ಸರ್ಕಾರ ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದವರ ಜೀವನ ರೂಪಿಸಲಿ-ಶಾಸಕ ಶಿವಣ್ಣನವರ

| Published : Jan 25 2025, 01:02 AM IST

ಸಾರಾಂಶ

ನೈತಿಕ ಕ್ರಿಯಾಶೀಲತೆಯ ಪರಿಕಲ್ಪನೆ ಸೇರಿದಂತೆ ಸಮಾಜದಲ್ಲಿ ಉತ್ಕೃಷ್ಟತೆ ನಿರ್ಧರಿಸುವಲ್ಲಿ ಭಾಷೆ ಮತ್ತು ಸಾಹಿತ್ಯ ಪ್ರಮುಖವಾಗಿದ್ದು, ಮೂಲ ಸಾಕ್ಷರತೆಯಿಂದ ಸಾಂಸ್ಕೃತಿಕ ಸಾಕ್ಷರತೆ ಹಾಗೂ ವಿಮರ್ಶಾತ್ಮಕ ವಿಚಾರಗಳನ್ನು ಸಮಾಜ ಮತ್ತು ಸರ್ಕಾರದೆದುರು ಮಂಡಿಸುವ ಉದ್ದೇಶದಿಂದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ನೈತಿಕ ಕ್ರಿಯಾಶೀಲತೆಯ ಪರಿಕಲ್ಪನೆ ಸೇರಿದಂತೆ ಸಮಾಜದಲ್ಲಿ ಉತ್ಕೃಷ್ಟತೆ ನಿರ್ಧರಿಸುವಲ್ಲಿ ಭಾಷೆ ಮತ್ತು ಸಾಹಿತ್ಯ ಪ್ರಮುಖವಾಗಿದ್ದು, ಮೂಲ ಸಾಕ್ಷರತೆಯಿಂದ ಸಾಂಸ್ಕೃತಿಕ ಸಾಕ್ಷರತೆ ಹಾಗೂ ವಿಮರ್ಶಾತ್ಮಕ ವಿಚಾರಗಳನ್ನು ಸಮಾಜ ಮತ್ತು ಸರ್ಕಾರದೆದುರು ಮಂಡಿಸುವ ಉದ್ದೇಶದಿಂದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ ತಾಲೂಕು ಘಟಕ ಏರ್ಪಡಿಸಿದ್ದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದವರಿಗೆ ಉತ್ತಮ ವ್ಯಕ್ತಿತ್ವ ಹಾಗೂ ಭವಿಷ್ಯದ ಬದುಕು ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆರೋಗ್ಯಕರ ಆಲೋಚನೆಗಳು ಮತ್ತು ಶಿಸ್ತಿನ ನಡವಳಿಕೆಯೊಂದಿಗೆ ಯುವ ಮನಸ್ಸು ಗಳನ್ನು ಪೋಷಿಸುವ ಅವಶ್ಯಕತೆಯಿದೆ. ಸಾಹಿತ್ಯದಲ್ಲಿ ಸರಿ ಮತ್ತು ತಪ್ಪು ಕುರಿತು ಚರ್ಚಿಸುವ ಬದಲಾಗಿ ಕನ್ನಡ ಭಾಷೆಯಲ್ಲಿ ಕಲಿತಿರುವ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕಾಗಿದೆ ಎಂದರು.

ಇಂಗ್ಲಿಷ್ ಗಿಳಿಪಾಠ ನಿಲ್ಲಿಸಿ: ಇದಕ್ಕೂ ಮುನ್ನ ಸಮ್ಮೇಳನ ಉದ್ಘಾಟಿಸಿದ ಜಾನಪದ ವಿದ್ವಾಂಸ ಶಂಭು ಬಳಿಗಾರ ಮಾತನಾಡಿ, ಭಾಷೆ ಹೃದಯದಿಂದ ಬರಬೇಕು. ಭಾವನೆಗಳಿಲ್ಲದ ಇಂಗ್ಲೀಷ್ ಬೇಡ. ಶರಣ ಪರಂಪರೆ ಹಾಗೂ ಮಠಗಳು ಕನ್ನಡ ಶಾಲೆ ಗಳನ್ನು ಆರಂಭಿಸುವ ಮೂಲಕ ಉತ್ತಮವಾದ ವಾಗ್ಮಿಗಳನ್ನು ಚಿಂತಕರನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ್ದು ಕನ್ನಡ ಭಾಷೆ ಸಮೃದ್ಧಿಗೆ ಅಸಂಖ್ಯಾತ ಶರಣರ ಪ್ರಯತ್ನವಿದೆ. ಕಳೆದ 400 ವರ್ಷಗಳ ಹಿಂದೆ ಒಂದೂ ಕನ್ನಡ ಮಾಧ್ಯಮ ಶಾಲೆಗಳಿರಲಿಲ್ಲ. ಈಗಿನ ಕಲ್ಯಾಣ ಕರ್ನಾಟಕದಲ್ಲಿ ನಿಜಾಮರ ಒತ್ತಡಕ್ಕೆ ಉರ್ದು ಬಿಟ್ಟು ಕನ್ನಡ ಭಾಷೆ ಕಲಿಸುವಂತಿರಲಿಲ್ಲ ಎಂದರು.

