ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಡೆಂಘೀ ರೋಗ ಮಾರಕವಾಗಿ ಕಾಡುತ್ತಿರುವ ಬಗ್ಗೆ ಎಲ್ಲರಿಗೂ ಭಯವಿದೆ. ಆದರೆ ಡೆಂಘೀ ತಡೆಗಟ್ಟುವ ಅಥವಾ ನಿಯಂತ್ರಣದ ಬಗ್ಗೆ ಸ್ಪಷ್ಟ ಅರಿವಿನ ಕೊರತೆ ಇದೆ. ಡೆಂಘೀ ಸೊಳ್ಳೆಯಿಂದ ಹರಡುತ್ತಿದೆ, ಆದ್ದರಿಂದ ಸೊಳ್ಳೆ ನಿರ್ಮೂಲನೆ ಮುಖ್ಯವಾಗಿದ್ದು, ಅಗತ್ಯ ಮುಂಜಾಗ್ರತ ಕ್ರಮಗಳಿಂದ ಮಾತ್ರ ರೋಗ ನಿಯಂತ್ರಣ ಸಾಧ್ಯವೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ತಿಳಿಸಿದರು.ಪಟ್ಟಣದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಡೆಂಘೀ ಅರಿವಿನ ಜಾಥ ಹಾಗೂ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಡೆಂಘೀ ಸೊಳ್ಳೆಗಳು ನೀರಿನ ಬಾಟಲ್, ಪೇಪರ್ ಟೀ ಕಪ್ಗಳಲ್ಲಿಯೂ ಸಂಗ್ರಹವಾಗುವ ಸ್ವಲ್ಪ ನೀರಿನಲ್ಲೂ ಸಂತಾನೋತ್ಪತ್ತಿ ಮಾಡುತ್ತದೆ ಮತ್ತು ಸೊಳ್ಳೆಗಳು ನಿರ್ದಿಷ್ಟ ಸ್ಥಳಗಳಲ್ಲಿ ಇರುತ್ತದೆ, ಮುಂಜಾನೆ ಮತ್ತು ಸಂಜೆ ಹೆಚ್ಚು ಕಚ್ಚುವ ಡೆಂಘೀ ಸೊಳ್ಳೆಗಳು ರಾತ್ರಿ ಸೊಳ್ಳೆ ಪರದೇ ಒಳಗೆ ಮಲಗಿದಾಗ ಸೊಳ್ಳೆಗಳು ಮಲಗಿರುತ್ತೆ, ಆದರೆ ಹಗಲಿನಲ್ಲಿ ತನಕ ಕೆಲಸವನ್ನು ಪ್ರಾರಂಭಿಸಿ, ಇಂದು ಮಾರಕವಾಗಿ ಕಾಡುತ್ತಿದೆ ಎಂದು ವಿವರಿಸಿದರು.
ಪುರಸಭೆಯವರು ಹೊರಗೆ ಫಾಗಿಂಗ್ ಮಾಡುತ್ತಾರೆ, ಆದರೆ ಮನೆ ಒಳಗೆ ಫಾಗಿಂಗ್ ಮಾಡದೇ ಇರುವ ಕಾರಣ ಕಾಯಿಲೆ ಉಲ್ಪಣಿಸಿದೆ. ಆದ್ದರಿಂದ ಹಗಲಿನಲ್ಲೂ ಸೊಳ್ಳೆ ಕಡಿತ ನಿಯಂತ್ರಣ ಸಾಧನಗಳ ಬಳಕೆ ಮತ್ತು ಎಲ್ಲೂ ನೀರು ನಿಲ್ಲದಂತೆ ಜಾಗ್ರತೆ ವಹಿಸುವುದು ಸೇರಿದಂತೆ ಆರೋಗ್ಯ ಇಲಾಖೆ ತಿಳಿಸುವ ಸೂಚನೆಗಳ ಪಾಲನೆ ಜತೆಗೆ ಬಡಾವಣೆಯಲ್ಲಿ ಹೆಚ್ಚಿನ ಕಾಳಜಿಯೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು. ತಾ. ಆರೋಗ್ಯಾಧಿಕಾರಿ ಡಾ. ರಾಜೇಶ್ ಮಾತನಾಡಿದರು.ಪಟ್ಟಣದ ಚೆನ್ನಾಂಬಿಕ ವೃತ್ತದಿಂದ ಪ್ರಾರಂಭಗೊಂಡ ಜಾಥದಲ್ಲಿ ವಿದ್ಯಾರ್ಥಿನಿಯರು ಡೆಂಘೀ ನಿಯಂತ್ರಣ ಕುರಿತು ಅರಿವಿನ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರಾದ ರೋಜ ಕೆ.ಎಲ್., ವಿದ್ಯಾ, ಶೃತಿ, ವಂದನಾ, ನಿಸರ್ಗ, ಸುಪ್ರಿತಾ, ಪೂಜಾ, ಶಶಿಕಲಾ, ಇತರರು ಮಹಾತ್ಮಗಾಂಧಿ ವೃತ್ತದಲ್ಲಿ ಬೀದಿ ನಾಟಕ ಪ್ರದರ್ಶಿಸಿ, ನಾಗರಿಕರಲ್ಲಿ ಡೆಂಘೀ ನಿಯಂತ್ರಣ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದೇವರಾಜ್, ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಆಶಾ ಜ್ಯೋತಿ, ಉಪನ್ಯಾಸರಾದ ಡಾ.ಕೃಷ್ಣಮೂರ್ತಿ, ನಾಗೇಂದ್ರ ಹಾಗೂ ರಾಘವೇಂದ್ರ, ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್, ಮಾಜಿ ಅಧ್ಯಕ್ಷ ರೇಣುಕೇಶ್, ಸದಸ್ಯ ರವೀಶ್ ಇತರರು ಇದ್ದರು. *ಫೋಟೋ ಶೀರ್ಷಕೆ: ಹೊಳೆನರಸೀಪುರ, ಫೋಟೊ ೧,ಹೊಳೆನರಸೀಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜು ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಡೆಂಘೀ ಅರಿವಿನ ಜಾಥ ಹಾಗೂ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಾ. ರಾಜೇಶ್, ಡಾ.ಧನಶೇಖರ್, ಆಶಾಜ್ಯೋತಿ, ಡಾ. ಕೃಷ್ಣಮೂರ್ತಿ ಇದ್ದರು.