ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಸ್ವರ್ಗ ಪ್ರಾಪ್ತಿ: ಚುಂಚಶ್ರೀ

| Published : Jul 04 2024, 01:03 AM IST

ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಸ್ವರ್ಗ ಪ್ರಾಪ್ತಿ: ಚುಂಚಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿ ಜ್ಞಾನ ಅಂಕುರವಾಗಿ ಮುಂದೆ ಜೀವನದಲ್ಲಿ ದಾರಿದೀಪವಾಗುತ್ತದೆ. ಜ್ಞಾನವಿರುವಲ್ಲಿ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಂಡು ಜೀವನ ಸಾರ್ಥಕತೆ ಹೊಂದಬಹುದು. ಜ್ಞಾನಕ್ಕೆ ಬೇಕಾದ ಅಕ್ಷರಾಭ್ಯಾಸಕ್ಕೆ ಚುಂಚಶ್ರೀಗಳಿಂದ ಪಡೆಯುತ್ತಿರುವ ನೀವೇ ಧನ್ಯರು, ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದಾಗ ಅವರಿಂದ ಸ್ವರ್ಗ ಮತ್ತು ಮೋಕ್ಷ ದೊರೆಯುತ್ತದೆ. ಮಗುವಿಗೆ ಜನ್ಮಸ್ಥಳವೇ ಮೊದಲ ಪಾಠಶಾಲೆ, ಜನ್ಮದಾತೆ ತಾಯಿಯೇ ಮೊದಲ ಗುರು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿರವರು ತಿಳಿಸಿದರು.

ನಗರ ಹೊರವಲಯದ ಸೂಲಾಲಪ್ಪ ದಿನ್ನೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಬಿಜಿಎಸ್ ವರ್ಲ್ವ್ ಸ್ಕೂಲ್, ಬಿಜಿಎಸ್ ಆಂಗ್ಲಶಾಲೆ ಅಗಲಗುರ್ಕಿ ಮತ್ತು ಬಿಜಿಎಸ್ ಶಾಲೆ ಮಂಚನಬಲೆಯ ಶಿಕ್ಷಣ ಸಂಸ್ಥೆಗಳ 300 ಪುಟಾಣಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಪ್ರಥಮ ಅಕ್ಷರಾಭ್ಯಾಸದ ಕಾರ್ಯಕ್ರಮ ಜ್ಞಾನಾಂಕುರ - 2024ರ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಮುಂದೆ ಜಗಳ, ಮುನಿಸು,ಬೈಗುಳಗಳಂತಹುದನ್ನು ಮಾಡಬೇಡಿ, ಮಾಡಿದರೆ ನಿಮ್ಮ ಮಗು ನಾಳೆ ಅದನ್ನೇ ಕಲಿಯುತ್ತದೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಮಕ್ಕಳ ಮೊದಲ ತಪ್ಪಿಗೆ ಹೆತ್ತವರು ಶಿಕ್ಷೆ ನೀಡಿದರೆ ಮುಂದೆ ಆ ಮಕ್ಕಳು ತಪ್ಪು ಮಾಡಲು ಹೆದರುತ್ತವೆ. ಎಲ್ಲಾ ಮಕ್ಕಳಿಗೂ ಸಂಸ್ಕಾರ ಜನ್ಮದಿಂದಲೇ ಮನಸ್ಸಿನಲ್ಲಿರುತ್ತದೆ, ಪೋಷಕರು ನೀರೆರೆದು ಬೆಳೆಸಿ, ಪೋಷಿಸಿದಾಗ ಮಕ್ಕಳು ಸಮಾಜ ಮತ್ತು ದೇಶಕ್ಕೆ ಗೌರವ ತರುತ್ತಾರೆ. ಮಕ್ಕಳ ಅಕ್ಷರಭ್ಯಾಸ ಇಲ್ಲಿ ಸಾಂಕೇತಿಕ ಮಾತ್ರ, ಆದರೆ ಪೋಷಕರು ನಿಮ್ಮ ಸಂಪ್ರದಾಯ, ಸಂಸ್ಕಾರ, ಆಚರಣೆಗಳನ್ನು ಕಲಿಸುವುದರೊಂದಿಗೆ ನಾಡು-ನುಡಿಗೆ, ಗುರು-ಹಿರಿಯರಿಗೆ, ಮಾತಾ-ಪಿತೃಗಳಿಗೆ ಗೌರವ ನೀಡುವುದನ್ನು ತಿಳಿಸಬೇಕು ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ಮಾತನಾಡಿ, ಮಕ್ಕಳಲ್ಲಿ ಜ್ಞಾನ ಅಂಕುರವಾಗಿ ಮುಂದೆ ಜೀವನದಲ್ಲಿ ದಾರಿದೀಪವಾಗುತ್ತದೆ. ಜ್ಞಾನವಿರುವಲ್ಲಿ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಂಡು ಜೀವನ ಸಾರ್ಥಕತೆ ಹೊಂದಬಹುದು. ಜ್ಞಾನಕ್ಕೆ ಬೇಕಾದ ಅಕ್ಷರಾಭ್ಯಾಸಕ್ಕೆ ಚುಂಚಶ್ರೀಗಳಿಂದ ಪಡೆಯುತ್ತಿರುವ ನೀವೇ ಧನ್ಯರು, ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ವಿಭಾಗದ ಆಡಳಿತಾಧಿಕಾರಿ ಡಾ. ಎನ್.ಶಿವರಾಮ ರೆಡ್ಡಿ ಮಾತನಾಡಿ, ಮಕ್ಕಳಿಗೆ ಶಾಲೆಗಳು ಶಾಸ್ತ್ರೋಕ್ತವಾಗಿ ವಿದ್ಯೆ ಕಲಿಸಬಹುದು. ಆದರೆ ಸಂಸ್ಕಾರ ಮತ್ತು ಜೀವನ ಮೌಲ್ಯವನ್ನು ಪೋಷಕರು ಕಲಿಸಬೇಕು. ಮಗುವನ್ನು ಶಾಲೆಗೆ ಕಳುಹಿಸಿದರೆ ಮಗು ಶಾಲೆಯಲ್ಲಿ ಎಲ್ಲಾ ಕಲಿಯುತ್ತದೆ ಎಂಬ ತಪ್ಪು ಗ್ರಹಿಕೆ ಪೋಷಕರಲ್ಲಿದೆ. ಉತ್ತಮ ಶಾಲೆ ಎಷ್ಟು ಮುಖ್ಯವೋ, ಉತ್ತಮ ಪೋಷಕರೂ ಅಷ್ಟೇ ಮುಖ್ಯ. ಅತಿಯಾದ ಪ್ರೀತಿಯಿಂದ ಮಕ್ಕಳು ಹಾದಿ ತಪ್ಪುತ್ತಾರೆ. ಮಗುವಿಗೆ ಕನಿಷ್ಠ 18 ವರ್ಷಗಳಾಗುವವರೆಗೂ ಪೋಷಕರು ಮಕ್ಕಳ ಮೇಲೆ ನಿಗಾವಹಿಸಿ ತಪ್ಪು ದಾರಿ ಹಿಡಿಯದಂತೆ ನೋಡಿಕೊಳ್ಳಬೇಕು ಎಂದರು.

