ಸಾರಾಂಶ
25 ವರ್ಷಗಳ ಬಳಿಕ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದು, ಆತ್ಮಲಿಂಗ ದರ್ಶನ ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ
ಗೋಕರ್ಣ: 25 ವರ್ಷಗಳ ಬಳಿಕ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದು, ಆತ್ಮಲಿಂಗ ದರ್ಶನ ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ನನಗೆ ಆ ಭಾಗ್ಯ ಸಿಕ್ಕಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ಅವರು ಬುಧವಾರ ಮಹಾಬಲೇಶ್ವರ ಮಂದಿರಕ್ಕೆ ಆಗಮಿಸಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಡಿನ ಒಳತಿಗಾಗಿ ಪ್ರಾರ್ಥಿಸಿದ್ದೇನೆ. ಇಲಾಖೆಯ ಕಾರ್ಯ ಚಟುವಟಿಕೆ, ಕಾನೂನು ಸುವ್ಯವಸ್ಥೆಯ ವಿಚಾರ ಚರ್ಚೆಗೆ ಜಿಲ್ಲೆಗೆ ಬಂದಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ದೇವಾಲಯದಲ್ಲಿ ರಾಜಕೀಯ ವಿಷಯ ಬೇಡ:
ದೇವಾಲಯದ ಆವರಣದಲ್ಲಿ ರಾಜಕೀಯ ವಿಷಯಗಳ ಪ್ರಶ್ನೆ ಕೇಳಬೇಡಿ ಎಂದು ಸುದ್ದಿಗಾರರಿಗೆ ಮನವಿ ಮಾಡಿದರು. ಅದಾಗಿಯೂ ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆಬ್ಬಿಸಿದ ಹನಿಟ್ರ್ಯಾಪ್ ಹಾಗೂ ಶಾಸಕರ ಅಮಾನತು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದನ ನಡೆಸುವ ಸಭಾಧ್ಯಕ್ಷರಿಗೆ ಎಲ್ಲವೂ ಗೊತ್ತಿದೆ. ಅವರು ಶಾಸಕರ ಅಮಾನತು ಮಾಡಿದ್ದು, ಅವರ ನಿರ್ಣಯವನ್ನು ನಾವು ಪ್ರಶ್ನಿಸುವುದಿಲ್ಲ. ಸಭಾಧ್ಯಕ್ಷರ ನಿರ್ಣಯ ಗೌರವಿಸುತ್ತೇವೆ ಎಂದು ಪ್ರತಿಕ್ರಿಯಿಸಿ ಪರೋಕ್ಷವಾಗಿ ಈ ಬಿಜೆಪಿ ಶಾಸಕರ ಅಮಾನತು ಪ್ರಕರಣವನ್ನು ಸ್ವಾಗತಿಸುತ್ತೇವೆ ಎಂದರು.
ಹನಿಟ್ರ್ಯಾಪ್ ವಿಷಯವಾಗಿ ಪ್ರಶ್ನಿಸಿದಾಗ, ರಾಜಣ್ಣ ದೂರು ನೀಡಿಲ್ಲ. ಅವರು ನನಗೆ ಮನವಿ ನೀಡಿದ್ದಾರೆ. ಕಾನೂನಿನ ಪ್ರಕಾರ ಅವರು ನನಗೆ ಮನವಿ ನೀಡಬಹುದೇ ವಿನಃ ದೂರು ನೀಡಲು ಬರುವುದಿಲ್ಲ. ದೂರು ನೀಡುವುದಾದರೆ ಪೊಲೀಸ್ ಠಾಣೆಗೆ ದೂರು ಕೊಡಬೇಕು. ಅವರು ಕೊಟ್ಟ ಮನವಿಯನ್ನು ಕಾನೂನಿನ ಚೌಕಟ್ಟಿನ ಅಡಿ ಪರಿಶೀಲಿಸುವೆ ಎಂದು ಹೇಳಿದರು.