ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಧರ್ಮ, ಭಾಷೆ, ಜಾತಿಯ ಹೆಸರಿನಲ್ಲಿ ದ್ವೇಷದ ಬೀಜ ಬಿತ್ತುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಯುವ ಪೀಳಿಗೆಯು ಅದಕ್ಕೆ ತಡೆಯೊಡ್ಡಿ ಭಾರತ ಛಿದ್ರವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ವಹಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಬಂಟಮಲೆ ಅಕಾಡೆಮಿ ಗುತ್ತಿಗಾರು ಸುಳ್ಯ ವತಿಯಿಂದ ನಗರದ ಬಲ್ಮಠ ಸಹೋದಯ ಸಭಾಂಗಣದಲ್ಲಿ ನಡೆದ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಅವರ ಬದುಕು ಮತ್ತು ಕೊಡುಗೆಗಳ ಕುರಿತ ‘ಜನಪ್ರಗತಿಯ ಪಂಜು’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿಂದೆ ರಾಜಕೀಯ, ಸಾಮಾಜಿಕ ಪ್ರಜ್ಞೆ ಬೆಳೆಸುವಲ್ಲಿ ಪತ್ರಕರ್ತರು ಮುಂಚೂಣಿಯಲ್ಲಿದ್ದರು. ಕಲ್ಲೆ ಶಿವೋತ್ತಮ ರಾವ್ ಪತ್ರಕರ್ತರಾಗಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದ ಅವರು, ಉತ್ತರ ಭಾರತಕ್ಕೆ ಹೋಲಿಸಿದರೆ ಅನೇಕ ಸಮಾಜ ಸುಧಾರಕನ್ನು ದಕ್ಷಿಣ ಭಾರತದ ರಾಜ್ಯಗಳು ಕಂಡಿವೆ. ಅದಕ್ಕೆ ಅಂದಿನ ಪತ್ರಕರ್ತರ ಕೊಡುಗೆಯೂ ಇದೆ ಎಂದರು.‘ಜನಪ್ರಗತಿಯ ಪಂಜು’ ಪುಸ್ತಕದ ಸಂಪಾದಕ ‘ಪಾರ್ವತೀಶ ಬಿಳಿದಾಳೆ’ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟಮಲೆ ಅಕಾಡೆಮಿ ಪ್ರಶಸ್ತಿ ಕುರಿತು ನಾಟಕಕಾರ ಎ.ಕೆ. ಹಿಮಕರ ಮಾತನಾಡಿದರು.ಇದೇ ಸಂದರ್ಭ ಕಲ್ಲೆ ಶಿವೋತ್ತಮ ರಾವ್ ಅವರಿಗೆ ಕುವೆಂಪು ಬಂಟಮಲೆ ಪ್ರಶಸ್ತಿಯನ್ನು ಶಿಕ್ಷಣ ತಜ್ಞ ಡಾ.ಎನ್. ಸುಕುಮಾರ ಗೌಡ ಪ್ರದಾನಿಸಿದರು. ಕಲ್ಲೆ ಶಿವೋತ್ತಮ ರಾವ್ ಪರವಾಗಿ ಅವರ ಪುತ್ರ ಅಜಿತ್ ಅಶುತೋಷ್ ಕಲ್ಲೆ ಮತ್ತು ಪುತ್ರಿ ಅಲಕಾ ಸ್ವರೂಪ ಕಲ್ಲೆ ಪ್ರಶಸ್ತಿ ಸ್ವೀಕರಿಸಿದರು. ಚಿಂತಕ ಡಾ. ಪುರುಷೋತ್ತಮ ಬಿಳಿಮಲೆ ಕಲ್ಲೆ ಶಿವೋತ್ತಮ ರಾವ್ ಬದುಕು ಹಾಗೂ ಕೊಡುಗೆ ಬಗ್ಗೆ ಮಾತನಾಡಿದರು.