ಸಾರಾಂಶ
ತಾಲೂಕಿನ ದೇಶಿಪುರ ಕಾಲೋನಿ ಬಳಿ ಇತ್ತೀಚೆಗೆ ಕುರಿಗಾಹಿ ಗಿರಿಜನ ಮಹಿಳೆಯ ಬಲಿ ಪಡೆದ ದಾಳಿ ಕೋರ ಹುಲಿ ಸೆರೆಗೆ ಸಾಕಾನೆಗಳಾದ ರೋಹಿತ್, ಪಾರ್ತ ಸಾರಥಿ ಫೀಲ್ಡೀಗಿಳಿದಿವೆ.
ಗುಂಡ್ಲುಪೇಟೆ : ತಾಲೂಕಿನ ದೇಶಿಪುರ ಕಾಲೋನಿ ಬಳಿ ಇತ್ತೀಚೆಗೆ ಕುರಿಗಾಹಿ ಗಿರಿಜನ ಮಹಿಳೆಯ ಬಲಿ ಪಡೆದ ದಾಳಿ ಕೋರ ಹುಲಿ ಸೆರೆಗೆ ಸಾಕಾನೆಗಳಾದ ರೋಹಿತ್, ಪಾರ್ತ ಸಾರಥಿ ಫೀಲ್ಡೀಗಿಳಿದಿವೆ.
ಆದರೂ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ದಾಳಿ ಕೋರ ಹುಲಿಯ ಸುಳಿವು ಸಿಕ್ಕೇ ಇಲ್ಲ! ಹುಲಿ ದಾಳಿ ನಡೆಸಿದೆ ಎನ್ನಲಾದ ಗೆಜ್ಜಗಶೆಟ್ಟಿ ಹಳ್ಳ, ಆಲದ ಮರದ ಮುಂಟಿ ಭಾಗದಲ್ಲಿ ಭಾನುವಾರ ಎರಡು ಸಾಕಾನೆಗಳ ಜೊತೆ ಅರಣ್ಯ ಸಿಬ್ಬಂದಿಗಳು ಹುಲಿ ದಾಳಿ ನಡೆಸಿದ ಸುತ್ತ ಮುತ್ತ ಜಾಲಾಡಿದರೂ ಹುಲಿ ಸುಳಿವೂ ಇಲ್ಲ, ಹೆಜ್ಜೆಯ ಗುರುತೂ ಸಿಕ್ಕಿಲ್ಲ ಎನ್ನಲಾಗಿದೆ.
ಸಾಕಾನೆಗಳ ಜೊತೆ ಎಸ್ಟಿಪಿಎಫ್ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿಗಳು ಆಲದ ಮರದ ಮುಂಟಿ ಹಾಗೂ ಗೆಜ್ಜಗನಶೆಟ್ಟಿ ಹಳ್ಳದ ಸುತ್ತ ಮುತ್ತ ಕೂಂಬಿಂಗ್ ನಡೆಸಿದರೂ ಹುಲಿ ಕುರಿತು ಯಾವುದೇ ಎಳ್ಳಷ್ಟು ಕುರುಹುಗಳು ಸಿಕ್ಕಿಲ್ಲ ಇದು ಅರಣ್ಯ ಇಲಾಖೆ ತಲೆ ನೋವಾಗಿ ಪರಿಣಮಿಸಿದೆ. ಪ್ರತಿ ನಿತ್ಯ ಕಳೆದ ಮೂರು ದಿನಗಳಿಂದ ಘಟನೆ ನಡೆದ ಸ್ಥಳದ ಸುತ್ತ ಮುತ್ತ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಹುಲಿಯ ಯಾವುದೇ ಸುಳಿವು ಕಾಣಿಸಿಕೊಂಡಿಲ್ಲ ಎಂದು ಬಂಡೀಪುರ ಅರಣ್ಯ ಇಲಾಖೆಯ ಗುಂಡ್ಲುಪೇಟೆ ಉಪ ವಿಭಾಗದ ಎಸಿಎಫ್ ಸುರೇಶ್ ಕನ್ನಡಪ್ರಭಕ್ಕೆ ತಿಳಿಸಿದರು.
ಶಾಸಕರ ತವರೂರಲ್ಲಿ ಚಿರತೆ ಪ್ರತ್ಯೇಕ್ಷ!
