ರಜಾಕಾರರ ಕ್ರೂರ ಕೃತ್ಯಕ್ಕೆ ಅಮಾಯಕರ ಬಲಿ: ಮಾಳಪ್ಪ

| Published : Sep 19 2025, 01:00 AM IST

ಸಾರಾಂಶ

ದೇಶ ಸ್ವತಂತ್ರ್ಯಗೊಂಡ ನಂತರ ಯಾವುದೇ ಪ್ರಾಂತಕ್ಕೆ ಸೇರದೆ, ಸ್ವತಂತ್ರವಾಗಿ ಉಳಿದ ಹೈದರಾಬಾದ್‌ ಸಂಸ್ಥಾನದ ನಿಜಾಮನ ಅಧೀನದಲ್ಲಿದ್ದ ಹೈದರಾಬಾದ್‌ ಕರ್ನಾಟಕ ಪ್ರದೇಶದ ಸಾವಿರಾರು ಅಮಾಯಕ ಜನರು ರಜಾಕಾರರ ಕ್ರೂರಕೃತ್ಯಗಳಿಗೆ ಬಲಿಯಾಗಿದ್ದಾರೆ ಎಂದು ದೈಹಿಕ ಶಿಕ್ಷಕ ಮಾಳಪ್ಪ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಸೈದಾಪುರ

ದೇಶ ಸ್ವತಂತ್ರ್ಯಗೊಂಡ ನಂತರ ಯಾವುದೇ ಪ್ರಾಂತಕ್ಕೆ ಸೇರದೆ, ಸ್ವತಂತ್ರವಾಗಿ ಉಳಿದ ಹೈದರಾಬಾದ್‌ ಸಂಸ್ಥಾನದ ನಿಜಾಮನ ಅಧೀನದಲ್ಲಿದ್ದ ಹೈದರಾಬಾದ್‌ ಕರ್ನಾಟಕ ಪ್ರದೇಶದ ಸಾವಿರಾರು ಅಮಾಯಕ ಜನರು ರಜಾಕಾರರ ಕ್ರೂರಕೃತ್ಯಗಳಿಗೆ ಬಲಿಯಾಗಿದ್ದಾರೆ ಎಂದು ದೈಹಿಕ ಶಿಕ್ಷಕ ಮಾಳಪ್ಪ ಅವರು ತಿಳಿಸಿದರು.

ಸಮೀಪದ ಬದ್ದೇಪಲ್ಲಿ ಗ್ರಾಮದ ನೋಬಲ್ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬ್ರಿಟನ್ನಿನ ಸಂಸತ್ತು 1947 ಜುಲೈ 16 ರಂದು ಭಾರತ ಸ್ವಾತಂತ್ರ‍್ಯ ಶಾಸನವನ್ನು ಜಾರಿಗೆ ತಂದಿತು. ಇದರ ಪ್ರಕಾರ ಒಟ್ಟು 562 ಸಂಸ್ಥಾನಗಳು ಪಾಕಿಸ್ತಾನ ಮತ್ತು ಭಾರತಕ್ಕೆ ಸೇರಬಹುದಾಗಿತ್ತು. ಆದರೆ ಜುನಾಗಡ, ಜಮ್ಮು ಕಾಶ್ಮೀರ ಇವುಗಳ ಪೈಕಿ ಒಂದಾದ ಹೈದರಾಬಾದ್‌ ಸಂಸ್ಥಾನದಲ್ಲಿ ಕಾಸೀಂ ರಜ್ವಿ ಎಂಬ ಭಯೋತ್ಪಾದಕನ ರಜಾಕಾರರ ಕೃತ್ಯವು ಸ್ಥಳೀಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿತು. ಅಂದಿನ ಗೃಹ ಮಂತ್ರಿ ಸರ್ದಾರ್‌ ಪಟೇಲರ ಪೊಲೀಸ್‌ ಕಾರ್ಯಾಚರಣೆಯಿಂದಾಗಿ ಹೈದರಾಬಾದ್‌ ಕರ್ನಾಟಕವನ್ನು ನಿಜಾಮನ ಹಿಡಿತದಿಂದ ತಪ್ಪಿಸಿ ಭಾರತದ ಒಕ್ಕೂಟಕ್ಕೆ ಸೇರಿಸಲಾಯಿತು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ, ಮಹಾತ್ಮಾಗಾಂಧಿ, ಡಾ. ಬಿ. ಆರ್‌. ಅಂಬೇಡ್ಕರ್, ಸರ್ದಾರ್ ವಲ್ಲಭಭಾಯ್‌ ಪಟೇಲ್ ಸೇರಿದಂತೆ ವಿಶ್ವಕರ್ಮಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನವೀನ ಕುಮಾರ ಯಾದವ, ಶಿಕ್ಷಕರಾದ ಅಬೀನ ಥಾಮಸ್, ಸಾವಿತ್ರಿ, ಮಮತಾ, ಸುಪ್ರಿಯಾ, ಸುರೇಖಾ, ಅಕ್ಷರಾ, ರಂಜಿತಾ, ರೇಣುಕಾ, ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಸೈದಾಪುರ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಆಚರಣೆ:

ನಿಜಾಮನ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸುವಲ್ಲಿ ಸರ್ದಾರ್‌ ವಲ್ಲಭಭಾಯ್‌ ಪಟೇಲರು ಮತ್ತು ಸ್ಥಳೀಯ ಹೊರಾಟಗಾರರ ತ್ಯಾಗ, ಬಲಿದಾನದ ಪ್ರತೀಕ ನಮ್ಮ ಈ ಸ್ವಾತಂತ್ರ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಬಾದಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವೆಂಕಟೇಶ ಪಾಲಾದಿ, ಮುಖ್ಯಗುರು ಬಿ. ಬಿ. ವಡವಟ್, ಹಿರಿಯ ಶಿಕ್ಷಕಿ ರಾಧಾ ಸಂಗೋಳಿಗಿ, ಕಾಸಿಂಬೀ ಐ. ಕೊನಂಪಲ್ಲಿ, ಸಂತೋಷ ದೇಸಾಯಿ, ಕಾಶೀನಾಥ ಶೆಟ್ಟಿಹಳ್ಳಿ, ಸುನೀತಾ ತಾರೇಶ, ದೇವೀಂದ್ರಕುಮಾರ ಬಾಗ್ಲಿ, ಬಸಮ್ಮ ಕಲಬುರಗಿ, ಶಾರದಾ, ಮೋನಿಕಾ ಶೆಟ್ಟಿಹಳ್ಳಿ ಸೇರಿದಂತೆ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದರು.