಲ್ಕುಮಾರ್, ರಾಜ್ಯದಲ್ಲಿ ದಶಕಗಳ ಕಾಲ ಪೊಲೀಸರಿಗೂ ಸಿಗದ ನಕ್ಸಲೀಯರು ಸಿಎಂ ಸಿದ್ದರಾಮಯ್ಯ ಅವರು ಶರಣಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ ಕೆಲ ದಿನಗಳಲ್ಲಿಯೇ ಶರಣಾಗುತ್ತಾರೆ. ಇದರ ಮರ್ಮ ಅರ್ಥವಾಗುವುದಿಲ್ಲ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ನಕ್ಸಲರಿಂದ ಹತ್ಯೆಗಳು ನಡೆದಿವೆ. ಜನರು ಭಯದಲ್ಲಿಯೇ ಜೀವಿಸುತ್ತಿದ್ದರು ಎಂದರು.