ರಸ್ತೆಯ ಮೇಲೆ ಲಿಂಗಪೂಜೆ ಮಾಡುವುದು ಸರಿಯಲ್ಲ

| Published : Nov 21 2023, 12:45 AM IST

ಸಾರಾಂಶ

ಮಠಾಧೀಶರಾದವರು ಮಠದಲ್ಲಿರಬೇಕು. ನಿತ್ಯ ಸ್ನಾನ, ಪೂಜೆ, ಪ್ರಸಾದ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅದು ಬಿಟ್ಟು ರಸ್ತೆ ಮೇಲೆ ಕುಳಿತು ಲಿಂಗ ಪೂಜೆ ಮಾಡುರುವುದು ಸರಿಯಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿಗಳ ನಡೆಗೆ ಮಾಜಿ ಸಚಿವ ಕಳಕಪ್ಪ ಬಂಡಿ ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀ ವಿರುದ್ಧ ಮಾಜಿ ಸಚಿವ ಕಳಕಪ್ಪ ಬಂಡಿ ಆಕ್ರೋಶ

ಮುಂಡರಗಿ: ಮಠಾಧೀಶರಾದವರು ಮಠದಲ್ಲಿರಬೇಕು. ನಿತ್ಯ ಸ್ನಾನ, ಪೂಜೆ, ಪ್ರಸಾದ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅದು ಬಿಟ್ಟು ರಸ್ತೆ ಮೇಲೆ ಕುಳಿತು ಲಿಂಗ ಪೂಜೆ ಮಾಡುರುವುದು ಸರಿಯಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿಗಳ ನಡೆಗೆ ಮಾಜಿ ಸಚಿವ ಕಳಕಪ್ಪ ಬಂಡಿ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರ ತಾಲೂಕು ವೀರಶೈವ ಪಂಚಾಚಾರ್ಯ ವಿದ್ಯಾವರ್ಧಕ ಹಾಗೂ ಸಾಂಸ್ಕೃತಿಕ ಸಂಘ ಹಾಗೂ ಪಂಚಮಸಾಲಿ ವಿವಿಧ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ 200ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ರಸ್ತೆ ಮೇಲೆ ಕುಳಿತು ಲಿಂಗಪೂಜೆ ಮಾಡುವ ಕುರಿತು ನಾನು ಯಾರನ್ನೂ ಟೀಕೆ ಮಾಡುತ್ತಿಲ್ಲ. ಆದರೆ ನಾವು ನಡೆದುಕೊಳ್ಳುವ ರೀತಿ ಇನ್ನೊಬ್ಬರಿಗೆ ಸರಿ ಕಾಣುವಂತೆ ಇರಬೇಕು ಎಂದು ಪಂಚಮಸಾಲಿ 2ಎ ಮೀಸಲಾತಿಗಾಗಿ ಹೆದ್ದಾರಿಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಪೂಜೆ ಮಾಡುತ್ತಿರುವುದರ ಕುರಿತು ತಮ್ಮ ಮಾತಿನ ಮೂಲಕ ಪರೋಕ್ಷವಾಗಿ ಛಾಟಿ ಬೀಸಿದರು. ನಮ್ಮ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿಕೊಳ್ಳುವಂತೆ ತಿಳಿಸಿ ಬುದ್ಧಿ ಹೇಳುವುದು ನಮ್ಮ ಕಾರ್ಯಕ್ರಮಗಳ ಉದ್ದೇಶವಾಗಬೇಕೆ ಹೊರತು, ಮತ್ತೊಬ್ಬರನ್ನು ಟೀಕೆ ಮಾಡುವುದರಿಂದ ನಾವು ಎಂದಿಗೂ ಬೆಳೆಯಲು ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಜಿಲ್ಲಾ ಹಾಗೂ ತಾಲೂಕು ಪಂಚಮಸಾಲಿ ಸಮಾಜದ ಗುರುಹಿರಿಯರು, ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.