ಸಾರಾಂಶ
ಉಡುಪಿ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಲಲಿತಾ ಪಂಚಮಿಯ ಪರ್ವಕಾಲದಲ್ಲಿ ಜೋಡಿ ಲಲಿತಾ ಸಹಸ್ರ ಕದಳಿಯಾಗ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಲಲಿತಾ ಪಂಚಮಿಯ ಪರ್ವಕಾಲದಲ್ಲಿ ಜೋಡಿ ಲಲಿತಾ ಸಹಸ್ರ ಕದಳಿಯಾಗ ಸಂಪನ್ನಗೊಂಡಿತು.ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಶ್ರೀ ಚಕ್ರಪೀಠಾರೂಢಳಾದ ರಾಜರಾಜೇಶ್ವರಿಗೆ ಸಲ್ಲಿಕೆಯಾಗುವ ಮಹಾನ್ ಯಾಗವೇ ಲಲಿತ ಸಹಸ್ರ ಕದಳಿಯಾಗ.
ಈ ಯಾಗದಲ್ಲಿ ಸಹಸ್ರ ಸಂಖ್ಯೆಯಲ್ಲಿ ಕದಳಿಹಣ್ಣನ್ನು ತ್ರಿಮಧುರಯುಕ್ತವಾಗಿ, ಲಲಿತಾಂಬಿಕೆಯನ್ನು ಸಹಸ್ರನಾಮಗಳಿಂದ ಸ್ತುತಿಸಿ ವಿವಿಧ ಕುಸುಮಗಳಿಂದ ಅರ್ಜಿಸಿ ಬಗೆಬಗೆಯ ಆರತಿ ಬೆಳಗಿ ಸಮಾಸ್ತ ಸಮಾಜಕ್ಕೆ ಆಕೆಯ ಅನುಗ್ರಹವನ್ನು ಯಾಚಿಸಲಾಯಿತುಕ್ಷೇತ್ರದ ಗುರುಗಳಾದ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನಲ್ಲಿ ನಡೆದ ಈ ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಕನ್ನಿಕರಾಧನೆಗಳು ನೆರವೇರಿತು. ಮಧ್ಯಾಹ್ನ ನಡೆದ ಮಹಾನ್ನಸಂತರ್ಪಣೆಯಲ್ಲಿ ಲಲಿತಾಂಬಿಕೆಗೆ ಪ್ರಿಯವಾದ ಹಾಲು ಪಾಯಸ, ರಂಭಾಪಾಕ, ಷಡ್ರಸನ್ನದಲ್ಲಿ ಶ್ರೇಷ್ಠವಾದ ಅತಿರಸವನ್ನು ಭಕ್ತರಿಗೆ ಉಣಬಡಿಸಲಾಯಿತು.
ದುರ್ಗಾ ಆದಿಶಕ್ತಿ ದೇವಿಯನ್ನು ಕಬ್ಬಿನ ಜಲ್ಲೆಗಳ ಮಧ್ಯೆ ಕಬ್ಬನ್ನು ಹಿಡಿದು ಕನ್ನಿಕೆಯಾಗಿ ವಿರಾಜಮಾನಾಳಾದಂತೆ ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿ ಅಲಂಕರಿಸಿದ್ದರು. ಪಂಚವರ್ಣಾತ್ಮಕ ಮಂಡಲದಲ್ಲಿ ಒಂದರಲ್ಲಿ ಲಲಿತಾಂಬಿಕೆ ಇನ್ನೊಂದರಲ್ಲಿ ಕಂದಮಾತೆಯನ್ನು ರಚಿಸಲಾಗಿತ್ತು.ಗತಕಾಲದ ಕ್ಷೇತ್ರ ಪರಂಪರೆ ಮತ್ತೆ ಮರುಕಳಿಸುವಂತೆ ಕ್ಷೇತ್ರದಲ್ಲಿ ಯಜ್ಞಯಾಗಾದಿಗಳು ಶಿಸ್ತುಬದ್ಧವಾಗಿ ಶಾಸ್ತ್ರಬದ್ಧವಾಗಿ ಸಂಪನ್ನಗೊಂಡು ಸಮರ್ಪಿಸಿದ ಯಜಮಾನವರ್ಗಕ್ಕೂ ನೋಡಿದ ಭಕ್ತರವರ್ಗಕ್ಕೂ ಕ್ಷೇಮ ದೊರಕುತ್ತಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.