ಸಾರಾಂಶ
ಬಿಜೆಪಿ ಮುಖಂಡ, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ಆರೋಪ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಪ್ರತಿಮನೆಗೂ ಪೈಪ್ ಲೈನ್ ಮಾಡಿ ನೀರು ನೀಡಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆ ಜಲ ಜೀವನ್ ಯೋಜನೆ ಎನ್.ಆರ್.ಪುರ ತಾಲೂಕಿನಲ್ಲಿ ಕಳಪೆ ಕಾಮಗಾರಿಯಾಗಿದ್ದು ಭ್ರಷ್ಟಾಚಾರದ ಶಂಕೆ ಮೂಡಿದೆ ಎಂದು ದೂರಿದ್ದಾರೆ.
ಎನ್.ಆರ್.ಪುರ ತಾಲೂಕಿನಲ್ಲಿ ಯೋಜನೆ ಲಂಚದ ಕೂಪಕ್ಕೆ ಸಿಲುಕಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ವ್ಯಾಪಕ ಭ್ರಷ್ಟಾಚಾರ ನಡೆದಿರುವ ಶಂಕೆಯಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.ಈ ಕುರಿತು ಪಿಆರ್ಇಡಿ ಇಲಾಖೆಗೆ, ಜಿಲ್ಲಾಧಿಕಾರಿಗಳು ಹಾಗೂ ಕೇಂದ್ರ ಜಲಜೀವನ್ ಮಿಷನ್ ಮುಖ್ಯಸ್ಥರಿಗೆ ದೂರು ನೀಡಲಾಗುವುದು. ಈಗಾಗಲೇ ಪಿಆರ್ಇಡಿ ಇಂಜಿನಿಯರ್ ಅವರಿಗೆ ಪೋನ್ ಮೂಲಕ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ನೋಡಿದರೆ ಇದರಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಒಂದು ಮೀಟರ್ ಆಳ ತೆಗೆದು ಪೈಪ್ಲೈನ್ ಮಾಡಬೇಕೆಂಬ ನಿಯಮವಿದ್ದರೂ ಸಹ ಕೆಲವೊಂದು ಕಡೆ ಕೇವಲ ಒಂದು ಅಡಿ ಆಳ ತೆಗೆದು ಪೈಪ್ ಹಾಕಿದ್ದಾರೆ. ಬಳಸಿರುವ ಪೈಪ್ನ ಗುಣಮಟ್ಟದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವಾಗ ಸ್ಥಳೀಯ ಗ್ರಾಪಂ ಪಿಡಿಒ, ಅಧ್ಯಕ್ಷರು ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಒಪ್ಪಿಗೆ ನೀಡಬೇಕು. ಇಲ್ಲವಾದರೆ ಕಾಮಗಾರಿ ಕಳಪೆಗೊಂಡಲ್ಲಿ ಗ್ರಾಪಂ ಅನ್ನೇ ಹೊಣೆಯಾಗಿಸಬೇಕು ಎಂದು ಹೇಳಿದ್ದಾರೆ.ಮಾಜಿ ಸಚಿವ ಡಿ.ಎನ್.ಜೀವರಾಜ್ ಮತ್ತು ಸಂಸದೆ ಶೋಭಾ ಕರಂದ್ಲಾಜೆಯವರ ಪರಿಶ್ರಮದಿಂದ ತಾಲೂಕಿಗೆ ಒಟ್ಟು 51.87 ಕೋಟಿ ರು. ಯೋಜನೆಗೆ ಬಿಡುಗಡೆಗೊಂಡಿದ್ದು, ಬಾಳೆಹೊನ್ನೂರಿನ ಕೆಇಬಿ ಕಾಲೋನಿಗೆ ರು. 1.95 ಕೋಟಿ, ಹೊಸಮನೆ-ಮಾಗೋಡಿಗೆ ರು.84 ಲಕ್ಷ, ಕಡ್ಲೆಮಕ್ಕಿ, ಮಠದ ಕಾಲೋನಿಗೆ 1.84 ಕೋಟಿ, ಮೆಣಸುಕೊಡಿಗೆ-ತಲವಾನೆಗೆ ರು.62 ಲಕ್ಷ, ಸೀಕೆ-ವಾಟುಕೊಡಿಗೆಗೆ ರು.87 ಲಕ್ಷ, ಕೆಸುವಿನಮನೆ ಮುದುಗುಣಿಗೆ ರು.1.12ಕೋಟಿ ಬಿಡುಗಡೆಯಾಗಿದೆ.
ಆದರೆ ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಯೋಜನೆ ಅದ್ವಾನದತ್ತ ಸಾಗಿದೆ. ಕ್ಷೇತ್ರದ ಶಾಸಕರು ನೈತಿಕತೆ ಇಲ್ಲದೆ ಕೇಂದ್ರದ ಯೋಜನೆಗೆ ತಮ್ಮ ಪೋಟೋ ಹಾಕಿಸಿಕೊಂಡು ಬ್ಯಾನರ್ ಕಟ್ಟಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಲೇವಡಿ ಮಾಡಿದರು. ಜಿಲ್ಲಾಧಿಕಾರಿ ಕಾಮಗಾರಿ ಪರೀಶೀಲಿಸಿ ಸರಿಪಡಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.೧೪ಬಿಹೆಚ್ಆರ್ ೨: ಭಾಸ್ಕರ್ ವೆನಿಲ್ಲಾ