ಕುದುರೆಮುಖ ಉದ್ಯಾನವನ: ಬೆಳ್ತಂಗಡಿ ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಬೆಂಕಿ

| Published : Mar 18 2024, 01:46 AM IST

ಕುದುರೆಮುಖ ಉದ್ಯಾನವನ: ಬೆಳ್ತಂಗಡಿ ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಬೆಂಕಿ
Share this Article
  • FB
  • TW
  • Linkdin
  • Email

ಸಾರಾಂಶ

ಚಾರ್ಮಾಡಿ ಘಾಟಿ ಪರಿಸರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಳ್ತಂಗಡಿ ಅರಣ್ಯ ಇಲಾಖೆ ಸಿಬ್ಬಂದಿ ನೆರಿಯ ಮೂಲಕ ಅರಣ್ಯ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಇಲ್ಲಿನ ಖಾಸಗಿ ಜಾಗವೊಂದರ ಪರಿಸರದಲ್ಲಿ ಬೆಂಕಿ ಕಂಡುಬಂದಿದ್ದು, ಅದನ್ನು ಹತೋಟಿಗೆ ತರಲಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಿಭಾಗದ ಅರಣ್ಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ಹತೋಟಿಗೆ ತರಲು ಇಲಾಖೆ ಹರಸಾಹಸ ನಡೆಸುತ್ತಿದೆ.ಕುದುರೆಮುಖ ಪೀಕ್‌ ಕಡೆಯಿಂದ ಶನಿವಾರ ಸಂಜೆ ಬೆಂಕಿ ಆವರಿಸ ತೊಡಗಿದ್ದು ನಾವೂರು ಗ್ರಾಮದ ತೊಳಲಿ ಏಳು ಸುತ್ತು ಎಂಬಲ್ಲಿಯವರೆಗೆ ವ್ಯಾಪಿಸಿದೆ‌. ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಸಾಕಷ್ಟು ಒಣಗಿದ ಹುಲ್ಲು ಇರುವುದು ಬೆಂಕಿ ವೇಗವಾಗಿ ಹರಡಲು ಕಾರಣವಾಗುತ್ತಿದ್ದರೆ, ನಿಯಂತ್ರಿಸಲು ಅಡ್ಡಿಯಾಗುತ್ತಿದೆ.

ನಾವೂರು ಮುಖ್ಯರಸ್ತೆಯಿಂದ ಸುಮಾರು 10 ಕಿ.ಮೀ. ದೂರದಲ್ಲಿ ಬೆಂಕಿ ಕಂಡುಬಂದಿದ್ದು ಇಲ್ಲಿಗೆ 8 ಕಿ.ಮೀ. ಕಾಲ್ನಡಿಗೆ ಮೂಲಕವೇ ಸಾಗಬೇಕಾಗಿದೆ. ಅರಣ್ಯದಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದು ಅಗತ್ಯ ಸಲಕರಣೆಗಳನ್ನು ಒಯ್ಯಲು ಅಸಾಧ್ಯವಾಗಿರುವುದರಿಂದ ಈ ಪರಿಸರದಲ್ಲಿ ಸೊಪ್ಪಿನ ಮೂಲಕ ಹೊಡೆದು ಬೆಂಕಿ ನಂದಿಸಬೇಕಿದೆ.ಈ ಪ್ರದೇಶಕ್ಕೆ ತೆರಳುವಾಗ ಸಿಬ್ಬಂದಿ ಅಗತ್ಯವಾದ ನೀರು, ಆಹಾರವನ್ನು ಜತೆಗೆ ಒಯ್ಯಬೇಕು. ಬೆಳ್ತಂಗಡಿ ವನ್ಯಜೀವಿ ವಿಭಾಗದ ಪ್ರಭಾರ ಆರ್‌ ಎಫ್ ಒ ರಾಘವೇಂದ್ರ ಮತ್ತು ಸಿಬ್ಬಂದಿ ಭಾನುವಾರ ಬೆಳಗಿನ ಜಾವವೇ ಕಾರ್ಯಾಚರಣೆಗೆ ತೆರಳಿದ್ದು ಬೆಂಕಿ ಇನ್ನಷ್ಟು ಹರಡದಂತೆ ಕ್ರಮ ಕೈಗೊಂಡಿದ್ದಾರೆ ಇನ್ನೊಂದು ಭಾಗದಿಂದ ಕುದುರೆಮುಖ ಕಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಜೆ ವೇಳೆ ಕುದುರೆಮುಖ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಕುರಿತು ತಿಳಿದು ಬಂದಿದೆ.ಕಾರ್ಯಾಚರಣೆಗೆ ಉರಿ ಬಿಸಿಲು ಹಾಗೂ ಗಾಳಿ ಬೀಸುತ್ತಿರುವುದು ಅಡಚಣೆ ನೀಡುತ್ತಿದೆ. ಪರಿಸರದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿರುವುದು ಸಮಸ್ಯೆಯಾಗಿದೆ. ಕಳೆದ ವರ್ಷ ಈ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕಾಡ್ಗಿಚ್ಚು ನಿರ್ಮಾಣವಾಗಿ ಅರಣ್ಯ ನಾಶ ಉಂಟಾಗಿತ್ತು. ಇಲಾಖೆ ಅಹರ್ನಿಶಿ ಕಾರ್ಯಾಚರಣೆ ನಡೆಸಿದರೂ ಬೆಂಕಿ ಸಾಕಷ್ಟು ಪರಿಸರವನ್ನು ವ್ಯಾಪಿಸಿತ್ತು.ಸಿಬ್ಬಂದಿ ಪರಿಶೀಲನೆ: ಚಾರ್ಮಾಡಿ ಘಾಟಿ ಪರಿಸರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಳ್ತಂಗಡಿ ಅರಣ್ಯ ಇಲಾಖೆ ಸಿಬ್ಬಂದಿ ನೆರಿಯ ಮೂಲಕ ಅರಣ್ಯ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಇಲ್ಲಿನ ಖಾಸಗಿ ಜಾಗವೊಂದರ ಪರಿಸರದಲ್ಲಿ ಬೆಂಕಿ ಕಂಡುಬಂದಿದ್ದು, ಅದನ್ನು ಹತೋಟಿಗೆ ತರಲಾಯಿತು. ಉಳಿದಂತೆ ಚಾರ್ಮಾಡಿ ಘಾಟಿ ಪರಿಸರದ ಅರಣ್ಯದಲ್ಲಿ ಕಂಡು ಬರುತ್ತಿರುವ ಬೆಂಕಿ, ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದ ಪಸರಿಸುವ ಸಾಧ್ಯತೆ ಇಲ್ಲದ ಕಾರಣ ತಂಡ ಹಿಂದಿರುಗಿತು.