ಕನ್ನಡದ ಉಳಿವಿಗಾಗಿ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ : ಸಿಎಂ ಸಿದ್ದರಾಮಯ್ಯ

| Published : Dec 21 2024, 10:06 AM IST

Siddaramaiah

ಸಾರಾಂಶ

ಕನ್ನಡ ಭಾಷೆ ಉಳಿಯಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕಿದ್ದ, ಇದರ ಜತೆಗೆ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಡ್ಯ  : ಕನ್ನಡ ಭಾಷೆ ಉಳಿಯಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕಿದ್ದ, ಇದರ ಜತೆಗೆ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಡ್ಯದಲ್ಲಿ ಶುಕ್ರವಾರ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಸಮಸ್ಯೆಗಳು ಇವೆ. ಮಕ್ಕಳಿಗೆ ಮೆದುಳು, ಕರುಣೆ ಮತ್ತು ಕೌಶಲ್ಯ ವೂ ಇರುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು. ಈಗಿನ ಶಿಕ್ಷಣ ವ್ಯವಸ್ಥೆ ವೈದಿಕ ಶಿಕ್ಷಣ ವ್ಯವಸ್ಥೆಯಂತೆಯೇ ಬಾಯಿಪಾಠ ಮಾಡುವ, ಉಪಯೋಗವಿಲ್ಲದ ವ್ಯವಸ್ಥೆಯಾಗಿದೆ. ಕನ್ನಡ ಉಳಿಯಬೇಕಾದ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾಯಿಸಿ ಮಕ್ಕಳನ್ನು ಕನ್ನಡ ಶಾಲೆಗೆ ಸೆಳೆಯಬೇಕಿದೆ. ಆಗ ಮಾತ್ರ ಕನ್ನಡದಲ್ಲಿ ಯೋಚಿಸುವ, ಸಂಶೋಧನೆ ಮಾಡುವ, ಉತ್ಪಾದನೆ ಮತ್ತು ಮಾರುಕಟ್ಟೆ ಮಾಡುವ ಭಾಷೆಯಾಗಿ ಬೆಳೆಯುತ್ತದೆ ಎಂದರು.

ಕನ್ನಡ ನೆಲದಲ್ಲಿ ಕನ್ನಡವೇ ಸಾರ್ವಭೌಮ. ಅನ್ಯಭಾಷಿಕರನ್ನುಅವರದ್ದೇ ಭಾಷೆಯಲ್ಲಿ ಮಾತನಾಡಿಸದೆ ಅವರಿಗೆ ಕನ್ನಡ ಕಲಿಸುವ ಕಾರ್ಯ ಆಗಬೇಕು. ಈ ಸಮ್ಮೇಳನ ನಾಡಿನ ಸಮಸ್ಯೆಗೆ ಉತ್ತರ ಹುಡುಕುವ ಸಮ್ಮೇಳನವಾಗಬೇಕು ಎಂದರು.

ಇಂಗ್ಲಿಷ್‌ ಸೇರಿ ಪ್ರಮುಖ ಭಾಷೆಗಳ ಕೃತಿಗಳು ಡಿಜಿಟಲೀಕರಣಗೊಂಡು ಜಗತ್ತಿನ ಎಲ್ಲೆಡೆ, ಎಲ್ಲರಿಗೂ ಮುಕ್ತವಾಗಿ ಲಭ್ಯವಾಗಿವೆ. ಅದೇ ರೀತಿ ಸಮಗ್ರ ಕನ್ನಡ ಸಾಂಸ್ಕೃತಿಕ ಲೋಕದ ಡಿಜಿಟಲೀಕರಣ ಕಾರ್ಯ ಕೈಗೊಂಡು ಸಾಹಿತ್ಯಿಕ ಡಾಟಾಬೇಸ್‌ ಅನ್ನು ತಯಾರಿಸುವ ಮಹತ್ವದ ಕಾರ್ಯ ಆರಂಭಿಸಲಾಗಿದೆ. ಕನ್ನಡ ಸಮಗ್ರ ಕನ್ನಡ ಭಾಷಾ ಬಳಕೆ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಬಹುಮುಖಿ ಸವಾಲು:

