ಲೋಕ ಅದಾಲತ್‌, ಸಂಚಾರಿ ಇ-ಚಲನ್‌ ದಂಡದ ರಿಯಾಯ್ತಿ ಪಡೆಯಿಸಿ

| Published : Sep 08 2025, 01:01 AM IST

ಸಾರಾಂಶ

ಜುಲೈ 1 ರಿಂದ ಅಕ್ಟೋಬರ್ 7ರ ವರೆಗೆ ದೇಶದ ಎಲ್ಲ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಮಧ್ಯಸ್ಥಿಕೆ, ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ-90 ದಿನಗಳ ವಿಶೇಷ ಅಭಿಯಾನ ಆಯೋಜಿಸಲಾಗಿದೆ.

ಧಾರವಾಡ: ಜಿಲ್ಲೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಲೋಕ ಅದಲಾತ್ ಕಾರ್ಯಕ್ರಮವನ್ನು ಕಕ್ಷಿದಾರರು ಹಾಗೂ ನ್ಯಾಯವಾದಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಜತೆಗೆ ಸುಪ್ರಿಂಕೋರ್ಟ್‌ ಆದೇಶದ ಮೇರೆಗೆ ರಾಷ್ಟ್ರದ್ಯಂತ ಜಾರಿಯಲ್ಲಿರುವ ಇ-ಚಲನ್ ಮೂಲಕ ಸಂಚಾರಿ ಠಾಣೆಯವರು ವಿಧಿಸಿದ ದಂಡದ ಮೊತ್ತದಲ್ಲಿ ರಿಯಾಯ್ತಿಯನ್ನು ಉಪಯೋಗಿಸಿ ಪ್ರಕರಣ ಮುಕ್ತಾಯಗೊಳಿಸಲು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ತಿಳಿಸಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 1 ರಿಂದ ಅಕ್ಟೋಬರ್ 7ರ ವರೆಗೆ ದೇಶದ ಎಲ್ಲ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಮಧ್ಯಸ್ಥಿಕೆ, ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ-90 ದಿನಗಳ ವಿಶೇಷ ಅಭಿಯಾನ ಆಯೋಜಿಸಲಾಗಿದೆ. ರಾಷ್ಟ್ರೀಯ ಲೋಕ ಅದಾಲತ್‌ದಲ್ಲಿ ಭಾಗವಹಿಸುವುದರಿಂದ ಬಹಳ ದಿನಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳು ಇತ್ಯರ್ಥವಾಗುತ್ತವೆ. ಇದರಿಂದಾಗಿ ಕಕ್ಷಿದಾರರಿಗೆ ಆಗುವ ಅನಗತ್ಯ ವಿಳಂಬ ಮತ್ತು ವೆಚ್ಚ ತಪ್ಪುತ್ತದೆ. ಆದ್ದರಿಂದ ಲೋಕ ಅದಾಲತ್ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಸಾರ್ವಜನಿಕರಿಗೆ ಸಹಕಾರವಾಗುತ್ತದೆ ಎಂದು ಅವರು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಿಗಿ ಮಾತನಾಡಿ, ಇದು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಲೋಕ ಅದಾಲತ್ ಅವಕಾಶ ನೀಡುತ್ತದೆ. ಇಲ್ಲಿ ಕಕ್ಷಿದಾರರು ನೇರವಾಗಿ ಸಂಧಾನಕಾರರೊಂದಿಗೆ ಮಾತುಕತೆ ನಡೆಸಿ, ಒಮ್ಮತಕ್ಕೆ ಬರುವ ಅವಕಾಶವಿದೆ. ಇದರಿಂದ ಕಾನೂನು ಪ್ರಕ್ರಿಯೆಯ ಸಂಕೀರ್ಣತೆಗಳು ಕಡಿಮೆಯಾಗಿ, ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಮಾತನಾಡಿ, ಲೋಕ ಅದಾಲತ್ ನ್ಯಾಯಾಂಗದ ಮೇಲಿನ ಕೆಲಸದ ಹೊರೆಯನ್ನು ಕಡಿಮೆ ಮಾಡುವ ಜತೆಗೆ, ಕಕ್ಷಿದಾರರಿಗೆ ತ್ವರಿತ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.