ಗುಂಡ್ಲುಪೇಟೆ : ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತವರಾದ ಹಾಲಹಳ್ಳಿ-ನಿಟ್ರೆ ರಸ್ತೆ ಬಾಳೆ ತೋಟದಲ್ಲಿ ಚಿರತೆ/ಹುಲಿ ಬಿಸಿಲಿಗೆ ಮೈಯೊಡ್ಡಿ ಭಾನುವಾರ ಬೆಳ್ಳಂ ಬೆಳಗ್ಗೆ ಕಾಣಿಸಿಕೊಳ್ಳುವ ಮೂಲಕ ರೈತರು ಹಾಗೂ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್ ತೋಟದ ಬಳಿ ತೋಟಪ್ಪ ಅವರ ಬಾಳೆ ತೋಟದ ಪಂಪ್ ಹೌಸ್ ಮೇಲೆ ಚಿರತೆ ಕಾಣಿಸಿಕೊಂಡಿದ್ದನ್ನು ಕಂಡು ಸಾರ್ವಜನಿಕರ ಹೌಹಾರಿದ್ದಾರೆ. ಅಷ್ಟೊತ್ತಿಗೆ ವಾಯು ವಿಹಾರಿಗಳು ಸೇರಿದ್ದಾರೆ.
ಚಿರತೆ ಅಥವಾ ಹುಲಿ ಅಲ್ಲಿಯೇ ಮಲಗಿತ್ತು. ಗ್ರಾಮಸ್ಥರ ಪ್ರಕಾರ ಅದು ಹುಲಿ ಎಂದು ಹೇಳುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಚಿರತೆ ಎಂದು ಸ್ಪಷ್ಟಪಡಿಸುತ್ತಿದ್ದಾರೆ. ಚಿರತೆಯೋ, ಹುಲಿಯೋ ಅದು ವಿಚಾರವಲ್ಲ. ಜನರು, ರೈತರು ಸಂಚರಿಸುವ ಹಾಲಹಳ್ಳಿ-ನಿಟ್ರೆ ರಸ್ತೆಯ ಬದಿಯ ತೋಟದಲ್ಲಿ ಕಾಣಿಸಿಕೊಂಡಿದೆ ಒಂದು ವೇಳೆ ಜನರ ಮೇಲೆ ಏನಾದರು ದಾಳಿ ನಡೆಸಿ ಅನಾಹುತವಾಗುತ್ತದೆ ಎಂಬ ಆತಂಕದಲ್ಲಿ ಜನರು ಇದ್ದಾರೆ. ವಿಷಯ ತಿಳಿದ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯ ಸಿಬ್ಬಂದಿಗಳ ತೋಟಪ್ಪ ಬಾಳೆ ತೋಟದ ಸುತ್ತ ಮುತ್ತಲೂ ಹುಡುಕಾಟ ನಡೆಸಿದಾಗ ಚಿರತೆಯ ಹೆಜ್ಜೆ ಗುರುತು ಕಾಣಿಸಿಕೊಂಡಿವೆ ಎಂದು ಎಸಿಎಫ್ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಒಬ್ಬಂಟಿಯಾಗಿ ಓಡಾಡಬೇಡಿ
ಗುಂಡ್ಲುಪೇಟೆ : ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರು ಮಧ್ಯಾಹ್ನ ಮತ್ತು ರಾತ್ರಿ ಸಮಯದಲ್ಲಿ ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು,ಮಕ್ಕಳು ಯಾವುದೇ ಕಾರಣಕ್ಕೂ ಒಬ್ಬಂಟಿಯಾಗಿ ಓಡಾಡಬೇಡಿ ಹಾಗೂ ಜಾನುವಾರುಗಳು ಜಾನುವಾರು ಹಿಡಿದುಕೊಂಡು ಜಮೀನು,ಹಿತ್ತಲುಗಳು ಹಾಗೂ ಕಾಡಿನ ಪ್ರದೇಶದ ಕಡೆ ಹೋಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬು ಮನವಿ ಮಾಡಿದ್ದಾರೆ.
ಚಿಕ್ಕಾಟಿ ಗ್ರಾಪಂ ಅಧ್ಯಕ್ಷ ಜಮೀನಿನಲ್ಲಿ ಚಿರತೆ ಪ್ರತ್ಯೇಕ್ಷ ಗುಂಡ್ಲುಪೇಟೆ : ತಾಲೂಕಿನ ಅರೇಪುರ ಗ್ರಾಮದ ನಿವಾಸಿ, ಚಿಕ್ಕಾಟಿ ಗ್ರಾಪಂ ಅಧ್ಯಕ್ಷ ವಿ.ಮಹದೇವಕುಮಾರ್ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹದೇವಮ್ಮನಿಗೆ ಚಿರತೆ ಕಾಣಿಸಿಕೊಂಡಾಗ ಮಹದೇವಮ್ಮ ಕೂಗಾಡಿಕೊಂಡು ರಸ್ತೆಯತ್ತ ದಾವಿಸಿದ್ದಾರೆ. ವಿಷಯ ತಿಳಿದ ಬಫರ್ ಜೋನ್ ವಲಯದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿವೆ ಎಂದು ಹೇಳಿದ್ದಾರೆ ಎಂದು ಎಸಿಎಫ್ ಸುರೇಶ್ ತಿಳಿಸಿದರು.