ಯಾವ ಮಕ್ಕಳೂ ಎಳೆಯರಲ್ಲ, ಅವರ ವಯಸ್ಸಿಗೆ ಅವರು ಶಕ್ತಿವಂತರೇ. ಅವರ ಕೆಲಸಗಳನ್ನು ಅವರಿಗೇ ಮಾಡಿಕೊಳ್ಳಲು ತಿಳಿಸಿ, ಮಕ್ಕಳಿಗೆ ಪೋಷಕರು ಮೊಬೈಲ್ ಕೊಟ್ಟು ಕೂರಿಸಬೇಡಿ, ಮಕ್ಕಳನ್ನು ಚಿಕ್ಕವಯಸ್ಸಿನಲ್ಲೇ ಸಂಸ್ಕಾರವಂತರನ್ನಾಗಿ ಮಾಡಿ ಎಂದು ಪೋಷಕರಿಗೆ ತಿಳಿ ಹೇಳಿದರು.

ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಸಾಯಿ ಕೀರ್ತಿನಾಥ ಸ್ವಾಮೀಜಿ, ಭಾರತ ಸರ್ಕಾರದ ಎಡಿಸಿ ಲಕ್ಷ್ಮಣ್. ನವ ದೆಹಲಿ ಕನ್ನಡ ಸಂಘಟನೆಯ ಅಧ್ಯಕ್ಷ ನಾಗರಾಜ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮನೀಷ್, ಎಸ್‌ಜೆಸಿ ಇಂಜನಿಯರಿಂಗ್ ಕಾಲೇಜು ಪ್ರಾಂಶುಪಾಲರು ಡಾ.ಜಿ.ಟಿ.ರಾಜು, ಅಗಲಗುರ್ಕಿ ಬಿಜಿಎಸ್ ಶಾಲೆಯ ಪ್ರಾಂಶುಪಾಲರು ಡಿ.ಸಿ.ಮೋಹನ್‌ಕುಮಾರ್, ಬಿಜಿಎಸ್ ವರ್ಲ್ವ್ ಸ್ಕೂಲ್ ಪ್ರಾಂಶುಪಾಲರು ಗಿರಿಬಾಬು , ಬಿಜಿಎಸ್ ಶಾಲೆ ಮಂಚನಬಲೆಯ ಪ್ರಾಂಶುಪಾಲರು ಜಿ,ವಿ,ಗಂಗಾಧರ್, ಬಿಜಿಎಸ್ ಶಾಲೆಗಳ ಶಿಕ್ಷಕರು, ಗಣ್ಯರು, ಸಿಬ್ಬಂದಿ ವರ್ಗದವರು, ಪೋಷಕರು ಹಾಗೂ ಪುಟಾಣಿ ಮಕ್ಕಳು ಇದ್ದರು.