ಕನ್ನಡ ಮನೆಯ ಭಾಷೆಯಾಗಲಿ:ಹಿರಿಯ ಸಾಹಿತಿ ಸಂಕಮ್ಮ ಮಾತನಾಡಿ, ಮಾತೃಭಾಷೆ ಕನ್ನಡವನ್ನು ಮನೆಯಿಂದಲೇ ಆರಂಭಿಸಬೇಕು. ಆದರೆ, ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡಿದ್ದರಿಂದ ಅನ್ಯಭಾಷಿಕರು ಕನ್ನಡ ಕಲಿಯಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಗಳು ಕನಿಷ್ಟ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ ಆ ಜಾಗವನ್ನು ಇಂಗ್ಲೀಷ್ ಆಕ್ರಮಿಸಲಿದ್ದು, ಮೂರನೇ ಭಾಷೆಯಾಗಿ ಹಿಂದಿ ಸ್ಥಾನ ಪಡೆದುಕೊಂಡಿದೆ ಎಂದರು.

ಸಮ್ಮೇಳನಾಧ್ಯಕ್ಷ ಜೀವರಾಜ ಛತ್ರದ ಮಾತನಾಡಿ, ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕಾದಲ್ಲಿ ರಾಜ್ಯದಲ್ಲಿರುವ ‘ಸಿ’ಗ್ರೇಡ್ ವಿದ್ಯಾರ್ಥಿಗಳನ್ನು ಗುರುತಿಸಿ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ, ನವೋದಯ ಇನ್ನಿತರ ವಸತಿ ಶಾಲೆಗಳನ್ನು ಮೀಸಲಿಡಬೇಕು, ಇಲ್ಲದೇ ಹೋದರೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಮುಂದಿನ ಹತ್ತು ವರ್ಷದಲ್ಲಿ ಹುಡುಕಬೇಕಾಗುತ್ತದೆ ಎಂದರು.

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷ ಸುಭಾಸ್ ಮಾಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಶೆಟ್ಟರ್, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೇಶೀಮಿ, ನಿವೃತ್ತ ಡಿಡಿಪಿಐ ಪ್ರಕಾಶ ಮನ್ನಂಗಿ, ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಬಿಇಒ ಎಸ್.ಜಿ. ಕೋಟಿ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ, ನಿಕಟಪೂರ್ವ ಅಧ್ಯಕ್ಷ ಮಾಲತೇಶ ಅರಳೀಮಟ್ಟಿ, ಸಮ್ಮೇಳನ ಪೂರ್ವಾಧ್ಯಕ್ಷ ಡಾ. ಪ್ರೇಮಾನಂದ ಲಕ್ಕಣ್ಣವರ, ಗಣ್ಯವರ್ತಕ ಬಸವರಾಜ ಸುಂಕಾಪುರ, ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಉದ್ಯಮಿ ವಿ.ವಿ. ಹಿರೇಮಠ, ತಹಸೀಲ್ದಾರ್ ಫಿರೋಜ್ ಸೋಮನಕಟ್ಟಿ, ನೌಕರರ ಸಂಘದ ಅಧ್ಯಕ್ಷ ಎಂ.ಎನ್. ಕಂಬಳಿ ಇನ್ನಿತರರಿದ್ದರು. ಎಸ್.ಬಿ. ಇಮ್ಮಡಿ ಸ್ವಾಗತಿಸಿದರು. ಡಿ.ಎನ್. ಅಲ್ಲಾಪೂರ ನಿರೂಪಿಸಿದರು, ಮಂಜುನಾಥ ಬೋವಿ ವಂದಿಸಿದರು.