ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಹೊರತರಲು ಮಹಾತ್ಮ ಗಾಂಧಿ ಅವರ ಸ್ವಾರ್ಥರಹಿತ ಹೋರಾಟ ಕುರಿತು ಸುಳ್ಳು ಹರಡಿಸುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ನುಡಿದಿದ್ದಾರೆ.ನಗರದ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನಿಕೇತನದಲ್ಲಿ ಮಹಾತ್ಮಗಾಂಧಿ ದಿನಾಚರಣೆ ಆಂಗವಾಗಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀಶಾರದದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಪಾವಗಡ, ಶ್ರೀಸಿದ್ದಗಂಗಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು, ತುಮಕೂರು ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಶೋಧನಾ ಕೇಂದ್ರ ಮಹಾತ್ಮಗಾಂಧಿ ಅವರ 156ನೇ ಜಯಂತಿ ಹಾಗೂ ಕುಷ್ಠ ರೋಗಿಗಳಿಗೆ ನೂತನ ವಸ್ತ್ರ, ಸಾಧನ ಸಲಕರಣೆ, ಶುಚಿತ್ವ ಕಿಟ್, ಪಾದರಕ್ಷೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ, ಸಂವಿಧಾನಾತ್ಮಕ ಹಕ್ಕುಗಳು ಮಹಾತ್ಮಗಾಂಧಿ ಅವರ ಹೋರಾಟದಿಂದ ದೊರೆತ ಪ್ರತಿಫಲಗಳು. ಇಂತಹ ಪ್ರಾಮಾಣಿಕ ವ್ಯಕ್ತಿಯನ್ನು,ಅವರ ಸಾವಿನ ನಂತರ ಅತ್ಯಂತ ತುಚ್ಚವಾಗಿ ಕಾಣಲಾಗುತ್ತಿದೆ. ಅವರ ಬಗ್ಗೆ ಇಲ್ಲಸಲ್ಲದೆ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇದರ ವಿರುದ್ಧ ಯುವಜನರಲ್ಲಿ ಜಾಗೃತಿ ಮೂಡಬೇಕಿದೆ. ಗಾಂಧಿಯ ಬದುಕನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಮುನ್ನೆಡೆಯುವ ಕೆಲಸ ಆಗಬೇಕು. ಗಾಂಧಿಯ ಮಾರ್ಗದಲ್ಲಿಯೇ ಅಶಕ್ತರು, ನಿರ್ಗತಿಕರು, ಬಡವರು, ರೋಗಿಗಳ ಸೇವೆ ಮಾಡುತ್ತಿರುವ ಪಾವಗಡದ ಶ್ರೀಜಪಾನಂದಜೀ ಅವರು, ಪದವಿ ಕಾಲೇಜು ಮಕ್ಕಳಿಗೆ ಬಿಸಿಯೂಟ, ಪ್ರಕೃತಿ ವಿಕೋಪಗಳಿಂದ ನೊಂದವರಿಗೆ ನೆರವು ನೀಡುತ್ತಿರುವ ಶ್ರೀಜಪಾನಂದಜೀ ಇತರೆ ಶ್ರೀಗಳಿಗಿಂತ ಭಿನ್ನವಾಗಿದ್ದಾರೆ ಎಂದು ಮುರುಳೀಧರ ಹಾಲಪ್ಪ ನುಡಿದರು.ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಸವಯ್ಯ ಮಾತನಾಡಿ, 2025 ರ ನವೆಂಬರ್ 25ಕ್ಕೆ ಮಹಾತ್ಮಗಾಂಧಿ ಅವರು ತಮ್ಮ ಆತ್ಮಚರಿತ್ರೆ ಬರೆದು 100 ವರ್ಷತುಂಬಲಿದೆ. ಹಾಗಾಗಿ ನಮ್ಮ ಕಾಲೇಜಿನ ವತಿಯಿಂದ ಗಾಂಧೀಜಿಯವರ ಆತ್ಮಚರಿತ್ರೆ ಕುರಿತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ. ಉತ್ತರ ಬರಹಕ್ಕೆ ಬಹುಮಾನ ನೀಡಲಾಗುವುದು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದಜೀ ಆಶೀರ್ವಚನ ನೀಡಿ,ಇಂದು ನಮ್ಮಯುವಕರು ಸಿನಿಮಾ ನಟರನ್ನುತಮ್ಮ ಮಾದರಿಯಾಗಿ ಸ್ವೀಕರಿಸಿದ್ದಾರೆ. ಇದರ ಫಲವಾಗಿ ದೇಶದಲ್ಲಿ ಶಾಂತಿ, ನೆಮ್ಮದಿ ಹಾಳಾಗಿದೆ. ದೇಶದಲ್ಲಿ ಮತ್ತೊಮ್ಮೆ ಶಾಂತಿ ನೆಮ್ಮದಿ ನೆಲೆಸಬೇಕೆಂದರೆ ನಾವು ಗಾಂಧಿತತ್ವಕ್ಕೆ ಮೊರೆ ಹೋಗಬೇಕಾದ ಅನಿವಾರ್ಯತೆಇದೆ.ನಾನು, ನನ್ನದು ಎಂಬ ಸ್ವಾರ್ಥ ಇಂದಿನ ಯುವಕರಲ್ಲಿ ಮನೆ ಮಾಡಿದೆ.ಭಾರತದ ಸ್ವಾತಂತ್ರಕ್ಕಾಗಿ ಮನೆ, ಮಠತೊರೆದು, ಹತ್ತಾರು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಮಹಾತ್ಮ ಗಾಂಧಿಯವರನ್ನು ಅವಹೇಳನ ಮಾಡುವುದು ಈ ದೇಶಕ್ಕೆ ಭವಿಷ್ಯವಿಲ್ಲ ಎಂಬುದನ್ನುತೋರಿಸುತ್ತದೆ ಎಂದರು.ಈ ದೇಶ ಮುಂದುವರೆದಿದೆ ಎಂದು ಕೆಲವರು ಭ್ರಮೆಯಲ್ಲಿ ಮಾತನಾಡುತ್ತಾರೆ. ಆದರೆ ನಿಜವಾದ ಭಾರತವಿರುವುದು ಹಳ್ಳಿಗಳಲ್ಲಿ. ಇಂದಿಗೂ ಹಳ್ಳಿಯ ಜನಒಂದು ಹೊತ್ತಿನ ಕೂಳಿಗೆ ಪರಿತಾಪ ಪಡುತ್ತಿದ್ದಾರೆ. ಒಳ್ಳೆಯ ಆಸ್ಪತ್ರೆಗಳಿಲ್ಲ.ಇದ್ದರೂ ಗುಣಮಟ್ಟದ ಚಿಕಿತ್ಸೆಯಿಲ್ಲ. ಭರಿಸಲಾಗದ ಶುಲ್ಕದಿಂದ ರೋಗವನ್ನೇ ನುಂಗಿ ಜನ ಬದುಕುತಿದ್ದಾರೆ. ಗಾಂಧಿಯ ವಿಚಾರಧಾರೆಗಳನ್ನು ಮರೆತಿದ್ದರ ಪರಿಣಾಮ ಇಂದು ಎಲ್ಲೆಡೆ ಆಶಾಂತಿ ಮನೆ ಮಾಡಿದೆ.ದೇಷ, ಅಸೂಯೆ ಮನೆ ಮಾಡಿದೆ. ಹಾಗಾಗಿ ನಾವೆಲ್ಲರೂ ಗಾಂಧಿ ವಿಚಾರಧಾರೆಗಳಿಗೆ ಮತ್ತೆ ಮರಳಬೇಕಿದೆ ಎಂದು ಶ್ರೀಜಪಾನಂದಜೀ ತಿಳಿಸಿದರು.
ಇದೇ ವೇಳೆ ಕ್ಷಯ, ಕುಷ್ಠ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಬಟ್ಟೆ, ಪೌಷ್ಠಿಕ ಆಹಾರದ ಕಿಟ್, ಪಾದರಕ್ಷೆ ಸೇರಿದಂತೆ ಹಲವು ಸವಲತ್ತುಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಸಿದ್ದಗಂಗಾ ಆಸ್ಪತ್ರೆಯ ಡಾ.ಎಂ.ಎನ್. ಸಂಜೀವಕುಮಾರ್, ಡಾ.ಚಂದ್ರಕಲಾ ಜಿ.ಆರ್, ಡಾ.ಅಭಿಷೇಕ್ ಡಿ., ಡಾ.ಕೀರ್ತಿ ಅಭಿಷೇಕ್, ಡಾ.ಸ್ವಾತಿ ಎಂ., ಕೆ,ಶೋಭಾ, ಕೆ.ಜಯಶ್ರೀ, ಕೆ.ಎನ್.ಲಕ್ಷಿ, ಎಂ.ಎಸ್.ನಾಗರಾಜು, ವೀರೇಶ್ ಮತ್ತಿತರರು ಪಾಲ್ಗೊಂಡಿದ್ದರು.