ಸಾರಾಂಶ
ಬಂಜೆತನ ಚಿಕಿತ್ಸೆ ನೀಡಬಹುದಾದ ಮತ್ತೊಂದು ವಿಧದ ವೈದ್ಯಕೀಯ ಸ್ಥಿತಿಯಾಗಿದೆ ಎಂದು ಡಾ.ವಿಜಯಲಕ್ಷ್ಮೀ ತುಂಗಳ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಬಂಜೆತನ ಚಿಕಿತ್ಸೆ ನೀಡಬಹುದಾದ ಮತ್ತೊಂದು ವಿಧದ ವೈದ್ಯಕೀಯ ಸ್ಥಿತಿಯಾಗಿದೆ ಎಂದು ಡಾ.ವಿಜಯಲಕ್ಷ್ಮೀ ತುಂಗಳ ಹೇಳಿದರು.ಇಲ್ಲಿನ ಶಾರದಾ ಆಸ್ಪತ್ರೆಯಲ್ಲಿ ಹುಬ್ಬಳ್ಳಿಯ ನೋವಾ ಐವಿಫ್ ಫರ್ಟಿಲಿಟಿ ಸೆಂಟರ್ ಸಹಯೋಗದಲ್ಲಿ ಏರ್ಪಡಿಸಿದ್ದ ಬಂಜೆತನ ಉಚಿತ ತಪಾಸಣೆ ಶಿಬಿರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಂಜೆತನ ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ, ಇದಕ್ಕಾಗಿಯೇ ಐವಿಎಫ್ ಸೇವೆ ನೀಡಲಾಗುತ್ತಿದೆ. ಇನ್ವಿಟ್ರೋಫಲೀಕರಣ ಎಂದು ಕರೆಯಲ್ಪಡುವ ಈ ಚಿಕಿತ್ಸೆಯಲ್ಲಿ ಅಂಡಾಶಯ ದಿಂದ ಮೊಟ್ಟೆಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ವೀರ್ಯದಿಂದ ಫಲವತ್ತಾಗಿಸಿ ನಂತರ ಗರ್ಭಾಶಯದಲ್ಲಿ ಇರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಮೂರು ತಿಂಗಳ ಚಿಕಿತ್ಸೆಯಾಗಿದ್ದು, ಇದನ್ನು ಕನ್ನಡದಲ್ಲಿ ಸಹಾಯಕ ಸಂತಾನೋತ್ಪತ್ತಿ ಎಂದು ಕರೆಯಲಾಗುತ್ತದೆ ಎಂದರು.ಇಂದಿನ ದಿನದಲ್ಲಿ ಸಾಕಷ್ಟು ಜನಪ್ರೀಯವಾಗಿರುವ ಈ ಚಿಕಿತ್ಸೆಯಿಂದ ಸಾಕಷ್ಟು ದಂಪತಿ ಸಂತಾನ ಭಾಗ್ಯ ಪಡೆದಿದ್ದಾರೆ ಎಂದು ಡಾ.ತುಂಗಳ ತಿಳಿಸಿದರು. ಜಮಖಂಡಿಯ ಶಾರದಾ ಆಸ್ಪತ್ರೆಯಲ್ಲಿ ಐವಿಎಫ್ ಚಿಕಿತ್ಸೆ ಲಭ್ಯವಿದೆ. ದಂಪತಿಯನ್ನು ಪರೀಕ್ಷಿಸಿ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ ಎಂದರು. ನೋವಾ ಫರ್ಟಿಲಿಟಿ ಸೆಂಟರ್ ಹುಬ್ಬಳ್ಳಿಯ ವೈದ್ಯರಾದ ಡಾ.ಪವಿತ್ರಾ ಶ್ಯಾಮಸುಂದರ ಉಪಸ್ಥಿತರಿದ್ದರು.