ಸಾರಾಂಶ
ಬೇಲೂರು: ಶಿಥಿಲಗೊಂಡಿರುವ ಯಗಚಿ ನದಿಯ ಹಳೇ ಸೇತುವೆ ದುರಸ್ತಿಗೆ ಆಗ್ರಹಿಸಿ, ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇತುವೆ ಮೇಲೆ ಅಡುಗೆ ತಯಾರಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣ ಬಳಿಯ ಯಗಚಿ ನದಿಯ ಹಳೇ ಸೇತುವೆ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಸೇತುವೆಯ ಮೇಲೆ ಅಡುಗೆ ತಯಾರಿಸುವ ಮೂಲಕ ಪ್ರತಿಭಟಿಸಿದರು. ಈ ಸಂದರ್ಭ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, 150 ವರ್ಷ ಹಳೆಯದಾದ ಸೇತುವೆ ಇಂದು ಅವನತಿಯತ್ತ ಸಾಗುತ್ತಿದೆ. ಪ್ರತಿವರ್ಷ ಕರವೇ ಘಟಕದಿಂದ ಪ್ರತಿಭಟಿಸಿ ಎಚ್ಚರಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಪ್ರತಿಭಟನೆ ವೇಳೆ ಸ್ಥಳಕ್ಕಾಗಮಿಸುವ ಅಧಿಕಾರಿಗಳು ಏನಾದರೊಂದು ಸಬೂಬು ಹೇಳಿ ಶೀಘ್ರವೇ ಕೆಲಸ ಆರಂಭಿಸುವ ಭರವಸೆ ನೀಡಿ ತೆರಳುತ್ತಾರೆಯೇ ಹೊರತು ದುರಸ್ತಿಗೆ ಮುಂದಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸೇತುವೆಯ ಎರಡೂ ಬದುಗಳಲ್ಲಿ ಗಿಡಗಂಟಿಗಳು ಬೆಳೆದು ಸೇತುವೆ ಕಲ್ಲುಗಳು ಉದುರುತ್ತಿದ್ದರೂ ಯಾರೂ ಗಮನ ಹರಿಸುತ್ತಿಲ್ಲ. ಬೇಲೂರು ಶಾಸಕರು ಯಗಚಿ ಹಳೆಯ ಸೇತುವೆ ತೆರವುಗೊಳಿಸುವ ಬಗ್ಗೆ ಮುಂದಾದರೆ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಸೂಕ್ತ ಅನುದಾನ ಬಿಡುಗಡೆ ಮಾಡಿ ಮೇಲ್ನೋಟಕ್ಕೆ ಚಂದ ಕಾಣುವಂತೆ ಡಾಂಬರ್ ಹಾಕಿಸಿ, ಗಿಡಗಂಟಿಗಳನ್ನು ಕತ್ತರಿದ್ದರು. ಆದರೆ ಕೆಲದಿನಗಳ ನಂತರ ಗಿಡಗಳು ಮರಗಳಾಗಿ ಬೆಳೆದಿವೆ. ಡಾಂಬರ್ ಕಿತ್ತು ಗುಂಡಿ ಬಿದ್ದಿದೆ. ಈ ಸೇತುವೆ ಮೇಲೆ ಭಾರೀ ವಾಹನಗಳು ಸೇರಿದಂತೆ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದು, ಅಪಾಯ ಸಂಭವಿಸುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಕರವೇ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಜಿಲ್ಲಾ ಉಪಾಧ್ಯಕ್ಷ ಸೀತಾರಾಂ, ಉಪಾಧ್ಯಕ್ಷ ಹನೀಫ್, ಗೌರವಾಧ್ಯಕ್ಷ ತಾರಾನಾಥ, ಕುಮಾರ್, ನಗರಾಧ್ಯಕ್ಷ ಮೋಹನಗೌಡ, ಮಹಿಳಾ ಘಟಕ ಅಧ್ಯಕ್ಷೆ ವಿಶಾಲಾಕ್ಷಿ, ಗಂಗರಾಜು, ಬಳ್ಳೂರು ಮದನ್, ಪ್ರಸನ್ನ, ಮಹೇಶ್, ಸೋಮಶೇಖರ ಇನ್ನೂ ಮುಂತಾದವರು ಹಾಜರಿದ್ದರು.=======================
ಚಿತ್ರ ೧ (ಬಿ.ಎಲ್.ಆರ್.ಪಿ):ಬೇಲೂರು ಪಟ್ಟಣದ ಯಗಚಿ ಹಳೆಯ ಸೇತುವೆ ಸಂರಕ್ಷಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಸೇತುವೆ ಮೇಲೆ ಅಡಿಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.