ಇಂದಿನ ಕಾಲಘಟ್ಟದಲ್ಲಿ ಕನ್ನಡದ ಸವಾಲುಗಳು ಬಹುಮುಖಿಯಾಗಿದ್ದು ಇವೆಲ್ಲವನ್ನೂ ಕಾನೂನಿನ ವ್ಯಾಪ್ತಿಯಲ್ಲಿ ತಂದು ಮೊದಲ ಪ್ರಾಶಸ್ತ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. 2013-18ರವರೆಗೆ 1161 ಕೋಟಿ ರು.ಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿದ್ದೆವು. 2023-24 ಮತ್ತು 2024-25ರಲ್ಲಿ 506 ಕೋಟಿ ರು.ಗಳನ್ನು ನೀಡಲಾಗಿದೆ, ಈ ಮೂಲಕ ಕನ್ನಡ ನಾಡು, ನುಡಿ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಆಡಳಿತ ಭಾಷೆಯಾಗಿ ಕನ್ನಡಕ್ಕೆ ಬದ್ಧ:

ಆಡಳಿತದಲ್ಲಿ ಕನ್ನಡ ಭಾಷೆ ಬಳಕೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮಂತ್ರಿಮಂಡಲದ ನಿರ್ಣಯಗಳು, ಮಂತ್ರಿಗಳು ಟಿಪ್ಪಣಿಗಳು, ಮಂತ್ರಿ ಮಂಡಲದ ತೀರ್ಮಾನಗಳು. ವಿಧಾನಸಭೆಯ ವಿಧೇಯಕಗಳು ಕನ್ನಡದಲ್ಲಿದ್ದರೆ ಕನ್ನಡದಲ್ಲಿ ಆಡಳಿತ ನಡೆಸಲು ಸಹಕಾರಿಯಾಗಲಿದೆ. ನಮ್ಮ ಎಲ್ಲ ಅಧಿಕಾರಿಗಳು ಆಡಳಿತದಲ್ಲಿ ಕನ್ನಡ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು

ಸಮ್ಯೆಗೆ ಉತ್ತರ ಹುಡುಕೋ ಸಮ್ಮೇಳನವಾಗಲಿ:

ಮಂಡ್ಯದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಮಾಮೂಲಿ ಸಮ್ಮೇಳನವಾಗದೆ, ನಾಡಿನ ಸಮಸ್ಯೆಗಳಿಗೆ ಉತ್ತರ ಹುಡುಕುವ ಸಮ್ಮೇಳನವಾಗಲಿ. ಮಂಡ್ಯದಲ್ಲಿ ಕೆಲ ದ್ವೇಷವಾದಿ, ಹಿಂಸಾವಾದಿ ಶಕ್ತಿಗಳು ಸೇರಿಕೊಂಡು ಜನರ ಮನಸ್ಸಿನಲ್ಲಿ ದ್ವೇಷದ ವಿಷಬೀಜ ಬಿತ್ತಲು ಪ್ರಯತ್ನಿಸಿದವು. ಆದರೆ, ಸಕ್ಕರೆ ಮತ್ತು ಸಿಹಿಬೆಳೆಯುವ ಮಂಡ್ಯದ ಜನರು, ವಿಷ ಹಾಕಲು ಬಂದವರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಇತಿಹಾಸದಲ್ಲಿ ಮತ್ತೊಮ್ಮೆ ಮಂಡ್ಯದ ಜನ ನಾವು ಸಿಹಿ ನೀಡುವವರೇ ಹೊರತು ವಿಷ ನೀಡುವವರಲ್ಲ ಎಂದು ಸಾಬೀತು ಪಡಿಸಿದ್ದಾರೆ. ಮಂಡ್ಯದ ಜನರನ್ನು ನಾಡಿನ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.